ಬೆಂಗಳೂರು: ನಗರದಲ್ಲಿ ಯಾವುದೇ ಕಾರಣಕ್ಕೂ ಎಲಿವೇಟೆಡ್ ಕಾರಿಡಾರ್ ನಿರ್ಮಿಸಬಾರದು ಎಂದು ಸಿಟಿಜನ್ಸ್ ಫಾರ್ ಬೆಂಗಳೂರು (ಸಿಎಫ್ಬಿ) ಹಾಗೂ ಮಲ್ಲೇಶ್ವರ ಸ್ವಾಭಿಮಾನ ಸಂಸ್ಥೆಯ ಪ್ರತಿನಿಧಿಗಳು ಉಪಮುಖ್ಯಮಂತ್ರಿ ಸಿ.ಎನ್. ಅಶ್ವತ್ಥನಾರಾಯಣ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ಸಾರ್ವಜನಿಕ ಸಾರಿಗೆ ಉತ್ತೇಜಿಸಲು ಕ್ರಮ ತೆಗೆದುಕೊಳ್ಳಬೇಕು.ಬಸ್ ಪ್ರಯಾಣ ದರವನ್ನು ಕಡಿಮೆಗೊಳಿಸಬೇಕು. ಉಪನಗರ ರೈಲು ಯೋಜನೆಗೆ ಬೇಗ ಅನುಮತಿ ಪಡೆಯಬೇಕು ಮತ್ತು ಬಸ್ ಆದ್ಯತಾ ಪಥ ನಿರ್ಮಾಣ ಕಾರ್ಯ ಚುರುಕುಗೊಳಿಸಬೇಕು. ಈ ಎರಡು ಸೌಲಭ್ಯಗಳಿದ್ದರೆ ಸಾಕು. ಆದರೆ, ಯಾವುದೇ ಕಾರಣಕ್ಕೂ ಎಲಿವೇಟೆಡ್ ಕಾರಿಡಾರ್ ಬೇಡ’ ಎಂದು ಸಂಘಟನೆಗಳಪ್ರತಿನಿಧಿಗಳು ಮನವಿ ಮಾಡಿದರು.
‘ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಬೇಡ ಎಂದು ನೂರಾರು ನಾಗರಿಕ ಸಂಸ್ಥೆಗಳು ಹಲವು ಬಾರಿ ಮನವಿ ಸಲ್ಲಿಸಿವೆ. ಪ್ರತಿಪಕ್ಷದಲ್ಲಿದ್ದಾಗ ಬಿಜೆಪಿಯೂ ಈ ಯೋಜನೆಯನ್ನು ವಿರೋಧಿಸಿತ್ತು. ಈಗ ಆ ಪಕ್ಷದ ಶಾಸಕರೇ ಒತ್ತಾಯಿಸುತ್ತಿರುವುದು
ಎಷ್ಟು ಸರಿ’ ಎಂದು ಪ್ರತಿನಿಧಿಗಳು ಪ್ರಶ್ನಿಸಿದರು.
‘ಪೆರಿಫೆರಲ್ ವರ್ತುಲ ರಸ್ತೆಗಳ ನಿರ್ಮಾಣ ಮತ್ತು ಇತರೆ ಯೋಜನೆಗಳಂತೆ, ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಬಜೆಟ್ನಲ್ಲಿ ಹಣ ಮೀಸಲಿಡುವಂತೆ ಕೋರಲಾಗಿದೆ. ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಈ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ’ ಎಂದು ಅಶ್ವತ್ಥನಾರಾಯಣ ಹೇಳಿದರು.
‘ನಗರದ ಅತಿ ದಟ್ಟಣೆಯ 12 ಮಾರ್ಗಗಳಲ್ಲಿ ಬಸ್ ಆದ್ಯತಾ ಪಥ ನಿರ್ಮಾಣಕ್ಕೆ ಆದ್ಯತೆ ನೀಡುತ್ತೇವೆ. ಉಪನಗರ ರೈಲು ಯೋಜನೆಗೆ ಶೀಘ್ರದಲ್ಲಿಯೇ ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು (ಸಿಸಿಇಎ) ಅನುಮತಿ ನೀಡಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.