ಬೆಂಗಳೂರು: ಮದ್ಯ ವ್ಯಸನಿ ಎಂಜಿನಿಯರೊಬ್ಬ ಹಣ ಸಂಪಾದನೆಗಾಗಿ ಮೊಬೈಲ್ ಟವರ್ಗೆ ಅಳವಡಿಸುವ ರೂಟರ್ ಹಾಗೂ ಬಿಡಿಭಾಗಗಳನ್ನು ಕದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ!
ವಿಜಿನಾಪುರದ ರಾಮಮೂರ್ತಿ ನಗರ ನಿವಾಸಿ ಕರುಣಾಕರನ್ ಅಲಿ ಯಾಸ್ ಕಾರ್ತಿಕ್ ಅಲಿಯಾಸ್ ಕರ್ಣ (31) ಬಂಧಿತ ಎಂಜಿನಿಯರ್. ಆತನಿಂದ ಸಿಸ್ಕೊ ಕಂಪನಿಯ ₹ 3 ಲಕ್ಷ ಮೌಲ್ಯದ ರೂಟರ್ ಮತ್ತು ಬಿಡಿಭಾಗಗಳನ್ನು ವಶಪಡಿಸಿಕೊಳ್ಳಲಾಗಿದೆ.
ಡಿಪ್ಲೊಮಾ ಓದಿರುವ ಆರೋಪಿ, 2011ರಿಂದ ಎರಡು ವರ್ಷ ನೋಕಿಯಾ ಸಿಮೆನ್ಸ್ ನೆಟ್ವರ್ಕ್ನಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡಿದ್ದ. ಬಳಿಕ ಟಾಟಾ ಡೊಕೊಮೊ ಕಂಪನಿಯಲ್ಲಿ ಮೊಬೈಲ್ ಟವರ್ ಕಂಬಗಳ ಮೇಲ್ವಿಚಾರಕ ಹಾಗೂ ಎಂಜಿನಿಯರ್ ಆಗಿ ಕೆಲಸ ಮಾಡಿದ್ದ. ಕೆಲಸ ತ್ಯಜಿಸಿದ್ದ ಆರೋಪಿ, ಒಂದೂವರೆ ವರ್ಷದಿಂದ ಮನೆಯಲ್ಲಿಯೇ ಇದ್ದ. ಆತನ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದು, ಜೀವನ ನಿರ್ವಹಣೆ ಕಷ್ಟವಾಗಿತ್ತು. ಅಲ್ಲದೆ, ಕರುಣಾಕರನ್ ಮದ್ಯ ವ್ಯಸನಿಯಾಗಿದ್ದ.
ಹಣ ಸಂಪಾದಿಸಲು ಆತ, ಟವರ್ ಕಂಬಗಳ ರೂಟರ್ ಕಳವು ಮಾಡಲು ನಿರ್ಧರಿಸಿದ್ದ. ಕಂಬಗಳ ದುರಸ್ತಿ ಮಾಡಿದ್ದ ಆರೋಪಿಗೆ ಅದನ್ನು ಬಿಚ್ಚುವ ರೀತಿ ಗೊತ್ತಿತ್ತು. ಹೀಗಾಗಿ, ರೂಟರ್ಗಳನ್ನು ಅವಕ್ಕೆ ಅಳವಡಿಸುವ ಎಸ್ಎಫ್ಸಿಗಳನ್ನು ಕಳ್ಳತನ ಮಾಡುತ್ತಿದ್ದ. ಹಗಲು ಬೈಕ್ನಲ್ಲಿ ಸುತ್ತಾಡಿ ಮುಸುಕುಧಾರಿಯಾಗಿ ಕಳವು ಮಾಡುತ್ತಿದ್ದ. ಕದ್ದ ವಸ್ತುಗಳನ್ನು ಗುಜರಿ ಅಂಗಡಿಗೆ ಮಾರುತ್ತಿದ್ದ. ಕದ್ದ ವಸ್ತು ಗಳನ್ನು ಓಎಲ್ಎಕ್ಸ್ನಲ್ಲೂ ಪೋಸ್ಟ್ ಮಾಡಿ ಮಾರಾಟ ಮಾಡುತ್ತಿದ್ದ.
ಹೊಸ ಕೋಟೆ, ರಾಮಮೂರ್ತಿ ನಗರ, ಹೆಣ್ಣೂರು , ವೈಟ್ಫೀಲ್ಡ್ ಠಾಣೆಗಳಲ್ಲೂ ಆತನ ವಿರುದ್ಧ ಪ್ರಕರಣ ದಾಖಲಾಗಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.