ADVERTISEMENT

ಸಂಚಾರ ಅಸ್ತವ್ಯಸ್ತ: ನಾಗಸಂದ್ರ ಬಳಿ ವಿಪರೀತ ದಟ್ಟಣೆ

2 ಕಿ.ಮೀ.ವರೆಗೆ ಸಾಲುಗಟ್ಟಿ ನಿಂತ ವಾಹನಗಳು l ಸ್ಥಳೀಯರಿಗೆ ಕಿರಿಕಿರಿ

​ಪ್ರಜಾವಾಣಿ ವಾರ್ತೆ
Published 26 ಜೂನ್ 2022, 3:06 IST
Last Updated 26 ಜೂನ್ 2022, 3:06 IST
ನಾಗಸಂದ್ರ ಮೆಟ್ರೊ ನಿಲ್ದಾಣ ಬಳಿ ಸೇರಿದ್ದ ಜನ
ನಾಗಸಂದ್ರ ಮೆಟ್ರೊ ನಿಲ್ದಾಣ ಬಳಿ ಸೇರಿದ್ದ ಜನ    

ಬೆಂಗಳೂರು: ನಾಗಸಂದ್ರ ಮೆಟ್ರೊ ನಿಲ್ದಾಣ ಬಳಿ ಹೊಸದಾಗಿ ಆರಂಭ ವಾಗಿರುವ ಪೀಠೋಪಕರಣ ಮಳಿಗೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದರಿಂದ, ನಾಗಸಂದ್ರ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಶನಿವಾರ ವಿಪರೀತ ದಟ್ಟಣೆ ಉಂಟಾಯಿತು.

ತುಮಕೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ಪ್ರದೇಶದಲ್ಲಿ ಪೀಠೋಪಕರಣ ಮಳಿಗೆ ನಿರ್ಮಾಣ ಮಾಡಲಾಗಿದೆ. ಮೆಟ್ರೊ ಹಾಗೂ ರಸ್ತೆ ಮಾರ್ಗವಾಗಿ ಸಾವಿರಾರು ಜನರು ಶನಿವಾರ ಮಳಿಗೆಗೆ ಬಂದಿದ್ದರು. ಮೆಟ್ರೊ ನಿಲ್ದಾಣ ಬಳಿಯೇ ಜನಸಂದಣಿ ಕಂಡುಬಂತು.

ಕೆಲವರು ತಮ್ಮ ಕಾರು ಹಾಗೂ ದ್ವಿಚಕ್ರ ವಾಹನಗಳನ್ನು ರಸ್ತೆಯ ಅಕ್ಕಪಕ್ಕದಲ್ಲಿ ನಿಲ್ಲಿಸಿದ್ದರು. ಜೊತೆಗೆ, ಮಳಿ ಗೆಗೆ ಬಂದು ಹೋಗುವ ಜನ ರಸ್ತೆಯ ಲ್ಲೆಲ್ಲ ಓಡಾಡುತ್ತಿದ್ದರು. ಅವರನ್ನು ಸುರ ಕ್ಷಿತವಾಗಿ ರಸ್ತೆ ದಾಟಿಸಲು ಸಂಚಾರ ಪೊಲೀಸರು ಹರಸಾಹಸಪಟ್ಟರು.

ADVERTISEMENT

ರಾಷ್ಟ್ರೀಯ ಹೆದ್ದಾರಿಯಲ್ಲಿದ್ದ ಮೇಲ್ಸೇತುವೆಯಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಿ ಹಲವು ದಿನಗಳಾಗಿದ್ದು, ಕೆಳ ರಸ್ತೆಯಲ್ಲೇ ವಾಹನಗಳು ಸಂಚರಿಸುತ್ತಿವೆ. ಶನಿವಾರ ದಟ್ಟಣೆ ಉಂಟಾಗಿದ್ದರಿಂದ, ಎಲ್ಲ ಪ್ರಕಾರದ ವಾಹನಗಳ ಸಂಚಾರಕ್ಕೆ ತೊಂದರೆಯಾಯಿತು. 2 ಕಿ.ಮೀ.ವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದುಕಂಡು ಬಂತು.

‘ನಗರ ಹಾಗೂ ಹೊರ ಜಿಲ್ಲೆಗಳ ಜನರು ಮಳಿಗೆಗೆ ಬಂದಿದ್ದರು. ಮಳಿಗೆ ಯಲ್ಲೂ ವಿಪರೀತ ಜನಸಂದಣಿ ಇತ್ತು. ಸರದಿಯಲ್ಲಿ ನಿಂತು 2 ಗಂಟೆ ಕಾದು ಜನರು ಮಳಿಗೆಯೊಳಗೆ ಹೋದರು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದ ರಿಂದ ತುಮಕೂರು ರಸ್ತೆಯಲ್ಲಿ ದಟ್ಟಣೆ ಕಂಡುಬಂತು’ ಎಂದು ಸಂಚಾರ ಪೊಲೀಸರು ಹೇಳಿದರು.

‘ರಸ್ತೆಯ ಎರಡೂ ಬದಿ ಹಾಗೂ ಸರ್ವೀಸ್ ರಸ್ತೆಯಲ್ಲಿ ಜನರ ಓಡಾಟವಿತ್ತು. ಮುಂಜಾಗ್ರತಾ ಕ್ರಮವಾಗಿ ವಾಹನಗಳನ್ನು ನಿಧಾನವಾಗಿ ಕಳುಹಿಸಲಾಯಿತು. ಬೆಳಿಗ್ಗೆಯಿಂದ ರಾತ್ರಿವರೆಗೂ ದಟ್ಟಣೆ ಮುಂದುವರಿದಿತ್ತು’ ಎಂದೂ ತಿಳಿಸಿದರು.

ಸ್ಥಳೀಯರಿಗೆ ಕಿರಿಕಿರಿ: ‘ಹೆಚ್ಚು ವಾಹನ ಓಡಾಟವಿರುವ ಜಾಗದಲ್ಲಿ ಮಳಿಗೆ ನಿರ್ಮಾಣವಾಗಿದೆ. ಸೂಕ್ತ ಪಾರ್ಕಿಂಗ್ ಹಾಗೂ ಇತರೆ ವ್ಯವಸ್ಥೆ ಇಲ್ಲ. ಮಳಿಗೆಗೆ ಬರುವ ಜನ, ಎಲ್ಲೆಂದರಲ್ಲಿ ವಾಹನ ನಿಲ್ಲಿಸುತ್ತಿದ್ದಾರೆ. ಇದರಿಂದ ಸ್ಥಳೀಯರು ಶನಿವಾರ ಕಿರಿಕಿರಿ ಅನುಭವಿ ಸುವಂತಾಯಿತು’ ಎಂದು ನಿವಾಸಿ ಲಕ್ಷ್ಮಿ ನಾರಾಯಣ ಹೇಳಿದರು.

‘ಮಳಿಗೆ ಆರಂಭವಾದ ಮೊದಲ ದಿನದಿಂದಲೂ ಇಷ್ಟು ದಟ್ಟಣೆ ಇದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ತೊಂದರೆಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ, ದಟ್ಟಣೆ ತಪ್ಪಿಸಬೇಕು’ ಎಂದೂ ತಿಳಿಸಿದರು.

ಸಂಚಾರ ದಟ್ಟಣೆ ನಿವಾರಣೆಗೆ ಮುಖ್ಯಮಂತ್ರಿ ಸೂಚನೆ
ಬೆಂಗಳೂರು ಸಂಚಾರ ಪೊಲೀಸರು, ಬಿಬಿಎಂಪಿ ಹಾಗೂ ಜಲಮಂಡಳಿ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ಸಭೆ ನಡೆಸಿದರು.

‘ಹೆಬ್ಬಾಳ, ಮಹದೇವಪುರ ಹೊರವರ್ತುಲ ರಸ್ತೆ, ಸಿಲ್ಕ್ ಬೋರ್ಡ್ ಜಂಕ್ಷನ್, ಸೇಂಟ್ ಜಾನ್ಸ್ ಆಸ್ಪತ್ರೆ, ಭಟ್ಟರಹಳ್ಳಿ ಜಂಕ್ಷನ್, ವೈಟ್‍ಫೀಲ್ಡ್ ರಸ್ತೆ ಸೇರಿದಂತೆ 10 ಪ್ರಮುಖ ಸ್ಥಳಗಳಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಬೇಕು. ಡಿಸಿಪಿಗಳೇ ಇದರ ಉಸ್ತುವಾರಿ ವಹಿಸಿಕೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದರು.

‘ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸುವ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕು. ಕಾಮಗಾರಿಗಾಗಿ ಅಗೆದ ರಸ್ತೆಗಳನ್ನು ತ್ವರಿತವಾಗಿ ದುರಸ್ತಿ ಮಾಡಬೇಕು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.