
ಬೆಂಗಳೂರು: ಸೈಬರ್ ಭದ್ರತೆಯಲ್ಲಿ ತಂತ್ರಜ್ಞಾನ ಬಲವರ್ಧನೆ, ಇದಕ್ಕೆ ಸಂಬಂಧಿಸಿದ ಸ್ಟಾರ್ಟ್ಅಪ್ಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಬೆಂಗಳೂರಿನ ಐಐಎಸ್ಸಿಯಲ್ಲಿನ ಫೌಂಡೇಷನ್ ಫಾರ್ ಸೈನ್ಸ್, ಇನ್ನೋವೇಶನ್ ಮತ್ತು ಡೆವಲಪ್ಮೆಂಟ್ (ಎಫ್ಎಸ್ಐಡಿ), ಮೈಸೂರು ರಾಜಮನೆತನದ ಸೈಬರ್ವರ್ಸ್ ಫೌಂಡೇಷನ್ ಮತ್ತು ಪ್ಯಾಂಥರ್ಯುನ್ ಜತೆ ಈಚೆಗೆ ಒಪ್ಪಂದ ಮಾಡಿಕೊಂಡಿದೆ.
ಸೈಬರ್ವರ್ಸ್ ಫೌಂಡೇಷನ್ನ ಅಧ್ಯಕ್ಷೆ ತ್ರಿಶಿಖಾ ಕುಮಾರಿ, ಎಫ್ಎಸ್ಐಡಿ ಮುಖ್ಯ ಕಾರ್ಯನಿರ್ವಾಹಕ ಬಿ. ಗುರುಮೂರ್ತಿ ಮತ್ತು ಪ್ಯಾಂಥರ್ಯುನ್ನ ಸ್ಥಾಪಕ ಮತ್ತು ಸಿಇಒ ಶ್ರೀನಿವಾಸ್ ಲಕ್ಷ್ಮಣ್ ಶೇಖರ್ ಅವರು ಸೈಬರ್ವರ್ಸ್ ಫೌಂಡೇಷನ್ನ ಸಲಹಾ ಮಂಡಳಿಯ ಅಧ್ಯಕ್ಷ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಸಮ್ಮುಖದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಒಪ್ಪಂದದ ಭಾಗವಾಗಿ, ಮೂರೂ ಸಂಸ್ಥೆಗಳು ಜಂಟಿಯಾಗಿ ಸೈಬರ್ ಭದ್ರತಾ ಸ್ಟಾರ್ಟ್ಅಪ್ಗಳನ್ನು ಗುರುತಿಸಿ, ಪೋಷಿಸುತ್ತವೆ. ಆಯ್ದ ಸ್ಟಾರ್ಟ್ಅಪ್ಗಳಿಗೆ ತಾಂತ್ರಿಕ, ನಿರ್ವಹಣೆ, ಮಾರುಕಟ್ಟೆ ಪ್ರವೇಶ ಇತ್ಯಾದಿಗೆ ಅಗತ್ಯವಿರುವ ಸಹಾಯ ಮಾಡಲಾಗುತ್ತದೆ.
‘ಈ ಒಪ್ಪಂದವು ಭಾರತದ ಸೈಬರ್ ಭದ್ರತಾ ಸಾಮರ್ಥ್ಯಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಸೈಬರ್ ಭದ್ರತೆಯು ದೇಶಕ್ಕೆ ಇಂದಿನ ಅಗತ್ಯ ತಂತ್ರಜ್ಞಾನವಾಗಿದೆ’ ಎಂದು ಎಫ್ಎಸ್ಐಡಿ ನಿರ್ದೇಶಕ ಗುರುಮೂರ್ತಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.