ಬೆಂಗಳೂರು: ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬವನ್ನು ಸಂಭ್ರಮ–ಸಡಗರದಿಂದ ಆಚರಿಸಲು ನಗರದ ಜನತೆ ಸಿದ್ಧವಾಗಿದ್ದು, ಶನಿವಾರ ಹೂವು ಮತ್ತು ಹಣ್ಣಿನ ಖರೀದಿ ಜೋರಾಗಿತ್ತು.
ನವರಾತ್ರಿ ಆಚರಣೆಯ ವೇಳೆ ಪ್ರತಿ ವರ್ಷ ಹೂವುಗಳ ದರ ಏರಿಕೆಯಾಗುತ್ತದೆ. ಆದರೆ, ಕೆಲ ದಿನಗಳ ಹಿಂದೆ ಹೂವಿನ ದರ ಕುಸಿದಿತ್ತು. ಹಬ್ಬದ ವೇಳೆಗೆ ಮತ್ತೆ ಹೂವಿನ ದರಗಳು ಹೆಚ್ಚಾಗಿದೆ. ಎರಡು ವಾರಗಳವರೆಗೆ ಧಾರ್ಮಿಕ ಆಚರಣೆಗಳು ನಡೆಯುವುದರಿಂದ ಈ ಸಮಯದಲ್ಲಿ ಹೂವಿಗೆ ಹೆಚ್ಚಿನ ಬೇಡಿಕೆ ಇರುತ್ತದೆ ಎಂದು ಕೆ.ಆರ್. ಮಾರುಕಟ್ಟೆಯ ಹೂವಿನ ವ್ಯಾಪಾರಿಗಳು ತಿಳಿಸಿದರು.
‘ದಸರಾ ಹಬ್ಬದಲ್ಲಿ ಸೇವಂತಿಗೆ, ಕನಕಾಂಬರ, ಗುಲಾಬಿ ಹೂವುಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಆಯುಧ ಪೂಜೆ ದಿನ ವಾಹನಗಳು, ಕಚೇರಿ, ಮನೆಯಲ್ಲಿರುವ ವಸ್ತುಗಳನ್ನು ಅಲಂಕರಿಸಿ ಪೂಜೆ ಮಾಡಲಾಗುತ್ತದೆ. ವಾಹನಗಳ ಅಲಂಕಾರಕ್ಕೆ ಹೂವು ಹೆಚ್ಚಾಗಿ ಮಾರಾಟವಾಗುತ್ತದೆ. ಗುಣಮಟ್ಟದ ಹೂವಿಗೆ ಗ್ರಾಹಕರಿಂದ ಬೇಡಿಕೆ ಹೆಚ್ಚು. ಆಗ ಬೆಲೆಯೂ ಏರಿಕೆಯಾಗುವುದು ಸಾಮಾನ್ಯ’ ಎಂದು ಕೆ.ಆರ್. ಮಾರುಕಟ್ಟೆಯ ಹೂವಿನ ವರ್ತಕ ಮಹಮ್ಮದ್ ಕೈಫ್, ಗಂಗಾ ಮಾಹಿತಿ ನೀಡಿದರು.
‘ಪ್ರತಿ ಕೆ.ಜಿ. ಕನಕಾಂಬರ ₹1,200, ಮಲ್ಲಿಗೆ ₹1,600, ಗುಲಾಬಿ ₹300 ರಂತೆ ಮಾರಾಟವಾಗುತ್ತಿದೆ. ಭಾನುವಾರ ಹೂವಿನ ದರಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ’ ಎಂದು ತಿಳಿಸಿದರು.
ಆಯುಧ ಪೂಜೆಯ ದಿನ ಮನೆ, ವಾಹನ, ಅಂಗಡಿ, ಕಾರ್ಖಾನೆ ಬಳಿ ಒಡೆಯುವ ಬೂದುಗುಂಬಳ ಕೆ.ಜಿಗೆ ₹50ರಂತೆ ಮತ್ತು ಗಾತ್ರದ ಆಧಾರದ ಮೇಲೆ ಒಂದಕ್ಕೆ ₹100–₹200ರಂತೆ ಮಾರಾಟವಾಗಿದೆ.
ನಗರದ ಕೆ.ಆರ್. ಮಾರುಕಟ್ಟೆ, ಯಶವಂತಪುರ, ಬಸವನಗುಡಿ ಮಾರುಕಟ್ಟೆ ಪ್ರದೇಶಗಳು ಜನಜಂಗುಳಿಯಿಂದ ಕೂಡಿದ್ದವು. ತರಕಾರಿ, ದಿನಸಿ, ಅಲಂಕಾರಿಕ ವಸ್ತುಗಳು ಮತ್ತು ಪೂಜೆಗೆ ಬೇಕಾಗುವ ಬೂದುಗುಂಬಳ, ಬಾಳೆಕಂದು, ಎಲೆ, ತೆಂಗಿನಕಾಯಿ ಖರೀದಿ ಜೋರಾಗಿತ್ತು.
‘ಪ್ರತಿ ಕೆ.ಜಿ ಬಟಾಣಿ ₹160, ಶುಂಠಿ ₹200, ಬೀನ್ಸ್ ₹80, ಕ್ಯಾರೆಟ್ ₹40, ಹಿರೇಕಾಯಿ ₹60, ಕ್ಯಾಪ್ಸಿಕಮ್ ಮತ್ತು ಬಿಟ್ರೂಟ್ ₹40ರಂತೆ ಮಾರಾಟ ಮಾಡಲಾಗುತ್ತಿದೆ. ಮೆಣಸಿನಕಾಯಿ ಪ್ರತಿ ಕೆ.ಜಿಗೆ ₹80 ಮಾರಾಟವಾಗುತ್ತಿದೆ’ ಎಂದು ಕೆ.ಆರ್. ಮಾರುಕಟ್ಟೆಯ ತರಕಾರಿ ವ್ಯಾಪಾರಿಗಳಾದ ಅಕ್ರಂ, ವೆಂಕಟೇಶ್ ಅವರು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.