ADVERTISEMENT

ಸರ್ಕಾರ ನೀಡಿದ ಆಹಾರ ಸಾಮಗ್ರಿ ಕಿಟ್‌ ಮಾರಾಟ: ಪಾಲಿಕೆ ವಿರೋಧ ಪಕ್ಷ ಆರೋಪ

ಪಾಲಿಕೆ ವಿರೋಧ ಪಕ್ಷ ಆರೋಪ

​ಪ್ರಜಾವಾಣಿ ವಾರ್ತೆ
Published 14 ಮೇ 2020, 20:09 IST
Last Updated 14 ಮೇ 2020, 20:09 IST
ಆಹಾರ ಸಾಮಾಗ್ರಿಗಳು
ಆಹಾರ ಸಾಮಾಗ್ರಿಗಳು    

ಬೆಂಗಳೂರು: ಕಾರ್ಮಿಕ ಇಲಾಖೆಯಿಂದ ಬಡವರಿಗೆ ವಿತರಿಸಲು ನೀಡಿರುವ ಆಹಾರ ಸಾಮಗ್ರಿಗಳ ಕಿಟ್‌ ಅನ್ನು ₹ 200ಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌ ಆರೋಪಿಸಿದರು.

‘ನಾನು ಪ್ರತಿನಿಧಿಸುವ ಮನೋರಾಯನ ಪಾಳ್ಯ ವಾರ್ಡ್‌ನಲ್ಲಿ ಆಹಾರ ಸಾಮಗ್ರಿಯ ಕಿಟ್‌ ನೀಡುವುದಾಗಿ ಜನರಿಂದ ಕೆಲವರು ₹ 200 ಪಡೆದು ಟೋಕನ್‌ ನೀಡಿದ್ದಾರೆ. ಅವರು ನೀಡಿರುವ ಕಿಟ್‌ಗಳಲ್ಲಿ ಕಾರ್ಮಿಕ ಇಲಾಖೆಯ ಮುದ್ರೆ ಇದೆ. ಸರ್ಕಾರದ ಕಿಟ್‌ ಯಾರದ್ದೋ ಕೈ ಸೇರಿದ್ದು ಹೇಗೆ’ ಎಂದು ವಾಜಿದ್‌ ಪ್ರಶ್ನಿಸಿದರು.

‘ಈ ಆಹಾರದ ಕಿಟ್‌ಗಳ ವಿತರಣೆಯನ್ನು ತಡೆದಿರುವ ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಕಾರ್ಮಿಕ ಇಲಾಖೆ ಈ ಅಕ್ರಮದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

ADVERTISEMENT

ಅನ್ಯ ವ್ಯಕ್ತಿಗಳಿಗೆ ವಹಿಸಿಲ್ಲ: ಬಿಬಿಎಂಪಿ ವ್ಯಾಪ್ತಿಯಲ್ಲಿ ಬಡ ಕಾರ್ಮಿಕರಿಗೆ ಆಹಾರ ಸಾಮಗ್ರಿಯ ಕಿಟ್‌ ವಿತರಣೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಜಂಟಿ ಆಯುಕ್ತ ಸರ್ಫರಾಜ್ ಖಾನ್‌, ‘ಕಾರ್ಮಿಕರಿಗೆ ಆಹಾರದ ಕಿಟ್‌ ವಿತರಣೆ ಮುಕ್ತಾಯವಾಗಿ ಅನೇಕ ದಿನಗಳೇ ಕಳೆದಿವೆ. ಈ ವಾರ್ಡ್‌ನಲ್ಲಿ ಈ ಕಿಟ್‌ಗಳು ಹೇಗೆ ತಲುಪಿದವೋ ತಿಳಿಯದು. ನಾವು ಕಿಟ್‌ ವಿತರಿಸುವಾಗ ಪ್ರತಿಯೊಬ್ಬ ಕಾರ್ಮಿಕರ ಆಧಾರ್‌ ನಂಬರ್‌ ಪಡೆದು ದೃಢೀಕರಿಸಿಕೊಂಡಿದ್ದೇವೆ. ಬಿಬಿಎಂಪಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ಮಾತ್ರ ಕಿಟ್‌ ವಿತರಿಸಲಾಗಿದೆ. ಕಿಟ್‌ ವಿತರಣೆ ಹೊಣೆಯನ್ನು ಅನ್ಯ ವ್ಯಕ್ತಿಗಳಿಗೆ ವಹಿಸಿಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.