
ಬೆಂಗಳೂರು: ಅಕ್ರಮ ಹಣ ವರ್ಗಾವಣೆಯ ಹೆಸರಿನಲ್ಲಿ ‘ಡಿಜಿಟಲ್ ಅರೆಸ್ಟ್’ ಮಾಡುವುದಾಗಿ ವೃದ್ಧರೊಬ್ಬರನ್ನು ಬೆದರಿಸಿ ₹1.32 ಕೋಟಿಯನ್ನು ಸೈಬರ್ ವಂಚಕರು ದೋಚಿದ್ದಾರೆ. ಈ ಸಂಬಂಧ ಈಶಾನ್ಯ ವಿಭಾಗದ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಡಿ.6ರಂದು ಪ್ರಕರಣ ದಾಖಲಾಗಿದೆ.
87 ವರ್ಷದ ಯಲಹಂಕದ ನಿವಾಸಿ, ನಿವೃತ್ತ ನೌಕರ ಸುಂದರ್ರಾಜನ್ ಅವರು ನೀಡಿದ ದೂರಿನ ಮೇರೆಗೆ ಮಾಹಿತಿ ತಂತ್ರಜ್ಞಾನ ಕಾಯ್ದೆ–2008 ಹಾಗೂ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಸೆಕ್ಷನ್ 308(2), 318(4), 319(2)ರ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ನ.19ರಂದು ಅಪರಿಚಿತ ವ್ಯಕ್ತಿಗಳು ಮೂರು ಪ್ರತ್ಯೇಕ ಮೊಬೈಲ್ ಸಂಖ್ಯೆಗಳಿಂದ ವಾಟ್ಸ್ಆ್ಯಪ್ ಕರೆ ಮಾಡಿ, ‘ತಾವು ಮುಂಬೈ ಅಪರಾಧ ವಿಭಾಗದ ಪೊಲೀಸರು’ ಎಂದು ಹೇಳಿದ್ದರು. ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವಾಗ 256 ಆಧಾರ್ ಕಾರ್ಡ್ಗಳು ಲಭ್ಯವಿದ್ದು, ಅದರಲ್ಲಿ ತಮ್ಮ ಆಧಾರ್ ಕಾರ್ಡ್ ಸಹ ಸಿಕ್ಕಿದೆ. ತನಿಖೆಗಾಗಿ ಮುಂಬೈಗೆ ಬರಬೇಕೆಂದು ಎಸಿಪಿ ಎಂದು ಪರಿಚಯಿಸಿಕೊಂಡಿದ್ದ ವಂಚಕ ಸುಂದರ್ರಾಜನ್ ಅವರನ್ನು ಬೆದರಿಸಿದ್ದ ಎಂದು ಪೊಲೀಸರು ಹೇಳಿದರು.
ವಿಡಿಯೊ ಕರೆಯಲ್ಲಿಯೇ ಪರಿಶೀಲನೆ: ‘ಕೆಲವು ನಿಮಿಷ ಕಳೆದ ಮೇಲೆ ಮತ್ತೆ ಕರೆ ಮಾಡಿದ್ದ ಸೈಬರ್ ವಂಚಕರು, ತಾವು ಹಿರಿಯ ನಾಗರಿಕರು ಆಗಿರುವ ಕಾರಣಕ್ಕೆ ಮುಂಬೈಗೆ ಬರುವುದು ಬೇಡ. ವಿಡಿಯೊ ಕರೆಯ ಮೂಲಕವೇ ಎಲ್ಲ ದಾಖಲೆಗಳನ್ನು ಪರಿಶೀಲನೆ ನಡೆಸುತ್ತೇವೆ. ನಮ್ಮ ಅನುಮತಿ ಇಲ್ಲದೇ ಯಾರೊಂದಿಗೆ ಮಾತನಾಡುವಂತಿಲ್ಲ. ಬೇರೆ ಯಾರಿಗೂ ತನಿಖೆಯ ಮಾಹಿತಿ ನೀಡುವಂತಿಲ್ಲ’ ಎಂಬುದಾಗಿ ಬೆದರಿಸಿದ್ದರು. ವಿಷಯ ಬಹಿರಂಗಪಡಿಸಿದರೆ ತಮ್ಮನ್ನು ಬಂಧನ ಮಾಡುವುದಾಗಿ ಹೇಳಿದ್ದರು. ಕರೆ ಮಾಡಿದ ವ್ಯಕ್ತಿಗಳು ನಿಜವಾದ ಪೊಲೀಸರು ಎಂಬುದಾಗಿ ದೂರುದಾರರು ನಂಬಿದ್ದರು ಎಂದು ಸೈಬರ್ ಅಪರಾಧ ವಿಭಾಗದ ಅಧಿಕಾರಿಯೊಬ್ಬರು ಹೇಳಿದರು.
‘ಮತ್ತೆ ಕರೆ ಮಾಡಿದ್ದ ಸೈಬರ್ ವಂಚಕರು, ನಿಮ್ಮ ಖಾತೆಯಲ್ಲಿರುವ ಹಣವನ್ನು ಆರ್ಬಿಐ ಕಡೆಯಿಂದ ಪರಿಶೀಲನೆ ನಡೆಸಬೇಕು. ನಾವು ನೀಡುವ ಸರ್ಕಾರಿ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡಬೇಕು. ಪರಿಶೀಲನೆಯ ಬಳಿಕ, ಹಣವನ್ನು ವಾಪಸ್ ಹಾಕುತ್ತೇವೆ ಎಂಬುದಾಗಿ ವಂಚಕರು ಹೇಳಿದ್ದರು’ ಎಂದು ಮೂಲಗಳು ಹೇಳಿವೆ.
ಮೂರು ಖಾತೆಗಳಿಗೆ ಹಣ ವರ್ಗಾವಣೆ: ನ.19ರಿಂದ ಡಿ.6ರ ವರೆಗೆ ದೂರುದಾರರು, ತಮ್ಮ ಎರಡು ಬ್ಯಾಂಕ್ ಖಾತೆಗಳಿಂದ ಸೈಬರ್ ವಂಚಕರು ನೀಡಿದ ಬೇರೆ ಬೇರೆ ಬ್ಯಾಂಕ್ನ ಖಾತೆಗಳಿಗೆ ಹಂತ ಹಂತವಾಗಿ ₹1.32 ಕೋಟಿ ವರ್ಗಾವಣೆ ಮಾಡಿದ್ದರು. ಅದಾದ ಮೇಲೆ ದೂರುದಾರರಿಗೆ ಸೈಬರ್ ವಂಚನೆ ನಡೆದಿರುವುದು ಗೊತ್ತಾಗಿ, ಎನ್ಸಿಆರ್ಪಿ ಪೋರ್ಟಲ್ 1930ಗೆ ಕರೆ ಮಾಡಿ ದೂರು ನೀಡಿದ್ದರು. ಬಳಿಕ ಎಫ್ಐಆರ್ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.