ಬೆಂಗಳೂರು: ‘ರಾಜ್ಯ ಸರ್ಕಾರ 2021–22ನೇ ಸಾಲಿನ ಶೈಕ್ಷಣಿಕ ವರ್ಷದ ಬಗ್ಗೆ ನಿಖರ ಮತ್ತು ಸ್ಥೂಲ ಚಿತ್ರಣವನ್ನು ತಕ್ಷಣ ನೀಡಬೇಕು’ ಎಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ ಆಗ್ರಹಿಸಿದ್ದಾರೆ.
‘ಮುಂದಿನ ಶಿಕ್ಷಣದ ಗತಿ ಏನು, ಶಾಲೆಗಳು ಯಾವಾಗ ಆರಂಭವಾಗುತ್ತವೆ, ಮುಂದಿನ ಶೈಕ್ಷಣಿಕ ವರ್ಷ ಯಾವ ರೀತಿಯಲ್ಲಿರುತ್ತದೆ ಎಂಬ ಗೊಂದಲದಲ್ಲಿ ಸರ್ಕಾರಿ ಶಾಲೆಗಳ ಪೋಷಕರು ಮತ್ತು ಮಕ್ಕಳು ಇದ್ದಾರೆ. ಈ ಪ್ರಶ್ನೆಗಳಿಗೆ ಶಿಕ್ಷಣ ಸಚಿವರು ಮತ್ತು ಶಿಕ್ಷಣ ಇಲಾಖೆ ಉತ್ತರ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.
‘ಪ್ರಾಥಮಿಕ ಶಾಲೆಗಳು ಜೂನ್ 15ರಿಂದ, ಪ್ರೌಢ ಶಾಲೆಗಳು ಜುಲೈ 15ರಿಂದ ಆರಂಭವಾಗಲಿದೆ ಎಂದು ಶಿಕ್ಷಣ ಇಲಾಖೆ ಈಗಾಗಲೇ ತಿಳಿಸಿದೆ. ಆದರೆ, ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಈ ಸುತ್ತೋಲೆಯನ್ನು ಧಿಕ್ಕರಿಸಿ, ಶಾಲೆಗಳನ್ನು ಮತ್ತು ಆನ್ಲೈನ್ ತರಗತಿಗಳನ್ನು ಆರಂಭಿಸುವುದಾಗಿ ಹೇಳಿಕೆ ನೀಡುತ್ತಿವೆ. ಸರ್ಕಾರದ ಆದೇಶಗಳನ್ನು ಪಾಲಿಸದೆ ಪಾಲಕರು ಮತ್ತು ಮಕ್ಕಳಲ್ಲಿ ಅನಗತ್ಯ ಗೊಂದಲ ಮೂಡಿಸುವ ಇಂಥ ಶಾಲೆಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದೂ ಒತ್ತಾಯಿಸಿದ್ದಾರೆ.
‘ಮಾರ್ಚ್-ಏಪ್ರಿಲ್ ವೇಳೆಗೆಕೋವಿಡ್ ನಿಯಂತ್ರಣಕ್ಕೆ ಬಂದು 2021–22ನೇ ಸಾಲಿನ ಶೈಕ್ಷಣಿಕ ವರ್ಷ ಮಾಮೂಲಿನಂತೆ ಆರಂಭ ಆಗಬಹುದೆಂದು ನಿರೀಕ್ಷಿಸಿದ್ದ ಪಾಲಕರಿಗೆ ಮತ್ತು ಮಕ್ಕಳಿಗೆ ಅಘಾತವಾಗಿದೆ. ಈ ಮಧ್ಯೆ, ಮೂರನೇ ಅಲೆಯ ಬಗೆಗಿನ ಊಹಾಪೋಹಗಳು ದಿಕ್ಕುತೋಚದಂತೆ ಮಾಡಿದೆ. ಈ ಸಂದರ್ಭದಲ್ಲಿ ಮುಂದಿನ ಸಾಲಿನ ಶಿಕ್ಷಣ, ಕಲಿಕೆಯ ಬಗ್ಗೆ ಆಯ್ಕೆಗಳೇನು ಎಂಬ ಬಗ್ಗೆ ಶಿಕ್ಷಣ ಇಲಾಖೆ ಯೋಜನೆ –ಎ, ಯೋಜನೆ –ಬಿ, ಯೋಜನೆ-ಸಿ ರೂಪಿಸಿ, ಈ ಎಲ್ಲವನ್ನು ನಿಭಾಯಿಸುವುದು ಹೇಗೆ ಎಂಬ ಸ್ಪಷ್ಟತೆ ನೀಡಬೇಕು. ಈ ಬಗ್ಗೆ ಚರ್ಚಿಸಿ ಸೂಕ್ತ ಯೋಜನೆ ರೂಪಿಸಬೇಕು’ ಎಂದೂ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.