ಬೆಂಗಳೂರು: ಪೊಲೀಸರ ಸೋಗಿನಲ್ಲಿ ಬಂದು 40ಕ್ಕೂ ಹೆಚ್ಚು ಮಹಿಳೆಯರಿಂದ ಒಡವೆ ದೋಚಿದ್ದ ಸೈಯದ್ ಅಬೂಬಕರ್ ಎಂಬಾತನನ್ನು ಬಂಧಿಸಿರುವ ಚಂದ್ರಾಲೇಔಟ್ ಪೊಲೀಸರು, ₹50 ಲಕ್ಷ ಮೌಲ್ಯದ ಆಭರಣ ಜಪ್ತಿ ಮಾಡಿದ್ದಾರೆ.
ಕೋರಮಂಗಲದಲ್ಲಿ ಕೆಎಸ್ಆರ್ಪಿ ಸಿಬ್ಬಂದಿಯೊಬ್ಬರ ಮನೆಯಲ್ಲಿ ಖಾಕಿ ಸಮವಸ್ತ್ರ ಕದ್ದಿದ್ದ ಸೈಯದ್, ಬನ್ನೇರುಘಟ್ಟ ರಸ್ತೆಯಲ್ಲಿ ಸೆಕ್ಯುರಿಟಿ ಗಾರ್ಡ್ನಿಂದ ವಾಕಿ ಟಾಕಿ ಕದ್ದಿದ್ದ. ಅವುಗಳನ್ನು ಬಳಸಿ ದುಷ್ಕೃತ್ಯ ಎಸಗುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸ್ ಸಮವಸ್ತ್ರ ಹಾಕಿಕೊಂಡು ನಿರ್ಜನ ಪ್ರದೇಶದಲ್ಲಿ ಓಡಾಡುತ್ತಿದ್ದ ಆರೋಪಿ, ಒಂಟಿ ಮಹಿಳೆಯನ್ನು ತಡೆದು ಮಾತನಾಡಿಸುತ್ತಿದ್ದ.
‘ನಾನು ಸ್ಥಳೀಯ ಠಾಣೆಯ ಕಾನ್ಸ್ಟೆಬಲ್. ಪಕ್ಕದ ರಸ್ತೆಯಲ್ಲಿ ದುಷ್ಕರ್ಮಿಗಳು ಮಹಿಳೆಯನ್ನು ಕೊಂದು ಒಡವೆ ಕಿತ್ತುಕೊಂಡು ಹೋಗಿದ್ದಾರೆ. ನೀವು ಹೀಗೆ ಆಭರಣ ಪ್ರದರ್ಶಿಸಿಕೊಂಡು ಓಡಾಡುವುದು ಸುರಕ್ಷಿತವಲ್ಲ. ಬ್ಯಾಗ್ನಲ್ಲಿ ಇಟ್ಟುಕೊಳ್ಳಿ’ ಎನ್ನುತ್ತಿದ್ದ. ಮಾತು ನಂಬಿ ಮಹಿಳೆ ಒಡವೆ ತೆಗೆಯುತ್ತಿದ್ದಂತೆ, ಅವುಗಳನ್ನು ಕರ್ಚೀಫ್ನಲ್ಲಿ ಹಾಕಿ ಕೊಡುವುದಾಗಿ ಪಡೆದುಕೊಳ್ಳುತ್ತಿದ್ದ. ನಂತರ ಗಮನ ಬೇರೆಡೆ ಸೆಳೆದು ಕರ್ಚೀಫ್ನಲ್ಲಿ ಕಲ್ಲುಗಳನ್ನು ಕಟ್ಟಿ ಬ್ಯಾಗ್ಗೆ ಹಾಕಿ ಕಳುಹಿಸಿತ್ತಿದ್ದ.
ಈಚೆಗೆ ಮಹಿಳೆಯೊಬ್ಬರಿಗೆ ವಂಚಿಸುತ್ತಿದ್ದ ಸಮಯದಲ್ಲೇ ಸೈಯದ್ ಸಿಕ್ಕಿಬಿದ್ದಿದ್ದಾನೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.