ADVERTISEMENT

ಹಬ್ಬದ ಸಂಭ್ರಮಕ್ಕೆ ಸತತ ಮಳೆಯಿಂದ ಅಡ್ಡಿ: ಜಲಾವೃತವಾದ ರಸ್ತೆಯಲ್ಲಿ ಸವಾರರ ಪರದಾಟ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2022, 20:05 IST
Last Updated 29 ಆಗಸ್ಟ್ 2022, 20:05 IST
ಕೆ.ಎಚ್‌. ರಸ್ತೆಯಲ್ಲಿ ಸೋಮವಾರ ನೀರು ತುಂಬಿ ಹರಿದ ಕಾರಣ ವಾಹನ ಸವಾರರು ಪರದಾಡಿದರು –ಪ್ರಜಾವಾಣಿ ಚಿತ್ರ: ಎಸ್‌. ಕೆ.ದಿನೇಶ್
ಕೆ.ಎಚ್‌. ರಸ್ತೆಯಲ್ಲಿ ಸೋಮವಾರ ನೀರು ತುಂಬಿ ಹರಿದ ಕಾರಣ ವಾಹನ ಸವಾರರು ಪರದಾಡಿದರು –ಪ್ರಜಾವಾಣಿ ಚಿತ್ರ: ಎಸ್‌. ಕೆ.ದಿನೇಶ್   

ಬೆಂಗಳೂರು: ನಗರದಲ್ಲಿ ಸೋಮವಾರವೂ ಧಾರಾಕಾರ ಮಳೆಯಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಯಗೊಂಡಿತ್ತು.

ನಿರಂತರ ಮಳೆಯಿಂದ ರಾಜಕಾಲುವೆ ಹಾಗೂ ಚರಂಡಿಗಳಲ್ಲಿ ನೀರು ತುಂಬಿ ಹರಿಯಿತು. ಬೆಳಿಗ್ಗೆ ತುಸು ಬಿಡುವು ನೀಡಿದ್ದ ಮಳೆ ರಾತ್ರಿ ಧಾರಾಕಾರವಾಗಿ ಸುರಿಯಿತು.

ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಮತ್ತೆ ಸಮಸ್ಯೆ ಉಂಟಾಯಿತು. ರಸ್ತೆಗಳ ಮೇಲೆ ಹರಿಯುತ್ತಿದ್ದ ನೀರಿನಲ್ಲಿ ವಾಹನಗಳು ಮುಂದಕ್ಕೆ ಸಾಗಲು ಸಾಧ್ಯವಾಗಲಿಲ್ಲ.

ADVERTISEMENT

ಪೀಣ್ಯ, ಜಾಲಹಳ್ಳಿ, ಯಲಹಂಕ, ಕೆಂಗೇರಿ, ರಾಜಾಜಿನಗರ, ಹೆಬ್ಬಾಳ, ಮಲ್ಲೇಶ್ವರ, ಬ್ಯಾಟರಾಯನಪುರ, ಸದಾಶಿವನಗರ, ವಿಜಯನಗರ, ಟಿ.ದಾಸರಹಳ್ಳಿ, ಸುಂಕದಕಟ್ಟೆ, ಯಶವಂತಪುರ, ಹೆಗ್ಗನಹಳ್ಳಿ, ಕೋರಮಂಗಲ, ಬಾಗಲಗುಂಟೆ, ಎಂ.ಜಿ.ರಸ್ತೆ, ಶಿವಾಜಿನಗರ, ಸದಾಶಿವನಗರ, ವಿಜಯನಗರ ಸೇರಿ ವಿವಿಧ ಬಡಾವಣೆಗಳಲ್ಲಿ ಮಳೆ ಆರ್ಭಟಿಸಿತು. ಬಲರಾಂ ಲೇಔಟ್‌ನ ರಸ್ತೆಯಲ್ಲಿ ತುಂಬಿದ್ದ ನೀರಿನಲ್ಲಿ ಕಾರು ಹಾಗೂ ಬೈಕ್‌ಗಳು ಸಿಲುಕಿದ್ದವು. ಕೆಆರ್ ಮಾರುಕಟ್ಟೆ ಹಾಗೂ ಚಿಕ್ಕಪೇಟೆ ರಸ್ತೆಗಳು ಜಲಾವೃತಗೊಂಡಿದ್ದವು.

ಅನುಗ್ರಹ ಲೇಔಟ್‌ನ ನಾಲ್ಕು ಮನೆಗಳಿಗೆ ಚರಂಡಿಯ ನೀರು ನುಗ್ಗಿತ್ತು. ಮಲ್ಲೇಶ್ವರ ಸಂಪಿಗೆರಸ್ತೆಯಲ್ಲಿ ಕಾರಿನ ಮೇಲೆ ಮರದ ಕೊಂಬೆ ಬಿದ್ದಿತ್ತು. ಗರುಡಾಚಾರ್ ಪಾಳ್ಯ, ಗಾಯಿತ್ರಿ ಬಡಾವಣೆ, ಸಾಯಿ ಲೇಔಟ್, ಹೊರಮಾವು, ಗುರುಲೇಔಟ್‌ ಜಲಾವೃತ್ತದ ಭೀತಿಯಲ್ಲಿವೆ. ಇದೇ ರೀತಿ ಮಳೆಯಾದರೆ ಹಲವು ಮನೆಗಳಿಗೆ ನೀರು ನುಗ್ಗುವ ಸಾಧ್ಯತೆಯಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.