ಬೆಂಗಳೂರು: ಮುಂಬೈ ಪೊಲೀಸ್ ಹಾಗೂ ಇ. ಡಿ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿರುವ ಸೈಬರ್ ವಂಚಕರು, 'ಡಿಜಿಟಲ್ ಅರೆಸ್ಟ್' ಹೆಸರಿನಲ್ಲಿ ಸಾಫ್ಟ್ವೇರ್ ಎಂಜಿನಿಯರ್ಗೆ ಬೆದರಿಸಿ, ₹34 ಲಕ್ಷ ಸುಲಿಗೆ ಮಾಡಿದ್ದಾರೆ.
ಬಾಬುಸಾಬ್ಪಾಳ್ಯದ ಮಲ್ಲಪ್ಪಲೇಔಟ್ ನಿವಾಸಿ ರಾಜಶೇಖರ ರೆಡ್ಡಿ ಅವರ ದೂರಿನ ಮೇರೆಗೆ ಪೂರ್ವ ವಿಭಾಗದ ಸೈಬರ್ ಕ್ರೈಂ ಪೊಲೀಸರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.
ಖಾಸಗಿ ಕಂಪನಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ರಾಶೇಖರ ರೆಡ್ಡಿ ಅವರಿಗೆ ಜುಲೈ 5ರಂದು ಕರೆ ಮಾಡಿದ ಅಪರಿಚಿತ ವ್ಯಕ್ತಿಗಳು, ‘ನಿಮ್ಮ ಹೆಸರಿನಲ್ಲಿರುವ ಸಿಮ್ ಕಾರ್ಡ್ ಬಳಸಿಕೊಂಡು ಕೆಲವರಿಗೆ ಕಿರುಕುಳದ ಮೇಸೆಜ್ ಕಳುಹಿಸುತ್ತಿರುವ ಬಗ್ಗೆ ಮುಂಬೈನ ಕೊಬಾಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ರೀತಿಯ ಪ್ರಕರಣದಲ್ಲಿ ನೀವು ಭಾಗಿಯಾಗಿಲ್ಲ ಎಂಬುದಕ್ಕೆ ನಿರಾಪೇಕ್ಷಣಾ ಪತ್ರ(ಎನ್ಒಸಿ) ನೀಡಲಾಗುವುದು. ಅದಕ್ಕಾಗಿ ಕಾರ್ಡ್ ನಂಬರ್ ಕಳುಹಿಸಿಕೊಡಿ’ ಎಂದು ತಿಳಿಸಿದ್ದರು.
ನಂತರ ವಾಟ್ಸ್ಆ್ಯಪ್ ಮೂಲಕ ಸಂಪರ್ಕಕ್ಕೆ ಬಂದ ಅಪರಿಚಿತ ವ್ಯಕ್ತಿ, ‘ನರೇಶ್ ಗೋಯಲ್ ಎಂಬಾತ ಹಣ ಅಕ್ರಮ ವರ್ಗಾವಣೆ ಮಾಡಿದ್ದು, ಈ ಪ್ರಕರಣದಲ್ಲಿ ನೀವು ಶಂಕಿತ ವ್ಯಕ್ತಿ ಆಗಿದ್ದೀರಾ’ ಎಂದು ಹೇಳಿದ್ದರು. ಎರಡು ದಿನ ವಾಟ್ಸ್ಆ್ಯಪ್ ವಿಡಿಯೊ ಕರೆಯಲ್ಲಿ ಅವರ ಕಣ್ಗಾವಲಿನಲ್ಲಿ ಇರಿಸಿದ್ದರು. ನಂತರ ನ್ಯಾಯಾಲಯದ ವಿಚಾರಣೆಗೆ, ತನಿಖೆಗೆ ಸಹಕರಿಸಬೇಕು. ಭವಿಷ್ಯ ನಿಧಿ, ಉಳಿತಾಯ ಖಾತೆ ಒದಗಿಸುವಂತೆ ಸೂಚಿಸಿದ್ದರು. ಅದರಂತೆ ದೂರುದಾರರು ತಮ್ಮ ಬ್ಯಾಂಕ್ ಖಾತೆ ಮತ್ತು ವೈಯಕ್ತಿಕ ವಿವರಗಳನ್ನು ಹಂಚಿಕೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.
‘ಇ.ಡಿ ಕಚೇರಿಯಿಂದ ಕರೆ ಮಾಡುತ್ತಿರುವುದಾಗಿ ಹೇಳಿ ಎಲ್ಲ ವಿವರವನ್ನು ಸಲ್ಲಿಸುವಂತೆ ಸೂಚಿಸಿದ್ದರು. ಜಾಮೀನು ಭದ್ರತೆಗಾಗಿ ದೊಡ್ಡ ಮೊತ್ತದ ಹಣದ ಎರಡು ಚೆಕ್ ಅನ್ನು ಠೇವಣಿ ಇಡುವಂತೆ ಹೇಳಿ ಜಾಮೀನು ಆದೇಶ ಪ್ರತಿಯನ್ನು ಕಳುಹಿಸಿದ್ದರು. ಮಾನಸಿಕ ಹಿಂಸೆ ನೀಡಿದ್ದರು. ಜುಲೈ 24 ರಂದು ಹಣ ವರ್ಗಾಹಿಸಿದೆ. ವಂಚಕರು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ₹34 ಲಕ್ಷ ಹಣವನ್ನು ವರ್ಗಾವಣೆ ಮಾಡಿದೆ. ನಂತರ ನಡೆದ ಎಲ್ಲ ಘಟನೆಯನ್ನು ಕುಟುಂಬ ಸದಸ್ಯರಿಗೆ ತಿಳಿಸಿದೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
‘ಆಕ್ಸಿಸ್ ಬ್ಯಾಂಕ್ನಿಂದ ₹ 14.50 ಲಕ್ಷ, ಎಚ್ಡಿಎಫ್ಸಿ ಬ್ಯಾಂಕ್ನಿಂದ ₹1.2 ಲಕ್ಷ, ಚಿನ್ನ ಅಡವಿಟ್ಟು ₹1.1 ಲಕ್ಷ, ಫ್ಲಿಪ್ ಕಾರ್ಟ್ನಿಂದ ₹4.5 ಲಕ್ಷ, ಕ್ರೆಡ್ ಆ್ಯಪ್ನಿಂದ ₹2.5 ಲಕ್ಷ, ಎಲ್ಐಸಿ ವಿಮೆಯಿಂದ ₹2.2 ಲಕ್ಷ ಸಾಲ ಮಾಡಿದ್ದೆ. ನನ್ನ ಬಳಿ ಇದ್ದ ಹಣವೂ ಸೇರಿ ಒಟ್ಟಾರೆ ₹34 ಲಕ್ಷ ಹಣವನ್ನು ವರ್ಗಾಯಿಸಿದ್ದೇನೆ’ ಎಂದು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.