ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಅವರು ಸಾಮಾಜಿಕ– ಶೈಕ್ಷಣಿಕ ಸಮೀಕ್ಷಕರಿಗೆ ಮಾಹಿತಿ ನೀಡದ್ದರಿಂದ, ‘ನಕಾರ’ ಆಯ್ಕೆಯಿಂದ ಸಮೀಕ್ಷೆಯನ್ನು ಪೂರ್ಣಗೊಳಿಸಲಾಗಿದೆ.
ವಸಂತನಗರದಲ್ಲಿ ವಾಸವಿರುವ ಮುನೀಶ್ ಮೌದ್ಗಿಲ್ ಅವರು ಮಾಹಿತಿ ನೀಡಿಲ್ಲ. ಸಮೀಕ್ಷಕರು ಬೆಲ್ ಮಾಡಿದ್ದಾರೆ. ಯಾರೂ ಬಾಗಿಲು ತೆರೆದಿಲ್ಲ. ಅವರು ಫೋನ್ ಕೂಡ ಸ್ವೀಕರಿಸಿಲ್ಲ. ಮೂರು ಬಾರಿ ಇದೇ ರೀತಿಯಾಗಿದೆ ಎಂದು ಸಮೀಕ್ಷಕರು ತಮ್ಮ ಮೇಲ್ವಿಚಾರಕರಿಗೆ ನಕ್ಷೆ, ಫೋಟೊ, ವಿಡಿಯೊ ಸಹಿತ ಮಾಹಿತಿ ನೀಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಮೇಲ್ವಿಚಾರಕರು, ಆ್ಯಪ್ನಲ್ಲಿ ‘ನಕಾರ’ ಆಯ್ಕೆಯನ್ನು ಬಳಸಿ ಸಮೀಕ್ಷೆಯನ್ನು ಮುಗಿಸಿ ಎಂದು ಸಮೀಕ್ಷಕರಿಗೆ ಸೂಚಿಸಿದ್ದಾರೆ.
ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಆನ್ಲೈನ್ನಲ್ಲಿ ಮುಗಿಸಿದೆ: ಮುನೀಶ್
‘ನಾನು ಬೆಳಿಗ್ಗೆ 9 ಗಂಟೆಗೆ ಮನೆಯಿಂದ ಹೊರಟರೆ ವಾಪಸ್ ಬರುವುದು ರಾತ್ರಿ 10 ಗಂಟೆಯಾಗುತ್ತದೆ. ಒಂದು ಬಾರಿ ಅವರು ಬಂದಾಗ ನನ್ನ ಪತ್ನಿ ಮನೆಯಲ್ಲಿ ಇರಲಿಲ್ಲ. ನಾಳೆ ಬರಲು ಹೇಳಿದ್ದೆ ಅಷ್ಟೇ. ಅವರು ಸುಮ್ಮನೆ ಪ್ರಚಾರ ಮಾಡುತ್ತಿದ್ದಾರೆ’ ಎಂದು ಜಿಬಿಎ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ‘ಗುರುವಾರ ಸಂಜೆ ಆನ್ಲೈನ್ನಲ್ಲಿ ಸಮೀಕ್ಷೆಯನ್ನು ಪೂರ್ಣಗೊಳಿಸಿದ್ದೇನೆ. ಸಮೀಕ್ಷೆಗೆ ಗೈರಾಗಿರುವ ಸುಮಾರು ಎರಡು ಸಾವಿರ ಮಂದಿಯ ಮೇಲೆ ಶಿಸ್ತು ಕ್ರಮವಾಗುತ್ತಿದೆ. ಅದು ಆಗಬಾರದು ಎಂದು ಸುಖಾಸುಮ್ಮನೆ ಇಂತಹ ವಿಚಾರಗಳನ್ನು ಪ್ರಚಾರ ಮಾಡುತ್ತಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.