ADVERTISEMENT

ಡಿಜಿಟಲ್ ಅರೆಸ್ಟ್‌: ಸಾಫ್ಟ್‌ವೇರ್ ಉದ್ಯೋಗಿಗೆ ₹31.83 ಕೋಟಿ ವಂಚನೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 23:38 IST
Last Updated 16 ನವೆಂಬರ್ 2025, 23:38 IST
   

ಬೆಂಗಳೂರು: ನಗರದ 57 ವರ್ಷದ ಮಹಿಳೆಯನ್ನು ‘ಡಿಜಿಟಲ್ ಅರೆಸ್ಟ್‌ ’ ಹೆಸರಿನಲ್ಲಿ ಬೆದರಿಸಿದ ಸೈಬರ್ ವಂಚಕರು ₹31.83 ಕೋಟಿ ಸುಲಿಗೆ ಮಾಡಿರುವ ಘಟನೆ ನಡೆದಿದೆ. ಈವರೆಗೆ ರಾಜ್ಯದಲ್ಲಿ ವರದಿಯಾದ ಅತ್ಯಧಿಕ ಮೊತ್ತ ಕಳೆದುಕೊಂಡ ‘ಡಿಜಿಟಲ್ ಅರೆಸ್ಟ್’ ಪ್ರಕರಣ ಇದಾಗಿದೆ.

ಇಂದಿರಾನಗರ ನಿವಾಸಿಯಾಗಿರುವ ಸಂತ್ರಸ್ತೆ ನೀಡಿದ ದೂರು ಆಧರಿಸಿ ಪೂರ್ವ ಸೈಬರ್ ಕ್ರೈಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.

ಐ.ಟಿ ಕ್ಷೇತ್ರದ ಹಿರಿಯ ಉದ್ಯೋಗಿಯಾಗಿರುವ ಸಂತ್ರಸ್ತೆಗೆ 2024ರ ಸೆಪ್ಟೆಂಬರ್ 15ರಂದು ಕರೆ ಮಾಡಿದ ವ್ಯಕ್ತಿ, ತಾನು ಡಿಎಚ್‌ಎಲ್ ಕೊರಿಯರ್ ಸರ್ವಿಸ್‌ನಿಂದ ಕರೆ ಮಾಡುತ್ತಿದ್ದು, ‘ಮುಂಬೈನ ಅಂಧೇರಿಯ ಡಿಎಚ್‌ಎಲ್‌ ಕೇಂದ್ರದಿಂದ ನಿಮ್ಮ ಹೆಸರಿಗೆ ಬಂದಿರುವ ಪಾರ್ಸೆಲ್‌ನಲ್ಲಿ ಮೂರು ಕ್ರೆಡಿಟ್ ಕಾರ್ಡ್‌, ನಾಲ್ಕು ಪಾಸ್‌ಪೋರ್ಟ್ ಮತ್ತು ಎಂಡಿಎಂಎ ಡ್ರಗ್ಸ್ ಇದೆ’ ಎಂದು ಹೇಳಿದ್ದಾನೆ. ಬೆಂಗಳೂರಿನಲ್ಲಿ ವಾಸ ಮಾಡುತ್ತಿರುವ ಕಾರಣ ತನಗೂ ಪಾರ್ಸೆಲ್‌ಗೂ ಸಂಬಂಧವಿಲ್ಲ ಎಂದು ಸಂತ್ರಸ್ತೆ ಹೇಳಿದ್ದಾರೆ. ಪಾರ್ಸೆಲ್‌ ಮೇಲೆ ನಿಮ್ಮ ಮೊಬೈಲ್ ಸಂಖ್ಯೆ ಇರುವ ಕಾರಣ ಇದು ಸೈಬರ್‌ ಅಪರಾಧವಾಗಿದ್ದು, ಸೈಬರ್ ಸೆಲ್‌ಗೆ ವರದಿ ಮಾಡಿಕೊಳ್ಳುವಂತೆ ಸಲಹೆ ನೀಡಿ, ಮತ್ತೊಬ್ಬ ವ್ಯಕ್ತಿಗೆ ಕರೆಯನ್ನು ವರ್ಗಾಯಿಸಿದ್ದಾನೆ. ಆ ವ್ಯಕ್ತಿ ತಾನು ಸಿಬಿಐ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದರು.

ADVERTISEMENT

ಸಂತ್ರಸ್ತೆ ಮೇಲೆ ವಂಚಕರು ನಿಗಾ ಇಟ್ಟಿದ್ದರಿಂದ ಸ್ಥಳೀಯ ಪೊಲೀಸರು ಹಾಗೂ ಕಾನೂನು ಸಹಾಯ ಪಡೆದುಕೊಳ್ಳಲು ಅವರಿಗೆ ಆಗಲಿಲ್ಲ. ಈ ವಿಚಾರವನ್ನು ತಮ್ಮ ಕುಟುಂಬದವರಿಗೆ ತಿಳಿಸಿದರೆ, ಅವರ ಹೆಸರನ್ನು ಪ್ರಕರಣದಲ್ಲಿ ಸೇರಿಸುವುದಾಗಿ ಬೆದರಿಸಿದ್ದರು. ಮಗನ ಮದುವೆ ಸಮೀಪಿಸುತ್ತಿದ್ದ ಕಾರಣ ದೂರುದಾರೆ ವಂಚಕರ ಮಾತು ಕೇಳ ತೊಡಗಿದರು ಎಂದು ಹೇಳಿದರು.

‘2024ರ ಸೆಪ್ಟೆಂಬರ್ 23ರಂದು ಸ್ಕೈಪ್‌ ಮೂಲಕ ವಿಡಿಯೊ ಕರೆ ಮಾಡಿದ ವ್ಯಕ್ತಿ ಸಿಬಿಐ ಅಧಿಕಾರಿ ಎಂದು ಪರಿಚಯಿಸಿಕೊಂಡು, ಒಂದು ವಾರ ಸಂತ್ರಸ್ತೆಯ ವಿಚಾರಣೆ ನಡೆಸಿದ. ಆರ್‌ಬಿಐನ ಫೈನಾನ್ಷಿಯಲ್ ಇಂಟೆಲಿಜೆನ್ಸ್ ಯೂನಿಟ್‌ಗೆ (ಎಫ್‌ಐಯು) ತಮ್ಮ ಆಸ್ತಿಯ ವಿವರಗಳನ್ನು ಘೋಷಿಸಬೇಕು. ತನಿಖೆಯ ಭಾಗವಾಗಿ ನಿಮ್ಮ ಬ್ಯಾಂಕ್‌ ಖಾತೆ ಪರಿಶೀಲಿಸಬೇಕಿರುವ ಕಾರಣ, ಹಣ ವರ್ಗಾವಣೆ ಮಾಡಬೇಕು. ಪರಿಶೀಲನೆ ಬಳಿಕ ಹಣವನ್ನು ವಾಪಸ್ ನೀಡಲಾಗುವುದು’ ಎಂದು ಹೇಳಿದ್ದಾನೆ. ಆತನ ಮಾತು ನಂಬಿ, ಸಂತ್ರಸ್ತೆ ತಮ್ಮ ನಿಶ್ಚಿತ ಠೇವಣಿ ಮತ್ತು ಉಳಿತಾಯ ಖಾತೆಯಲ್ಲಿದ್ದ ಹಣವನ್ನು ವಂಚಕರು ನೀಡಿದ್ದ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾರೆ’ ಎಂದು ಹಿರಿಯ ಅಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

2024ರ ಡಿಸೆಂಬರ್ 6ರಂದು ದೂರುದಾರ ಮಹಿಳೆಯ ಮಗನ ನಿಶ್ಚಿತಾರ್ಥ ನೆರವೇರಿತು. ವಂಚಕರು ಸಂತ್ರಸ್ತೆಗೆ ಹಣ ವಾಪಸ್ ನೀಡಲಿಲ್ಲ. ಮಾರ್ಚ್ 26ರಂದು ತಮ್ಮ ಮೊಬೈಲ್ ಸಂಪರ್ಕಗಳನ್ನು ಕಡಿತಗೊಳಿಸಿದರು. ಈ ಅವಧಿಯಲ್ಲಿ ಅಪರಿಚಿತ ವ್ಯಕ್ತಿಗಳು ಸಂತ್ರಸ್ತೆಗೆ ಕರೆ ಮಾಡಿ, ಅವಾಚ್ಯ ಪದಗಳಿಂದ ನಿಂದಿಸಿ, ಬೆದರಿಕೆ ಹಾಕುತ್ತಿದ್ದರು ಎಂದು ಹೇಳಿದರು.

‘ಮಗನ ಮದುವೆ, ವಿದೇಶ ಪ್ರಯಾಣ ಹಾಗೂ ಅನಾರೋಗ್ಯದ ಕಾರಣ ಸಂತ್ರಸ್ತೆ ತಡವಾಗಿ ದೂರು ನೀಡಿದ್ದಾರೆ. ನವೆಂಬರ್ 14ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ, ವಂಚಕರ ಖಾತೆಗೆ ₹31.83 ಕೋಟಿ ಹಣ ವರ್ಗಾವಣೆಯಾಗಿದ್ದು, 187 ಬಾರಿ ವಹಿವಾಟು ನಡೆಸಿದ್ದಾರೆ. ದೊಡ್ಡ ಮೊತ್ತದ ವಂಚನೆ ಪ್ರಕರಣವಾಗಿರುವ ಕಾರಣ ಇದನ್ನು ಸಿಐಡಿಗೆ ವರ್ಗಾಯಿಸುವ ಸಾಧ್ಯತೆ ಇದೆ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.