
ಬೆಂಗಳೂರು: ಸಂಕಷ್ಟದಲ್ಲಿರುವ ಕಲಾವಿದರ ಜೀವನ ರಕ್ಷಣೆ ಮಾಡಲು ಸರ್ಕಾರ ಮುಂದಾಗಬೇಕು ಎಂದು ಪತ್ರಕರ್ತ ಜಿ.ಎನ್. ಮೋಹನ್ ಹೇಳಿದರು.
ತೊ.ನಂಜುಂಡಸ್ವಾಮಿ ಗೆಳೆಯರ ಬಳಗ ಹಮ್ಮಿಕೊಂಡಿದ್ದ ತೊ.ನಂಜುಂಡಸ್ವಾಮಿ ನೆನಪಿನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಂಜುಂಡಸ್ವಾಮಿ ಅವರ ಹೆಸರಿನಲ್ಲಿ ಎಲ್ಲ ಕಲಾವಿದರಿಗೆ ಆಸರೆಯಾಗುವ ರೀತಿಯಲ್ಲಿ ಕಾರ್ಯಕ್ರಮ ರೂಪಿಸಿರುವುದು ಉತ್ತಮ ಕಾರ್ಯ. ಮುಂದಿನ ದಿನಗಳಲ್ಲಿಯೂ ಮುಂದುವರಿಯಬೇಕು ಎಂದು ಆಶಿಸಿದರು.
‘ತೊ.ನಂಜುಂಡಸ್ವಾಮಿಯವರನ್ನು ನೆನಪಿಸಿಕೊಳ್ಳುವುದು ಎಂದರೆ ಕನ್ನಡ ರಂಗಭೂಮಿ ಮತ್ತು ಸಿಜಿಕೆ ಅವರನ್ನು ನೆನಪಿಸಿಕೊಂಡಂತೆ. ಜೊತೆಗೆ ಇವತ್ತಿನ ರಂಗಭೂಮಿಯ ಪರಿಸ್ಥಿತಿಯನ್ನು ಅವಲೋಕನ ಮಾಡುವುದು ಆಗಿರುತ್ತದೆ. ಎಲ್ಲ ಕಲಾವಿದರನ್ನು ನುರಿತ ವೈದ್ಯರ ಹಾಗೆ ಒಂದು ನೋಟದಲ್ಲೇ ಅವರ ಆರೋಗ್ಯದ ಪರಿಸ್ಥಿತಿಯನ್ನು ತಿಳಿದುಕೊಂಡು ಚಿಕಿತ್ಸೆ ಮಾಡಿಸುತ್ತಿದ್ದ ನಂಜುಂಡಸ್ವಾಮಿಯಂಥವರು ಇಲ್ಲದೇ ಇದ್ದರೆ ಕನ್ನಡ ರಂಗಭೂಮಿಯ ಆರೋಗ್ಯ ಬಡವಾಗುತ್ತದೆ ಎಂದರು.
ಕಿರುತೆರೆ ನಿರ್ದೇಶಕ ಟಿ.ಎನ್.ಸೀತಾರಾಂ ಮಾತನಾಡಿ, ‘ತೊಟ್ಟುವಾಡಿ ನಂಜುಂಡಸ್ವಾಮಿ ಅವರು ಹಿಂದೆ ಗೌರಿಬಿದನೂರಿನಲ್ಲಿ ಚುನಾವಣೆಗೆನಿಂತಿದ್ದರೆ ಶಾಸಕರಾಗುತ್ತಿದ್ದರು. ಯಾಕೆಂದರೆ ಅವರಲ್ಲಿ ಸೇವಾ ಮನೋಭಾವವಿತ್ತು. ಕಲಾವಿದರು ಆರೋಗ್ಯದಿಂದ ಇದ್ದರೆ, ರಂಗಭೂಮಿ ಹಾಗೂ ಇಡೀ ಸಮಾಜ ಆರೋಗ್ಯ ಪೂರ್ಣವಾಗಿರುತ್ತದೆ ಎಂಬ ನಂಬಿಕೆ ಅವರಿಗೆ ಇತ್ತು’ ಎಂದು ತಿಳಿಸಿದರು.
ಕಲಾ ನಿರ್ದೇಶಕ ಬಿ.ವಿಠ್ಠಲ ರಾವ್ ಅವರಿಗೆ ತೊ.ನಂಜುಂಡಸ್ವಾಮಿ ನೆನಪಿನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಕರ್ನಾಟಕ ನಾಟಕ ಅಕಾಡಮಿಯ ಮಾಜಿ ಅಧ್ಯಕ್ಷ ಶ್ರೀನಿವಾಸ ಜಿ.ಕಪ್ಪಣ್ಣ, ರಂಗಕರ್ಮಿ ಸಿ.ಕೆ. ಗುಂಡಣ್ಣ, ಪ್ರಭು ಗುರಪ್ಪನವರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.