ಬೆಂಗಳೂರು: ಫೇಸ್ಬುಕ್ ಮೂಲಕ ಮಹಿಳೆಯನ್ನು ಪರಿಚಯ ಮಾಡಿಕೊಂಡು ಸಹಾಯದ ನೆಪದಲ್ಲಿ ಅತ್ಯಾಚಾರ ಎಸಗಿ ಸುಲಿಗೆ ಮಾಡಲಾಗಿದ್ದು, ಈ ಸಂಬಂಧ ಕುಂಬಳಗೂಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಸ್ಥಳೀಯ ನಿವಾಸಿಯಾಗಿರುವ 46 ವರ್ಷದ ಮಹಿಳೆ ದೂರು ನೀಡಿದ್ದಾರೆ. ಆರೋಪಿ ಕೆ.ಸಿ.ಮಧುಕೇಶ್ವರ್ ಎಂಬುವರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಬ್ಯೂಟಿಷಿಯನ್ ಆಗಿರುವ ಮಹಿಳೆಗೆ ಫೇಸ್ಬುಕ್ನಲ್ಲಿ ಮಧುಕೇಶ್ವರ್ ಪರಿಚಯವಾಗಿತ್ತು. ವಲಸೆ ಕಾರ್ಮಿಕರಿಗೆ ಸಹಾಯ ಮಾಡುವ ಉದ್ದೇಶದಿಂದ ಸಲೂನ್ ತೆರೆಯಬೇಕೆಂದು ಮಹಿಳೆ ಹೇಳಿಕೊಂಡಿದ್ದರು. ತಾವೊಬ್ಬ ಬ್ಯಾಂಕ್ ಉದ್ಯೋಗಿ ಎಂದಿದ್ದ ಆರೋಪಿ, ಸಲೂನ್ ತೆರೆಯಲು ಹಣಕಾಸಿನ ಸಹಾಯ ಮಾಡುವುದಾಗಿ ತಿಳಿಸಿದ್ದರು.’
‘ಜೂನ್ 7ರಂದು ಮಹಿಳೆಯ ಹುಟ್ಟುಹಬ್ಬವಿತ್ತು. ಅದೇ ದಿನವೇ ತಾವು ವಾಸವಿದ್ದ ಅಪಾರ್ಟ್ಮೆಂಟ್ ಸಮುಚ್ಚಯ ಬಳಿ ಮಹಿಳೆಯನ್ನು ಕರೆಸಿಕೊಂಡಿದ್ದ ಆರೋಪಿ, ಸಮೀಪದ ಮಳಿಗೆಯೊಂದನ್ನು ತೋರಿಸಿ ಅಲ್ಲಿಯೇ ಸಲೂನ್ ಮಾಡಲು ಸಲಹೆ ನೀಡಿದ್ದರು. ನಂತರ, ಮಹಿಳೆಯನ್ನು ತಮ್ಮ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದರು. ನಂತರ, ಮಹಿಳೆ ಮೈ ಮೇಲಿನ ಆಭರಣ ಸುಲಿಗೆ ಮಾಡಿದ್ದರು. ಭಯಗೊಂಡ ಮಹಿಳೆ ಅಲ್ಲಿಂದ ಹೊರಟು ಬಂದಿದ್ದರು. ಸ್ನೇಹಿತರ ಜೊತೆ ವಿಷಯ ಹಂಚಿಕೊಂಡಿದ್ದರು. ಸ್ನೇಹಿತರ ಸಲಹೆ ಮೇರೆಗೆ ಠಾಣೆಗೆ ಬಂದು ದೂರು ನೀಡಿದ್ದಾರೆ. ಆರೋಪಿ ತಲೆಮರೆಸಿಕೊಂಡಿದ್ದಾರೆ’ ಎಂದೂ ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.