ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಯ ಭೂಸ್ವಾಧೀನಕ್ಕೆ ಬದಲಾಗಿ ಸೂಕ್ತ ಪರಿಹಾರ ನೀಡಿಲ್ಲ ಎಂದು ಆರೋಪಿಸಿ ಚಿಕ್ಕಮಗಳೂರು ಜಿಲ್ಲೆಯ ರೈತ ವಿಶುಕುಮಾರ್ ಅವರು ಶಾಸಕರ ಭವನದ ಆವರಣದಲ್ಲಿರುವ ಶ್ರೀಗಂಧದ ಮರ ಕಡಿದು ಮಂಗಳವಾರ ಪ್ರತಿಭಟಿಸಿದರು.
ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಬಂದ ವಿಧಾನಸೌಧ ಠಾಣೆ ಪೊಲೀಸರು, ವಿಶುಕುಮಾರ್ ಅವರನ್ನು ಬಂಧಿಸಿದರು. ಬಳಿಕ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿದರು.
ತುಮಕೂರು-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಗಾಗಿ ರೈತರ ಭೂಮಿ ಸ್ವಾಧೀನ ಮಾಡಲಾಗಿದೆ. ಅದರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಹೆಳಿಯೂರು ಗ್ರಾಮದಲ್ಲಿಯೂ ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ಹೀಗೆ ಭೂಸ್ವಾಧೀನ ಮಾಡಲಾದ ಭೂಮಿಯ ಪೈಕಿ 300 ಮೀಟರ್ ಭೂಮಿಯಲ್ಲಿ ಮೂರು ಸಾವಿರ ಶ್ರೀಗಂಧ ಮರಗಳಿವೆ. ಆ ಮರಗಳಿಗೆ ಸರ್ಕಾರ ತಲಾ ₹420 ಪರಿಹಾರ ನಿಗದಿ ಮಾಡಿದೆ. ಆದರೆ, ಈ ಪರಿಹಾರ ಸಾಲುವುದಿಲ್ಲ ಎಂದು ರೈತರು ಪ್ರತಿಭಟಿಸುತ್ತಿದ್ದಾರೆ. ಅದರ ನಡುವೆಯೇ ಅಧಿಕಾರಿಗಳು ಸುಮಾರು 30 ಶ್ರೀಗಂಧ ಮರಗಳನ್ನು ಕಡಿದಿದ್ದಾರೆ ಎಂದು ರೈತ ವಿಶುಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ನನ್ನ ಮಕ್ಕಳ ಜನುಮ ದಿನದ ನೆನಪಿಗಾಗಿ ಗಿಡ ನೆಟ್ಟಿದ್ದೆ. ಹೆದ್ದಾರಿ ಪಕ್ಕ ಇದೆ ಎಂದು ಮರವನ್ನು ಕಡಿದು ಹಾಕಿದ್ದಾರೆ. ನ್ಯಾಯಾಲಯ ಪರಿಹಾರ ನೀಡುವಂತೆ ಆದೇಶಿಸಿದರೂ ಅರಣ್ಯ ಇಲಾಖೆ ನೀಡಿಲ್ಲ. ಸರ್ಕಾರವನ್ನು ಎಚ್ಚರಿಸಲು ಶ್ರೀಗಂಧ ಮರವನ್ನು ಕಡಿದಿದ್ದೇನೆ. ನನ್ನ ಮರಗಳನ್ನು ಕಡಿದ ಅಧಿಕಾರಿಗಳಿಗೆ ಶಿಕ್ಷೆಯಾಗಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.