ADVERTISEMENT

ಪ್ಲಾಸ್ಟಿಕ್ ಚೀಲದಲ್ಲಿ ಭ್ರೂಣ: ವಾಹನ ಹರಿದು ಛಿದ್ರ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2023, 23:15 IST
Last Updated 4 ಮಾರ್ಚ್ 2023, 23:15 IST
   

ಬೆಂಗಳೂರು: ಪ್ಲಾಸ್ಟಿಕ್ ಪೊಟ್ಟಣದಲ್ಲಿ ಸುತ್ತಿಡಲಾಗಿದ್ದ ಭ್ರೂಣದ ಮೇಲೆ ವಾಹನಗಳು ಹರಿದಾಡಿದ್ದು, ಇದರಿಂದಾಗಿ ಭ್ರೂಣದ ದೇಹ ಛಿದ್ರವಾಗಿ ಬಿದ್ದಿದ್ದ ಘಟನೆ ಅಮೃತಹಳ್ಳಿಯಲ್ಲಿ ನಡೆದಿದೆ. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಪಂಪಾ ಎಕ್ಸ್‌ಟೆನ್ಶನ್ 8ನೇ ಎ ಅಡ್ಡರಸ್ತೆಯಲ್ಲಿ ನಡೆದಿರುವ ಘಟನೆ ಸಂಬಂಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ. ಭ್ರೂಣ ಎಸೆದವರು ಯಾರು ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ’ ಎಂದು ಪೊಲೀಸರು ಹೇಳಿದರು.

‘ಹೊಯ್ಸಳ ವಾಹನದ ಸಿಬ್ಬಂದಿ ಠಾಣೆ ವ್ಯಾಪ್ತಿಯಲ್ಲಿ ಫೆ. 28ರಂದು ಗಸ್ತು ತಿರುಗುತ್ತಿದ್ದರು. ಪಂಪಾ ಎಕ್ಸ್‌ಟೆನ್ಶನ್‌ಗೆ ಹೋದಾಗ, ರಸ್ತೆಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಪೊಟ್ಟಣ ರಕ್ತಸಿಕ್ತವಾಗಿದ್ದನ್ನು ನೋಡಿದ್ದರು. ಪ್ಲಾಸ್ಟಿಕ್ ಪರಿಶೀಲಿಸಿದಾಗ, ಅದರಲ್ಲಿ ಭ್ರೂಣವಿರುವುದು ಗೊತ್ತಾಗಿತ್ತು.’

ADVERTISEMENT

‘ಪ್ಲಾಸ್ಟಿಕ್ ಪೊಟ್ಟಣದಲ್ಲಿ ಸುಮಾರು ಐದು ತಿಂಗಳಿನ ಭ್ರೂಣ ಇರಿಸಿರುವ ಅಪರಿಚಿತರು, ಅದನ್ನು ಕಸದ ಬುಟ್ಟಿಗೆ ಎಸೆದಿದ್ದಾರೆ. ಕಸದ ಜೊತೆಯಲ್ಲಿ ಪ್ಲಾಸ್ಟಿಕ್‌ ಪೊಟ್ಟಣವನ್ನು ಬಿಬಿಎಂಪಿ ವಾಹನಕ್ಕೆ ತುಂಬಲಾಗಿತ್ತು.‘ ‘ರಸ್ತೆಯಲ್ಲಿ ವಾಹನ ಹೋಗುವಾಗ, ಪ್ಲಾಸ್ಟಿಕ್ ಪೊಟ್ಟಣ ಕೆಳಗೆ ಬಿದ್ದಿದೆ. ಅದೇ ರಸ್ತೆಯಲ್ಲಿ ಹೊರಟಿದ್ದ ವಾಹನಗಳು, ಭ್ರೂಣವಿದ್ದ ಪ್ಲಾಸ್ಟಿಕ್ ಪೊಟ್ಟಣದ ಮೇಲೆ ಹರಿದಿವೆ. ಇದರಿಂದಾಗಿ ಗುರುತು ಸಿಗದ ರೀತಿಯಲ್ಲಿ ಭ್ರೂಣ ಛಿದ್ರವಾಗಿದೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.