ADVERTISEMENT

ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ ಸೋಗಿನಲ್ಲಿ ಉದ್ಯಮಿಗೆ ಬೆದರಿಕೆ: ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 16 ಜುಲೈ 2025, 0:10 IST
Last Updated 16 ಜುಲೈ 2025, 0:10 IST
   

ಬೆಂಗಳೂರು: ಉತ್ತರ ಭಾರತದ ಕುಖ್ಯಾತ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯಿ ತಂಡದ ಸದಸ್ಯರೆಂದು ಹೇಳಿಕೊಂಡು ನಗರದ ಉದ್ಯಮಿಗೆ ಬೆದರಿಕೆ ಹಾಕಿ, ಹಣ ಸುಲಿಗೆ ಮಾಡಲು ಪ್ರಯತ್ನಿಸಿದ್ದ ನಾಲ್ವರನ್ನು ಶೇಷಾದ್ರಿಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಮಾವಳ್ಳಿಯ ಮೊಹಮ್ಮದ್ ರಫೀಕ್, ಉತ್ತರ ಪ್ರದೇಶದ ಶಿಶುಪಾಲ್ ಸಿಂಗ್, ವಂಶ್ ಸಚ್‌ದೇವ್ ಹಾಗೂ ಅಮಿತ್ ಚೌಧರಿ ಬಂಧಿತರು.

ಆರೋಪಿಗಳಿಂದ ಒಂದು ಕಾರು, ಮೊಬೈಲ್ ಫೋನ್‌ ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್‌ ಸೀಮಂತ್‌ ಕುಮಾರ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.

ADVERTISEMENT

ಉತ್ತರ ಪ್ರದೇಶದ ಮೂವರು ಆರೋಪಿಗಳನ್ನು ಮೊಹಮ್ಮದ್ ರಫೀಕ್‌ ನಗರಕ್ಕೆ ಕರೆಸಿಕೊಂಡು ನಗರದ ಉದ್ಯಮಿಗೆ ಬೆದರಿಕೆ ಹಾಕಿದ್ದ. ಉದ್ಯಮಿ ನೀಡಿದ ದೂರು ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಲಾಯಿತು ಎಂದು ಪೊಲೀಸರು ಹೇಳಿದರು.

‘ಶೇಷಾದ್ರಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ನೆಹರೂ ನಗರದ ಅಪಾರ್ಟ್‌ಮೆಂಟ್‌ನಲ್ಲಿ ಉದ್ಯಮಿ ನೆಲಸಿದ್ದಾರೆ. ಪ್ಲೇವುಡ್‌ ವ್ಯಾಪಾರ ಮಾಡುತ್ತಿದ್ದಾರೆ. ಉದ್ಯಮಿಗೆ ಆರೋಪಿಗಳು ಕರೆ ಮಾಡಿ ಬೆದರಿಕೆ ಹಾಕಿದ್ದರು. ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಸದಸ್ಯರಾಗಿದ್ದು, ಒಂದು ಕೋಟಿ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದರು. ‘ಹಣ ಕೊಡದಿದ್ದರೆ ನಿನ್ನ ಮಗನನ್ನು ಅಪಹರಣ ಮಾಡುತ್ತೇವೆ’ ಎಂದು ಬೆದರಿಸಿದ್ದರು. ಈ ಸಂಬಂಧ ಶೇಷಾದ್ರಿಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

‘ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗಾಗಿ ಕೇಂದ್ರ ವಿಭಾಗ ಮತ್ತು ಸಿಸಿಬಿ ಒಳಗೊಂಡಂತೆ ಪ್ರತ್ಯೇಕ ತಂಡ ರಚಿಸಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡಾಗ ಜೆ.ಸಿ.ರಸ್ತೆಯಲ್ಲಿ ಕಾರ್ ಸೌಂಡ್ಸ್‌ ಶಾಪ್‌ನಲ್ಲಿ ಬಿಡಿಭಾಗಗಳನ್ನು ಮಾರಾಟ ಮಾಡುತ್ತಿದ್ದ ಮೊಹಮ್ಮದ್ ರಫೀಕ್‌ ಬೆದರಿಕೆ ಹಾಕಿದ್ದು ಪತ್ತೆಯಾಗಿತ್ತು. ಆತ ನೀಡಿದ ಸುಳಿವು ಆಧರಿಸಿ ಉತ್ತರ ಪ್ರದೇಶದ ಮೂವರನ್ನು ಬಂಧಿಸಲಾಯಿತು’ ಎಂದು ಸೀಮಂತ್‌ ಕುಮಾರ್ ಸಿಂಗ್‌ ಹೇಳಿದರು.

‘ಪ್ರತೀಕಾರಕ್ಕಾಗಿ ಕೃತ್ಯ’
‘ದೂರುದಾರ ಉದ್ಯಮಿ ಇತರೆ ಮೂವರೊಂದಿಗೆ ಸೇರಿಕೊಂಡು ಕಾರು ಬಿಡಿಭಾಗಗಳ ಮಾರಾಟ ಹಾಗೂ ರಿಯಲ್‌ ಎಸ್ಟೇಟ್‌ನಲ್ಲಿ ಮೋಸ ಮಾಡಿದ್ದರು. ಉದ್ಯಮಿಯ ವಿರುದ್ಧ ಸೇಡು ತೀರಿಸಿಕೊಳ್ಳಲು ಸಂಚು ರೂಪಿಸಿದ್ದೆ. ಬೆದರಿಕೆಯೊಡ್ಡಿ ಹಣ ವಸೂಲಿ ಮಾಡುವ ಉದ್ದೇಶದಿಂದ ಉತ್ತರ ಪ್ರದೇಶದಿಂದ ಮೂವರನ್ನು ಕರೆಸಿಕೊಂಡು ಕೃತ್ಯ ಎಸಗಿರುವುದಾಗಿ ರಫೀಕ್‌ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿಗಳು ಕೃತ್ಯ ಎಸಗಲು ಪಿಸ್ತೂಲ್ ಮತ್ತು ಗುಂಡುಗಳೊಂದಿಗೆ ನಗರಕ್ಕೆ ಬಂದು ಲಾಡ್ಜ್‌ನಲ್ಲಿ ವಾಸ್ತವ್ಯ ಮಾಡಿದ್ದರು. ಪಿಸ್ತೂಲ್‌ ಹಾಗೂ ಗುಂಡುಗಳನ್ನು ಆರೋಪಿಗಳು ಬಚ್ಚಿಟ್ಟಿದ್ದು ಶೋಧ ಕಾರ್ಯ ನಡೆಯುತ್ತಿದೆ’ ಎಂದು ಪೊಲೀಸರು ಹೇಳಿದರು.
ಬಿಷ್ಣೋಯಿ ಗ್ಯಾಂಗ್‌ಗೂ ಆರೋಪಿತರಿಗೂ ಸಂಬಂಧ ಇಲ್ಲ
ಪ್ರಕರಣವೊಂದರಲ್ಲಿ ದೆಹಲಿ ಪೊಲೀಸರಿಂದ ಬಂಧನವಾಗಿದ್ದ ಮಾವಳ್ಳಿಯ ನಿವಾಸಿ ಮೊಹಮ್ಮದ್ ರಫೀಕ್ ಕೆಲವು ತಿಂಗಳು ತಿಹಾರ್ ಜೈಲಿನಲ್ಲಿದ್ದ. ಆ ಸಂದರ್ಭದಲ್ಲಿ ಉತ್ತರ ಪ್ರದೇಶದ ಮೂವರು ಆರೋಪಿಗಳು ಪರಿಚಯ ಆಗಿದ್ದರು. ಜೈಲಿನಲ್ಲಿದ್ದಾಗ ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ ಬಗ್ಗೆ ರಫೀಕ್‌ ತಿಳಿದುಕೊಂಡಿದ್ದ. ಆತನ ಹೆಸರು ಹೇಳಿಕೊಂಡು ಬೆದರಿಸಲು ಸಂಚು ರೂಪಿಸಿದ್ದ. ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ಗೂ ಬಂಧಿತ ಆರೋಪಿಗಳಿಗೂ ಯಾವುದೇ ಸಂಬಂಧ ಇಲ್ಲ. ಲಾರೆನ್ಸ್ ಬಿಷ್ಣೋಯಿ ಹೆಸರು ಬಳಸಿಕೊಂಡು ಸುಲಿಗೆ ಮಾಡಲು ಪ್ರಯತ್ನಿಸಿದ್ದು ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.