ADVERTISEMENT

ಹೇಮಂತ್ ನಿಂಬಾಳ್ಕರ ವಿರುದ್ಧ ವಿಚಾರಣೆ ರದ್ದು

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2021, 17:02 IST
Last Updated 19 ಮಾರ್ಚ್ 2021, 17:02 IST
ಹೇಮಂತ್ ನಿಂಬಾಳ್ಕರ
ಹೇಮಂತ್ ನಿಂಬಾಳ್ಕರ   

ಬೆಂಗಳೂರು: ಐ ಮಾನಿಟರಿ ಅಡ್ವೈಸರಿ (ಐಎಂಎ) ಹಗರಣದಲ್ಲಿ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌, ಪ್ರಾಸಿಕ್ಯೂಷನ್ ಅನುಮತಿ ಮತ್ತು ದೋಷಾರೋಪ ಪಟ್ಟಿಯನ್ನು ಹೈಕೋರ್ಟ್ ರದ್ದುಪಡಿಸಿದೆ.

ಐಎಂಎ ಪರವಾಗಿ ವರದಿಗಳನ್ನು ಸಿದ್ಧಪಡಿಸಿ ಕ್ಲೀನ್ ಚಿಟ್ ನೀಡಿದ್ದರು ಎಂಬ ಆರೋಪದಲ್ಲಿ 2019ರಲ್ಲಿ ನಿಂಬಾಳ್ಕರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು. 2020ರಲ್ಲಿ ಭ್ರಷ್ಟಾಚಾರ ತಡೆ(ಪಿ.ಸಿ) ಕಾಯ್ದೆಯಡಿ ಮತ್ತೊಂದು ಎಫ್‌ಐಆರ್ ದಾಖಲಿಸಿತ್ತು.

ಪಿ.ಸಿ ಕಾಯ್ದೆಯ ಸೆಕ್ಷನ್ 17ಎ(ಬಿ) ಅಡಿಯಲ್ಲಿ ವಿಚಾರಣೆ ನಡೆಸಲು 2020ರ ಜನವರಿ 7ರಂದು ಅನುಮತಿ ನೀಡಲಾಗಿದೆ. ಆದರೆ, ಅದಕ್ಕೂ ಮುನ್ನ 2019ರ ನವೆಂಬರ್ 8ರಂದೇ ನಿಂಬಾಳ್ಕರ ಅವರ ಮನೆ ಮತ್ತು ಕಚೇರಿಗಳಲ್ಲಿ ಶೋಧ ನಡೆಸಿರುವುದನ್ನು ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅವರಿದ್ದ ಪೀಠ ಗಮನಿಸಿತು.

ADVERTISEMENT

‘ಸಾರ್ವಜನಿಕ ಅಧಿಕಾರಿ ತನ್ನ ಕರ್ತವ್ಯ ನಿರ್ವಹಣೆ ವೇಳೆ ಮಾಡಿದ ಯಾವುದೇ ಶಿಫಾರಸು ಮತ್ತು ನಿರ್ಧಾರಕ್ಕೆ ಸಂಬಂಧಿಸಿದಂತೆ ತನಿಖೆ ಮಾಡುವುದು ಪಿ.ಸಿ ಕಾಯ್ದೆಯ ಸೆಕ್ಷನ್ 17ರ ಪ್ರಕಾರ ನಿಷಿದ್ಧ’ ಎಂದು ಪೀಠ ಅಭಿಪ್ರಾಯಪಟ್ಟಿತು.‌ ‘ಈ ಕಾಯ್ದೆ ಉಲ್ಲಂಘಿಸಿ ಅರ್ಜಿದಾರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ವಿಚಾರಣೆಗೆ ಅನುಮತಿ ನೀಡಬಾರದು’ ಎಂದು ಪೀಠ ತಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.