ಬೆಂಗಳೂರು: ಕೆ.ಆರ್. ಪುರದ ಬಳಿಯಿರುವ ಎಲೆ ಮಲ್ಲಪ್ಪ ಶೆಟ್ಟಿ ಕೆರೆಯಲ್ಲಿ ತ್ಯಾಜ್ಯ ತುಂಬಿದ್ದು, ಸ್ಥಳೀಯ ನಾಗರಿಕರು, ‘ಎಲೆ ಮಲ್ಲಪ್ಪ ಕೆರೆ ಉಳಿಸಿ’ ಅಭಿಯಾನದ ಮೂಲಕ ಕೆರೆಯ ಸ್ವಚ್ಛತಾ ಕಾರ್ಯ ಮಾಡಿದರು.
ಮೇಡಹಳ್ಳಿ ರೈಸಿಂಗ್, ದ ಇಂಡಿಯನ್ ಪ್ಲಾಗರ್ಸ್ ಆರ್ಮಿ, ಫ್ರೆಂಡ್ಸ್ ಆಫ್ ಲೇಕ್ಸ್ ಹಾಗೂ ಎಲೆ ಮಲ್ಲಪ್ಪ ಶೆಟ್ಟಿ ಕೆರೆ ಸ್ವಯಂಸೇವಕರು 50ಕ್ಕೂ ಅಧಿಕ ಮಂದಿ ಈ ಕಾರ್ಯದಲ್ಲಿ ತೊಡಗಿಸಿಕೊಂಡು 20 ಚೀಲಕ್ಕೂ ಅಧಿಕ ಕಸ ಸಂಗ್ರಹ ಮಾಡಿದರು.
‘ಎಲೆ ಮಲ್ಲಪ್ಪ ಶೆಟ್ಟಿ ಕೆರೆಯನ್ನು ಪ್ಲಾಸ್ಟಿಕ್ ರಹಿತ, ಕಸರಹಿತ, ಮಿಶ್ರತ್ಯಾಜ್ಯರಹಿತವನ್ನಾಗಿ ಮಾಡಲು ಸ್ವಚ್ಛತಾ ಕಾರ್ಯ ಒಂದು ಹೆಜ್ಜೆಯಾಗಿದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ಆದೇಶ, ಸ್ಥಳೀಯರು ಹೋರಾಟ ನಡೆಸುತ್ತಿದ್ದರೂ ಕೆರೆಯಲ್ಲಿ ಕಟ್ಟಡ ತ್ಯಾಜ್ಯವನ್ನು ಇಂದಿಗೂ ಸುರಿಯಲಾಗುತ್ತಿದೆ. ಒಂದು ಕಡೆ ಕೆರೆಗೆ ಕಸ ತುಂಬಲಾಗುತ್ತಿದೆ. ಇನ್ನೊಂದೆಡೆ ಒತ್ತುವರಿಯಿಂದ ಕೆರೆ ನಲುಗುತ್ತಿದೆ. ಬಿಬಿಎಂಪಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಿತ ಸಂಬಂಧ ಪಟ್ಟ ಯಾರೂ ಇತ್ತ ಗಮನ ಹರಿಸುತ್ತಿಲ್ಲ’ ಎಂದು ಸ್ವಯಂ ಸೇವಕರು ದೂರಿದರು.
ಸ್ವಚ್ಛತಾ ಕಾರ್ಯದಲ್ಲಿ ಎಲೆ ಮಲ್ಲಪ್ಪ ಶೆಟ್ಟಿಯವರ ಕುಟುಂಬದ ಸದಸ್ಯರೂ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.