ಬೆಂಗಳೂರು: ಪತ್ನಿ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಕಾರಣಕ್ಕೆ ಎ.ಸಿ. ಮೆಕ್ಯಾನಿಕ್ನನ್ನು ಅಪಹರಿಸಿ ಕೊಲೆ ಮಾಡಿದ್ದ ಆರೋಪದಲ್ಲಿ, ಪತಿ ಮತ್ತು ಆತನ ಇಬ್ಬರು ಸ್ನೇಹಿತರನ್ನು ಡಿಜೆ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ತಬ್ರೇಜ್, ನಿಜಾಮ್ ಮತ್ತು ಅಲಿ ಬಂಧಿತರು. ತಬ್ರೇಜ್ನ ಪತ್ನಿಯ ಜೊತೆ ನೆಲೆಸಿದ್ದ ಸುಭಾನ್ ಎಂಬಾತನ ಕೊಲೆ ಸಂಬಂಧ ಈ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ತಬ್ರೇಜ್ನ ಪತ್ನಿಯನ್ನು ಕರೆದೊಯ್ದು ತುಮಕೂರಿನಲ್ಲಿ ನೆಲೆಸಿದ್ದ ಸುಭಾನ್ನನ್ನು ಈ ಮೂವರು ಅಪಹರಿಸಿ, ಕೊಂದಿರುವ ಆರೋಪದಲ್ಲಿ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತಬ್ರೇಜ್ ಪತ್ನಿ ಮದುವೆಯಾದ ಬಳಿಕ ಸುಭಾನ್ ಜೊತೆ ಸಲಗೆಯಿಂದ ಇದ್ದಳು. ಬಳಿಕ ಸುಭಾನ್ ಆಕೆಯನ್ನು ತನ್ನ ಜೊತೆಗೇ ಕರೆದುಕೊಂಡು ಹೋಗಿದ್ದ. ಈ ವಿಷಯ ಗೊತ್ತಾಗಿ ತನ್ನ ಇಬ್ಬರು ಸ್ನೇಹಿತರಾದ ನಿಜಾಮ್ ಹಾಗೂ ಅಲಿಯನ್ನು ಕರೆದುಕೊಂಡು ತುಮಕೂರಿಗೆ ಮೇ 30ರಂದು ಕಾರಿನಲ್ಲಿ ತೆರಳಿ ಸುಭಾನ್ನನ್ನು ತಬ್ರೇಜ್ ಅಪಹರಿಸಿದ್ದಾನೆ. ಬಳಿಕ ಅವನನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ಶ್ಯಾಂಪುರ ರೈಲ್ವೆ ಗೇಟ್ ಬಳಿ ಕೊಲೆ ಮಾಡಿ, ಶವವನ್ನು ಎಸೆದು ಪರಾರಿಯಾಗಿದ್ದರು ಎನ್ನಲಾಗಿದೆ.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಹಂತಕರನ್ನು ಗುರುವಾರ ಬಂಧಿಸಿದ್ದಾರೆ. ಹತ್ಯೆಯ ಪ್ರಮುಖ ಆರೋಪಿ ತಬ್ರೇಜ್, ಕಿಸೆಗಳ್ಳನಾಗಿದ್ದು, ಆತನ ಮೇಲೆ ಹಲವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.