ADVERTISEMENT

ಬೆಂಗಳೂರು: ನಕಲಿ ವೈದ್ಯರ ವಿರುದ್ಧ ಕ್ರಮಕ್ಕೆ ಚರ್ಮರೋಗ ತಜ್ಞರ ಆಗ್ರಹ

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 18:11 IST
Last Updated 28 ಜುಲೈ 2025, 18:11 IST
ಚರ್ಮರೋಗ ತಜ್ಞರು ಡಾ. ಶರಣಪ್ರಕಾಶ ಪಾಟೀಲ ಅವರ ಜತೆಗೆ ಚರ್ಚಿಸಿದರು
ಚರ್ಮರೋಗ ತಜ್ಞರು ಡಾ. ಶರಣಪ್ರಕಾಶ ಪಾಟೀಲ ಅವರ ಜತೆಗೆ ಚರ್ಚಿಸಿದರು   

ಬೆಂಗಳೂರು: ‘ಕೆಲ ದಂತವೈದ್ಯರು ಹಾಗೂ ನಕಲಿ ವೈದ್ಯರು ಕಾನೂನು ಬಾಹಿರವಾಗಿ ಚರ್ಮದ ಚಿಕಿತ್ಸೆ, ಕೂದಲು ಕಸಿ ಮತ್ತು ಸೌಂದರ್ಯ ಚಿಕಿತ್ಸೆಗಳನ್ನು ಒದಗಿಸುತ್ತಿದ್ದು, ಅವರ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಚರ್ಮರೋಗ ತಜ್ಞರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. 

ಈ ಬಗ್ಗೆ ಭಾರತೀಯ ಚರ್ಮ, ಲೈಂಗಿಕ ಮತ್ತು ಕುಷ್ಠ ರೋಗ ತಜ್ಞರ ಸಂಘದ (ಐಎಡಿವಿಎಲ್‌) ಕರ್ನಾಟಕ ಶಾಖೆಯ ಪ್ರತಿನಿಧಿಗಳ ನಿಯೋಗವು ಗುರುವಾರ ಇಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರನ್ನು ಭೇಟಿ ಮಾಡಿ, ಚರ್ಚಿಸಿದರು. ದಂತ ವೈದ್ಯರು ಅನುಮತಿಯಿಲ್ಲದೆ ಕೂದಲು ನಾಟಿ, ಚರ್ಮ ಸೌಂದರ್ಯ ಮತ್ತು ಚರ್ಮ ವೈದ್ಯಕೀಯ ಪ್ರಕ್ರಿಯೆಗಳನ್ನು ನಡೆಸುತ್ತಿರುವುದರ ಕುರಿತು ಕಳವಳ ವ್ಯಕ್ತ‍ಪಡಿಸಿ, ಈ ಬಗ್ಗೆ ಸಾರ್ವಜನಿಕ ಸ್ಪಷ್ಟನೆ ನೀಡುವಂತೆ ಮನವಿ ಮಾಡಿದರು. 

‘ಭಾರತೀಯ ದಂತ ಪರಿಷತ್‌ನ 2022ರ ಸಾರ್ವಜನಿಕ ಅಧಿಸೂಚನೆಯನ್ನು ದಂತ ವಿಜ್ಞಾನ ಪದವೀಧರರು ಹಾಗೂ ದಂತ ತಜ್ಞರು ತಪ್ಪಾಗಿ ಅರ್ಥೈಸಿಕೊಂಡು, ಚರ್ಮ ಸಂಬಂಧಿತ ಸೌಂದರ್ಯ ಪ್ರಕ್ರಿಯೆಗಳನ್ನು ನಡೆಸುತ್ತಿದ್ದಾರೆ. ರಾಷ್ಟ್ರೀಯ ವೈದ್ಯಕೀಯ ಆಯೋಗವು 2022ರ ಸೆ.20ರಲ್ಲಿ ಹೊರಡಿಸಿದ ಸುತ್ತೋಲೆ ಪ್ರಕಾರ, ಚರ್ಮ ವೈದ್ಯಕೀಯ ಅಥವಾ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆಯಲ್ಲಿ ಸ್ನಾತಕೋತ್ತರ ಪದವಿ ಹೊಂದಿರುವ ನೋಂದಾಯಿತ ವೈದ್ಯರಷ್ಟೇ ಈ ಪ್ರಕ್ರಿಯೆ ನಡೆಸಬೇಕು’ ಎಂದು ಚರ್ಮರೋಗ ತಜ್ಞರು ಸಚಿವರಿಗೆ ತಿಳಿಸಿದರು.  

ADVERTISEMENT

‘ರಾಜ್ಯದಾದ್ಯಾಂತ ‘ಡೆಂಟಲ್ ಸ್ಕಿನ್ & ಹೇರ್ ಕ್ಲಿನಿಕ್‌’ಗಳು ಹರಡಿಕೊಂಡಿವೆ. ರಾಜ್ಯದಲ್ಲಿ ಸಾವಿರಕ್ಕೂ ಅಧಿಕ ನಕಲಿ ವೈದ್ಯರು ಈ ವಿಭಾಗದಲ್ಲಿ ಕಾನೂನು ಬಾಹಿರ ಕ್ಲಿನಿಕ್‌ಗಳನ್ನು ನಡೆಸುತ್ತಿದ್ದಾರೆ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ನಿಗದಿತ ಚಿಕಿತ್ಸೆಗೆ ಅರ್ಹತೆ ಹೊಂದಿರದ ಹಾಗೂ ನಕಲಿ ವೈದ್ಯರ ಮೇಲೆ ಕಾನೂನಿನ ಅಡಿ ಕ್ರಮ ಕೈಗೊಳ್ಳಬೇಕು. ರಾಷ್ಟ್ರೀಯ ವೈದ್ಯಕೀಯ ಆಯೋಗದ ಮಾರ್ಗಸೂಚಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು’ ಎಂದು ಒತ್ತಾಯಿಸಿದರು. 

ಐಎಡಿವಿಎಲ್‌ ಕರ್ನಾಟಕ ಶಾಖೆಯ ಗೌರವ ಖಜಾಂಚಿ ಡಾ. ಸುಜಲಾ ಸಚ್ಚಿದಾನಂದ ಆರಾಧ್ಯ, ಕೆಪಿಎಂಇ ಮತ್ತು ಪ್ರಾಕ್ಟೀಸ್ ಮ್ಯಾನೆಜ್‌ಮೆಂಟ್ ಸೆಲ್ ಅಧ್ಯಕ್ಷ ಡಾ. ವೆಂಕಟರಾಮ್ ಮೈಸೂರು, ಸಂಚಾಲಕ ಡಾ. ಜಗದೀಶ್ ಪಿ., ಡಾ. ಅಕ್ಷಯ್ ಸಾಮಗಾನಿ, ರಾಜಾಜಿನಗರ ಇಎಸ್‌ಐಸಿ ವೈದ್ಯಕೀಯ ಕಾಲೇಜಿನ ಚರ್ಮರೋಗ ವಿಭಾಗದ ಮುಖ್ಯಸ್ಥ ಡಾ. ಗಿರೀಶ್ ಎಂ.ಎಸ್. ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.