ದಾಬಸ್ ಪೇಟೆ: ಭೂಮಿ ಹಸನು ಮಾಡಿಕೊಂಡ ರೈತರು ಬಿತ್ತನೆ ಮಾಡಲು ಮಳೆಗಾಗಿ ಕಾಯುತ್ತಿದ್ದಾರೆ. ಮುಂಗಾರು ಆರಂಭವಾಗಿ 20 ದಿನ ಕಳೆದರೂ ಮಳೆ ಬಾರದ ಕಾರಣ ಬಿತ್ತನೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ ಸೋಂಪುರ ಹೋಬಳಿಯ ರೈತರು.
ಜೂನ್ ಮೊದಲ ವಾರದಿಂದ ಕೊನೆಯ ವಾರದವರೆಗೆ ತೊಗರಿ, ಅವರೆ, ನೆಲಗಡಲೆ, ಮುಸುಕಿನ ಜೋಳ ಬಿತ್ತನೆ ಮಾಡಲಾಗುತ್ತದೆ. ಜುಲೈ ಆರಂಭವಾಗುತ್ತಿದ್ದಂತೆ ರಾಗಿ ಬಿತ್ತನೆ ಕಾರ್ಯ ಪ್ರಾರಂಭಿಸುತ್ತಾರೆ. ಆದರೆ, ಈ ಬಾರಿ ಸರಾಸರಿ ಮಳೆಗಿಂತ ಕಡಿಮೆ ಹಾಗೂ ಸಕಾಲಕ್ಕೆ ಬಾರದ ಮಳೆಯಿಂದ ತೊಗರಿ, ಅವರೆ, ನೆಲಗಡಲೆ, ಮುಸುಕಿನ ಜೋಳ ಬಿತ್ತನೆ ಕಡಿಮೆಯಾಗಿದೆ.
ಮುಂಗಾರು ಪೂರ್ವದಿಂದಲೂ ಹೋಬಳಿಯಲ್ಲಿ ಮಳೆ ಅಷ್ಟಕಷ್ಟೇ. ಆಗಾಗ ಮಳೆ ಬಿದ್ದಾಗ ಭೂಮಿ ಉಳುಮೆ ಮಾಡಿಕೊಂಡು ಬಿತ್ತನೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಸಕಾಲಕ್ಕೆ ಮಳೆ ಬಾರದೆ ತೊಂದರೆಯಾಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದರು.
ಮುಂಗಾರಿನಲ್ಲಿಯೇ ಬಹುತೇಕ ರೈತರು ಮೇವಿಗಾಗಿ ಜೋಳವನ್ನು ಬಿತ್ತನೆ ಮಾಡುತ್ತಾರೆ. ಆದರೆ, ಮಳೆ ಇಲ್ಲದೆ ಜೋಳ ಒಣಗಿದ್ದು ಮೇವಿನ ಕೊರತೆಯನ್ನು ಸೃಷ್ಟಿಸಿದೆ. ಕಳೆದ ಎರಡು ವರ್ಷ ಮುಂಗಾರು ಮಳೆ ಯಥೇಚ್ಛವಾಗಿ ಬಿದ್ದಿತ್ತು. ಈ ಬಾರಿಯೂ ಉತ್ತಮ ಮಳೆಯ ನಿರೀಕ್ಷೆಯಲ್ಲಿ ರೈತರಿದ್ದರು.
ಆದರೆ, ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಬಾರದೆ ಜನ ಆತಂಕಕ್ಕೆ ಒಳಗಾಗಿದ್ದಾರೆ. ‘ಮಳೆ ಸಕಾಲಕ್ಕೆ ಆಗುತ್ತಿಲ್ಲ. ಕೆಲವರು ಉಳುಮೆ ಸಹ ಮಾಡಿಲ್ಲ. ಇದು ಬಿತ್ತನೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ’ ಎನ್ನುತ್ತಾರೆ ರೈತ ಶಿವನಂಜಯ್ಯ.
'ಈಗ ಮಳೆ ಬಂದರೂ ತೊಗರಿ, ಅವರೆ, ಜೋಳ ಹಾಗೂ ರಾಗಿ ಬಿತ್ತನೆಯಾಗುತ್ತದೆ’ ಎನ್ನುತ್ತಾರೆ ಸೋಂಪುರ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶಬನಾ ಡಿ. ನದಾಫ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.