ADVERTISEMENT

ಸಂಪಾದನೆಯ ಶೇ.10 ರಷ್ಟು ಸಮಾಜಕ್ಕೆ ಮೀಸಲಿಡಿ: ಜಯೇಂದ್ರಪುರಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 24 ಮೇ 2023, 7:47 IST
Last Updated 24 ಮೇ 2023, 7:47 IST
ಪೂರ್ಣಾನಂದಪುರಿ ಸ್ವಾಮೀಜಿ ಅವರು ಜಯೇಂದ್ರಪುರಿ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು.
ಪೂರ್ಣಾನಂದಪುರಿ ಸ್ವಾಮೀಜಿ ಅವರು ಜಯೇಂದ್ರಪುರಿ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು.   

ನೆಲಮಂಗಲ: ‘ಸಾಮಾಜಿಕ ಕಾರ್ಯಗಳಿಗಾಗಿ ಸಂಪಾದನೆಯ ಶೇ 10ರಷ್ಟನ್ನು ಮಠಕ್ಕೆ ಮೀಸಲಿಡುವ ಜತೆಗೆ ಜನ ಬೆಂಬಲವನ್ನೂ ನೀಡಬೇಕು’ ಎಂದು ಕೈಲಾಸಾಶ್ರಮದ ಜಯೇಂದ್ರಪುರಿ ಸ್ವಾಮೀಜಿ ಗಾಣಿಗರಿಗೆ ಕಿವಿಮಾತು ಹೇಳಿದರು.

ನಗರೂರಿನ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದ ಪೂರ್ಣಾನಂದಪುರಿ ಸ್ವಾಮೀಜಿ ಅವರ ಪೀಠಾರೋಹಣದ ಮೊದಲ ವಾರ್ಷಿಕೋತ್ಸವದಲ್ಲಿ ಆಶೀರ್ವಚನ ನೀಡಿದರು.

‘ಗಾಣಿಗ ಜನಾಂಗಕ್ಕೆ ಈವರೆಗೂ ಗುರುಪೀಠ ಇರಲಿಲ್ಲ. ಪೂರ್ಣಾನಂದಪುರಿ ಸ್ವಾಮೀಜಿ ಶ್ರಮದ ಫಲವಾಗಿ ಪೀಠ ಸ್ಥಾಪನೆಯಾಗಿದೆ. ಇದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಜನಾಂಗದವರ ಮೇಲಿದೆ. ಪೂರ್ಣಾನಂದಪುರಿ ಸ್ವಾಮೀಜಿ ಅವರು ಪೂರ್ವಾಶ್ರಮದ ಎಲ್ಲವನ್ನೂ ತ್ಯಾಗ ಮಾಡಿ, ತಮಗೆ ಬರುವ ಪಿಂಚಣಿ ಹಣವನ್ನೂ ಮಠ ನಡೆಸಲು ಮೀಸಲಿಟ್ಟಿದ್ದಾರೆ. ವೃದ್ದಾಪ್ಯದಲ್ಲಿ ಬೇರೆಯವರ ಆಸರೆ ಬೇಕಿರುತ್ತದೆ. ಆದರೆ, ಇವರು ಇಳಿ ವಯಸ್ಸಿನಲ್ಲಿಯೂ ಗಾಣಿಗ ಜನಾಂಗಕ್ಕೆ ಆಸರೆಯಾಗಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

ಪೂರ್ಣಾನಂದಪುರಿ ಸ್ವಾಮೀಜಿ, ‘ಗಾಣಿಗರಿಗೆ ಗುರುಪೀಠ ಸ್ಥಾಪನೆಯ ನನ್ನ ಗುರಿ ಈಡೇರಿದೆ. ಬಡವರಿಗೆ, ಅನಾಥರಿಗೆ ಉಚಿತ ವಸತಿ ಹಾಗೂ ಶಿಕ್ಷಣ ನೀಡಲು ಶಾಲೆ ತೆರೆಯಲಾಗುತ್ತಿದ್ದು, ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದೆ. ಕಟ್ಟಡ ಪೂರ್ಣಗೊಳ್ಳಲು ದಾನಿಗಳು ಸಹಕರಿಸಬೇಕು. ಇದು ನನಗಾಗಿ ಅಲ್ಲ, ಸಮಾಜಕ್ಕಾಗಿ’ ಎಂದರು.

ತೊಗಟವೀರ ಕ್ಷತ್ರಿಯ ನೇಕಾರ ಪುಷ್ಪಾಂಡಜ ಮಹರ್ಷಿ ಆಶ್ರಮದ ದಿವ್ಯಜ್ಞಾನಾನಂದಗಿರಿ ಸ್ವಾಮೀಜಿ, ‘ವ್ಯಕ್ತಿ ಏನನ್ನಾದರು ಮಾಡುತ್ತಿದ್ದಾನೆ ಎಂದರೆ ಅಸೂಯೆ ಪಡದೆ ಪ್ರೋತ್ಸಾಹಿಸಬೇಕು. ಗುರುಗಳಿಂದ ಸಂಸ್ಕಾರ ಪಡೆದಾಗ ಬೆಳಕು ಮೂಡುತ್ತದೆ’ ಎಂದರು.

ಕಾಂಗ್ರೆಸ್ ಮುಖಂಡ ವಿ.ಆರ್.ಸುದರ್ಶನ್, ‘ನಿವೃತ್ತಿಯಾದವರು ಮಠದ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಕೋಲಾರದ ಜ್ಯೋತಿ ಎಜುಕೇಷನಲ್ ಟ್ರಸ್ಟ್ ಮೂಲಕ ಪ್ರತಿವರ್ಷ ಮಠಕ್ಕೆ ₹ 1 ಲಕ್ಷ ದೇಣಿಗೆ ನೀಡಲಾಗುವುದು’ ಎಂದು ಘೋಷಿಸಿದರು.

ಮಠದ ಟ್ರಸ್ಟಿ ಟಿ.ರಂಗರಾಜು, ಷಣ್ಮುಗಂ, ಅಶೋಕ್‌, ಮುಖಂಡ ದೇವರಾಜ್ ಮುರಾರಯ್ಯ ಇದ್ದರು.

ಕೈಲಾಸಾಶ್ರಮದ ಜಯೇಂದ್ರಪುರಿ ಶ್ರೀಗಳು ಮಾತನಾಡಿದರು. ಚಿತ್ರದಲ್ಲಿ ಮಾಜಿ ಉಪಸಭಾಪತಿ ವಿ.ಆರ್‌.ಸುದರ್ಶನ್ ತೊಗಟವೀರ ಕ್ಷತ್ರಿಯ ನೇಕಾರ ಪುಷ್ಪಾಂಡಜ ಮಹರ್ಷಿ ಆಶ್ರಮದ ದಿವ್ಯಜ್ಞಾನಾನಂದಗಿರಿ ಶ್ರೀಗಳು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.