ADVERTISEMENT

ತಾರಾ ದಂಪತಿ ಪ್ರಿಯಾಂಕಾ, ಉಪೇಂದ್ರರ ಮೊಬೈಲ್ ಹ್ಯಾಕ್‌ ಮಾಡಿ ವಂಚಿಸಿದವನ ಬಂಧನ

ದೆಹಲಿಯಲ್ಲಿ ಆರೋಪಿ ಬಂಧನ, ಸದಾಶಿವನಗರ ಠಾಣೆ ಪೊಲೀಸರ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 11:44 IST
Last Updated 12 ನವೆಂಬರ್ 2025, 11:44 IST
<div class="paragraphs"><p>ತಾರಾ ದಂಪತಿ ಪ್ರಿಯಾಂಕಾ, ಉಪೇಂದ್ರರ ಮೊಬೈಲ್ ಹ್ಯಾಕ್‌ ಮಾಡಿ ವಂಚಿಸಿದವನ ಬಂಧನ</p></div>

ತಾರಾ ದಂಪತಿ ಪ್ರಿಯಾಂಕಾ, ಉಪೇಂದ್ರರ ಮೊಬೈಲ್ ಹ್ಯಾಕ್‌ ಮಾಡಿ ವಂಚಿಸಿದವನ ಬಂಧನ

   

ಬೆಂಗಳೂರು: ನಟ, ನಿರ್ದೇಶಕ ಉಪೇಂದ್ರ ಹಾಗೂ ಅವರ ಪತ್ನಿ ಪ್ರಿಯಾಂಕಾ ಅವರ ಮೊಬೈಲ್‌ ಹ್ಯಾಕ್ ಮಾಡಿ ವಂಚಿಸಿದ್ದ ಆರೋಪಿಯನ್ನು ಸದಾಶಿವನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಿಹಾರದ ವಿಕಾಸ್‌ ಕುಮಾರ್ ಬಂಧಿತ. ಆರೋಪಿ ದೆಹಲಿಯಲ್ಲಿರುವ ಸುಳಿವು ಲಭಿಸಿದ್ದರಿಂದ ವಿಶೇಷ ತಂಡವನ್ನು ಅಲ್ಲಿಗೆ ಕಳುಹಿಸಲಾಗಿತ್ತು. ಅಲ್ಲಿನ ಸೋನಿಯಾ ನಗರದಲ್ಲಿ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ವಶಕ್ಕೆ ಪಡೆದುಕೊಂಡು ನಗರಕ್ಕೆ ಕರೆ ತರಲಾಗಿದೆ. ಆರೋಪಿಯ ಮೊಬೈಲ್‌ ವಶಕ್ಕೆ ಪಡೆದುಕೊಂಡು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್ಎಲ್‌) ರವಾನೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆಯಿದ್ದು, ತನಿಖೆ ಚುರುಕುಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ADVERTISEMENT

ಈ ಪ್ರಕರಣದಲ್ಲಿ ಸೈಬರ್ ವಂಚಕರು ₹1.65 ಲಕ್ಷ ವರ್ಗಾವಣೆ ಮಾಡಿಕೊಂಡಿದ್ದರು ಎಂಬುದು ಗೊತ್ತಾಗಿದೆ.

‘ಸೆ.15ರ ಬೆಳಿಗ್ಗೆ 8ರ ಸುಮಾರಿಗೆ ನಟಿ ಪ್ರಿಯಾಂಕಾ ಅವರಿಗೆ ಕರೆ ಮಾಡಿದ್ದ ಸೈಬರ್ ವಂಚಕ, ‘ನಿಮ್ಮ ಆರ್ಡರ್ ಡೆಲಿವರಿ ಮಾಡಲು ವಿಳಾಸ ಸಿಗುತ್ತಿಲ್ಲ. ಈ ಮೊಬೈಲ್‌ ಸಂಖ್ಯೆಗೆ ಡಯಲ್‌ ಮಾಡಿ ಖಚಿತಪಡಿಸಿದರೆ ಡೆಲಿವರಿ ಮಾಡುತ್ತೇವೆ’ ಎಂದು ಒಂದು ಮೊಬೈಲ್‌ ಸಂಖ್ಯೆ ನೀಡಿದ್ದ. ಆ ಸಂಖ್ಯೆಗೆ ಪ್ರಿಯಾಂಕಾ ಅವರು ಕರೆ ಮಾಡುತ್ತಿದ್ದಂತೆಯೇ ಪ್ರಿಯಾಂಕಾ ಅವರ ಫೋನ್ ಹ್ಯಾಕ್ ಆಗಿತ್ತು. ಫೋನ್‌ನಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿರಬಹುದು ಎಂದು ಭಾವಿಸಿದ್ದ ಪ್ರಿಯಾಂಕಾ ಅವರು ಉಪೇಂದ್ರ ಹಾಗೂ ಕುಟುಂಬಕ್ಕೆ ಪರಿಚಿತರಾದ ಮಹಾದೇವ್ ಅವರ ಫೋನ್‌ಗಳಿಂದ ಅದೇ ಸಂಖ್ಯೆಗೆ ಡಯಲ್ ಮಾಡಿದ್ದರು. ಆ ಫೋನ್‌ಗಳೂ ಸಹ ಹ್ಯಾಕ್ ಆಗಿದ್ದವು’ ಎಂದು ಪೊಲೀಸರು ಹೇಳಿದರು.

ಸಂದೇಶ ಕಳುಹಿಸಿದ್ದ ಆರೋಪಿ: ‘ವಾಟ್ಸ್ಆ್ಯಪ್​ ಖಾತೆಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದ ಆರೋಪಿ, ‘ತುರ್ತಾಗಿ ಹಣದ ಅಗತ್ಯ ಇದೆ’ ಎಂದು ಹಲವರಿಗೆ ಸಂದೇಶ ಕಳುಹಿಸಿದ್ದ. ಪ್ರಿಯಾಂಕಾ ಅವರೇ ಸಂದೇಶ ಕಳುಹಿಸಿರಬಹುದು ಎಂದು ಭಾವಿಸಿದ್ದ ಆಪ್ತರು ಹಣ ವರ್ಗಾವಣೆ ಮಾಡಿದ್ದರು. ಉಪೇಂದ್ರ ಅವರ ಪುತ್ರ ಸಹ ₹50 ಸಾವಿರ ವರ್ಗಾವಣೆ ಮಾಡಿದ್ದರು. ಬಳಿಕ ಅನುಮಾನ ಬಂದು ಉಪೇಂದ್ರ ದಂಪತಿ ಖುದ್ದು ಸದಾಶಿವನಗರ ಠಾಣೆ ಹಾಗೂ ಕೇಂದ್ರ ವಿಭಾಗದ ಸೈಬರ್ ಕ್ರೈಮ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದರು’ ಎಂದು ಪೊಲೀಸರು ಹೇಳಿದರು.

‘ನಾಲ್ಕು ವಿವಿಧ ಖಾತೆಗಳಿಗೆ ಸುಮಾರು ₹ 1.65 ಲಕ್ಷ ರೂಪಾಯಿ ವರ್ಗಾವಣೆ ಆಗಿರುವುದು ತನಿಖೆಯಿಂದ ಗೊತ್ತಾಗಿದೆ. 20ರಿಂದ 25 ವಯಸ್ಸಿನ ಯುವಕರು ಸೇರಿಕೊಂಡು ಮೊಬೈಲ್‌ ಹ್ಯಾಕ್‌ ಮಾಡಿ ವಂಚನೆ ಎಸಗುತ್ತಿರುವ ಮಾಹಿತಿಯಿದೆ. ವಿಕಾಸ್ ಕುಮಾರ್‌ನನ್ನು ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

‘ಎಲ್ಲರನ್ನೂ ಎಚ್ಚರಿಸಿದ್ದೆವು’

ಬುದ್ಧಿವಂತರೇ ಕೆಲವೊಮ್ಮೆ ದಡ್ಡರಾಗುತ್ತೇವೆ. ಆರ್ಡರ್ ಡೆಲಿವರಿ ಮಾಡುವವರ ಸೋಗಿನಲ್ಲಿ ಕರೆ ಮಾಡಿ ವಂಚಿಸಿದ್ದರು. ವಂಚನೆ ಆಗಿರುವುದು ನಮಗೆ ತಿಳಿಯುವಷ್ಟರಲ್ಲೇ ನನ್ನ ಮಗ, ಪ್ರಿಯಾಂಕಾ ಅವರ ಸ್ನೇಹಿತರು ಹಣ ವರ್ಗಾಯಿಸಿದ್ದರು. ತಕ್ಷಣವೇ ವಿಡಿಯೊ ಮೂಲಕ ಎಲ್ಲರನ್ನೂ ಎಚ್ಚರಿಸಿದ್ದೆವು. ಪೊಲೀಸರಿಗೆ ದೂರು ಕೊಟ್ಟ ಬಳಿಕ ಯಾರೂ ಹಣ ವರ್ಗಾಯಿಸಿರಲಿಲ್ಲ
ಉಪೇಂದ್ರ, ನಟ
ಈ ಪ್ರಕರಣದಲ್ಲಿ ವಿಭಿನ್ನ ಮಾದರಿಯಲ್ಲಿ ವಂಚನೆ ಮಾಡಲಾಗಿತ್ತು. ‘ಗೋಲ್ಡನ್ ಅವರ್‌’ನಲ್ಲಿ ದೂರು ನೀಡಿದ್ದರಿಂದ ಆರೋಪಿಯನ್ನು ಬೇಗನೆ ಪತ್ತೆಹಚ್ಚಲು ಸಹಕಾರಿ ಆಯಿತು. ಈ ಪ್ರಕರಣದ ಮೂಲಕ ಆರೋಪಿಯು ಭಾಗಿಯಾಗಿರುವ ಇತರೆ ಕೆಲವು ಪ್ರಕರಣಗಳ ಮಾಹಿತಿಯೂ ಗೊತ್ತಾಗಿದ್ದು, ತನಿಖೆ ಮುಂದುವರಿಸಲಾಗಿದೆ
ಸೀಮಾಂತ್‌ಕುಮಾರ್‌ ಸಿಂಗ್‌, ಪೊಲೀಸ್ ಕಮಿಷನರ್‌, ಬೆಂಗಳೂರು

‘ಗೋಲ್ಡನ್ ಅವರ್‌’ನಲ್ಲಿ ದೂರು’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.