ಬೆಂಗಳೂರು: ‘ಸಾಂಪ್ರದಾಯಿಕ ವಿಧಾನದ ಬದಲು, ರೊಬೊಟಿಕ್ ತಂತ್ರಜ್ಞಾನ ಆಧಾರಿತ ಮಂಡಿಚಿಪ್ಪು ಬದಲಿ ಶಸ್ತ್ರಚಿಕಿತ್ಸೆಗೆ ಒಳಗಾದ್ದರಿಂದ ಶೀಘ್ರ ಚೇತರಿಸಿಕೊಳ್ಳಲು ಸಾಧ್ಯವಾಯಿತು’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಗುರುವಾರ ಇಲ್ಲಿನ ಬನ್ನೇರುಘಟ್ಟದ ಫೋರ್ಟಿಸ್ ಆಸ್ಪತ್ರೆ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಶಸ್ತ್ರಚಿಕಿತ್ಸೆ ಅವಧಿಯ ಅನುಭವವನ್ನು ಹಂಚಿಕೊಂಡರು.
‘ಕೆಲ ದಿನಗಳಿಂದ ಮೊಣಕಾಲಿನ ನೋವು ಕಾಡುತ್ತಿತ್ತು. ಮೆಟ್ಟಿಲುಗಳನ್ನು ಹತ್ತಲು ಸಹ ಸಾಧ್ಯವಾಗುತ್ತಿರಲಿಲ್ಲ. ಯಾವುದೇ ತೈಲ ಹಚ್ಚಿದರೂ ಪ್ರಯೋಜನ ಕಾಣಲಿಲ್ಲ. ನಂತರ ಸ್ನೇಹಿತರ ಸಲಹೆಯಂತೆ ಫೋರ್ಟಿಸ್ ಆಸ್ಪತ್ರೆಯಲ್ಲಿ ಮಂಡಿಚಿಪ್ಪು ಬದಲಿ ಶಸ್ತ್ರಚಿಕಿತ್ಸೆಗೆ ಒಳಗಾದೆ. ನನ್ನ ನಿರೀಕ್ಷೆಗೂ ಮೀರಿ ಅಲ್ಪಾವಧಿಯಲ್ಲಿಯೇ ಚೇತರಿಕೆ ಕಂಡಿದ್ದೇನೆ. ಮಂಡಿಚಿಪ್ಪು ಬದಲಿ ಶಸ್ತ್ರಚಿಕಿತ್ಸೆಗೆ ಒಳಗಾಗುವವರು ರೊಬೊಟಿಕ್ ತಂತ್ರಜ್ಞಾನ ಆಧಾರಿತ ಶಸ್ತ್ರಚಿಕಿತ್ಸೆಯನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ’ ಎಂದು ಅಭಿಮತ ವ್ಯಕ್ತಪಡಿಸಿದರು.
ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಶಾಖೆಯ ಅಧ್ಯಕ್ಷ ಡಾ.ವಿ.ವಿ. ಚಿನಿವಾಲರ್, ‘ನಾನೂ ಸಹ ಮಂಡಿಚಿಪ್ಪು ಬದಲಿ ಶಸ್ತ್ರಚಿಕಿತ್ಸೆಗೆ ಒಳಪಟ್ಟು, ಚೇತರಿಸಿಕೊಂಡಿದ್ದೇನೆ. ವೈದ್ಯಕೀಯ ಲೋಕಕ್ಕೆ ರೊಬೊಟಿಕ್ ತಂತ್ರಜ್ಞಾನದ ಆಗಮನವು ರೋಗಿಗಳಿಗೆ ಅನುಕೂಲಕರವಾಗಿದೆ’ ಎಂದರು.
ಫೋರ್ಟಿಸ್ ಆಸ್ಪತ್ರೆಯ ಮೂಳೆ ಶಸ್ತ್ರಚಿಕಿತ್ಸೆ ವಿಭಾಗದ ಡಾ.ನಾರಾಯಣ್ ಹುಲ್ಸೆ, ‘ರೊಬೊಟ್ ನೆರವು ವೈದ್ಯ ಲೋಕದಲ್ಲಿ ಹೊಸ ಅಧ್ಯಾಯ ಸೃಷ್ಟಿಸಿದೆ. ಅದರಲ್ಲೂ ಮೊಣಕಾಲು, ಸೊಂಟ ಇತರೆ ಕೀಲು ಬದಲಾವಣೆಯಂತಹ ಶಸ್ತ್ರಚಿಕಿತ್ಸೆಗಳಲ್ಲಿ ರೊಬೊಟಿಕ್ ತಂತ್ರಜ್ಞಾನವು ನಿಖರ ಶಸ್ತ್ರಚಿಕಿತ್ಸೆಗೆ ನೆರವಾಗಲಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.