ಬೆಂಗಳೂರು: ನಾರಾಯಣ ನೇತ್ರಾಲಯದ ಇಂದಿರಾನಗರದ ಶಾಖೆಯು ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದೀಪಾವಳಿ ಕಲಾ ಸ್ಪರ್ಧೆಯು ಮಕ್ಕಳಲ್ಲಿ ಪಟಾಕಿ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಿತು.
ದೀಪಕ್ಕೆ ಬಣ್ಣ ಹಾಕುವುದು, ಕಾಗದದ ತೋರಣ ತಯಾರಿ ಸೇರಿ ವಿವಿಧ ಚಟುವಟಿಕೆಗಳನ್ನು ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢ ವಿಭಾಗದಲ್ಲಿ ನಡೆಸಲಾಯಿತು. ಈ ಸ್ಪರ್ಧೆಯಲ್ಲಿ ನಗರದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಸ್ಪರ್ಧೆಯ ತೀರ್ಪುಗಾರರೂ ಆಗಿದ್ದ ನಾರಾಯಣ ನೇತ್ರಾಲಯದ ನಿರ್ದೇಶಕಿ ನೈನಾ ಶೆಟ್ಟಿ ಮಕ್ಕಳ ಜತೆಗೆ ಸಂವಾದ ನಡೆಸಿದರು. ಕಣ್ಣಿನಂತಹ ಸೂಕ್ಷ್ಮ ಅಂಗಗಳಿಗೆ ಪಟಾಕಿಯಿಂದಾಗುವ ಅಪಾಯಗಳ ಬಗ್ಗೆ ವಿವರಿಸಿದ ಅವರು, ಸುರಕ್ಷಿತ ದೀಪಾವಳಿ ಆಚರಣೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ತಿಳಿಸಿದರು.
ಈ ಕಾರ್ಯಕ್ರಮದ ಭಾಗವಾಗಿ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೆ ಸುರಕ್ಷತಾ ಕನ್ನಡಕಗಳನ್ನು ವಿತರಿಸಲಾಯಿತು. ಇದೇ ವೇಳೆ ಹುಲಿ ಕುಣಿತವನ್ನು ಕಲಾವಿದರು ಪ್ರಸ್ತುತಪಡಿಸಿದರು. ನಾರಾಯಣ ನೇತ್ರಾಲಯದ ವೈದ್ಯರಾದ ಡಾ.ಸಂಕೇತ್ ಭಟ್ನಾಗರ್ ಮತ್ತು ಡಾ.ಬಿಂದು ರುದ್ರಮೂರ್ತಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.