ADVERTISEMENT

ಹೆಸರಘಟ್ಟ: ಸಂರಕ್ಷಿತ ಪ್ರದೇಶಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2022, 20:07 IST
Last Updated 13 ಸೆಪ್ಟೆಂಬರ್ 2022, 20:07 IST
ಮಾರಸಂದ್ರ ಮುನಿಯಪ್ಪ
ಮಾರಸಂದ್ರ ಮುನಿಯಪ್ಪ   

ಬೆಂಗಳೂರು: ಹೆಸರಘಟ್ಟದ ಹುಲ್ಲು ಗಾವಲು ಪ್ರದೇಶವನ್ನು ಸಂರಕ್ಷಿತ ಪ್ರದೇಶವೆಂದು ಘೋಷಿಸಲು ಮುಂದಾ ಗಿರುವ ರಾಜ್ಯ ವನ್ಯಜೀವಿ ಮಂಡಳಿ ನಡೆಯನ್ನು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಖಂಡಿಸಿದ್ದು, ಈ ಪ್ರಸ್ತಾವನೆ ಕೈಬಿಡಬೇಕು ಎಂದು ಆಗ್ರಹಿಸಿದೆ.

‘ಹೆಸರಘಟ್ಟ ಹೋಬಳಿಯ ಕೇಂದ್ರ ಭಾಗದಲ್ಲಿ 350 ಎಕರೆ ಹುಲ್ಲುಗಾವಲು ಪ್ರದೇಶ ಇದೆ. ಉಳಿದ ಪ್ರದೇಶ ಬಡವರಿಗೆ ಸೇರಿದ್ದಾಗಿದ್ದು, ಎಲ್ಲಾ ದಾಖಲೆಗಳು ಕುಟುಂಬಗಳ ಅವರ ಬಳಿ ಇವೆ. ಶಿವಕೋಟೆ, ಹುರುಳಿಚಿಕ್ಕನಹಳ್ಳಿ, ಅರಕೆರೆ, ಸೊಣ್ಣೇನಹಳ್ಳಿ ಗ್ರಾಮ ಪಂಚಾಯಿತಿ ಸೇರಿ 45ಕ್ಕೂ ಹೆಚ್ಚು ಗ್ರಾಮಗಳಲ್ಲಿ 1 ಲಕ್ಷಕ್ಕೂ ಅಧಿಕ ಜನ ವಾಸವಿದ್ದಾರೆ. ಈ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕೂಡ ಇದ್ದು, ಹುಲ್ಲುಗಾವಲು ಪ್ರದೇಶವು ರೈತರ ದನಕರುಗಳಿಗೆ ಮೇವಿನ ತಾಣವಾಗಿವೆ’ ಎಂದು ಬಿಎಸ್‌ಪಿ ರಾಜ್ಯ ಉಸ್ತುವಾರಿ ಮಾರಸಂದ್ರ ಮುನಿಯಪ್ಪ ತಿಳಿಸಿದ್ದಾರೆ.

‘ಈ ಪ್ರದೇಶಲ್ಲಿ ವನ್ಯಜೀವಿಗಳಿರುವ ಪುರಾವೆಗಳಿಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಚೇರಿಗಳು, ತರಬೇತಿ ಕೇಂದ್ರಗಳು ಇವೆ. ಇಷ್ಟೊಂದು ಅನುಕೂಲ ಇರುವ ಹುಲ್ಲುಗಾವಲು ಪ್ರದೇಶವನ್ನು ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಿ ರಾಜ್ಯ ವನ್ಯಜೀವಿ ಮಂಡಳಿ ವ್ಯಾಪ್ತಿಗೆ ಹಸ್ತಾಂತರಿಸು
ವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಸಾರ್ವಜನಿಕ ರಸ್ತೆಗೆ, ದನ–ಕರುಗಳನ್ನು ಮೇಯಿಸಲು ಮತ್ತು ಅಭಿವೃದ್ಧಿ ಕೆಲಸಗಳಿಗೆ ನಿರ್ಬಂಧ ಹೇರುವ ಸಾಧ್ಯತೆ ಇದ್ದು, ಇದು ಅವೈಜ್ಞಾನಿಕ ನಡೆ’ ಎಂದು ಹೇಳಿದ್ದಾರೆ.

ADVERTISEMENT

‘ಸುತ್ತಮುತ್ತಲ ಗ್ರಾಮಸ್ಥರು, ಸಂಘ–ಸಂಸ್ಥೆಗಳ ಪ್ರತಿನಿಧಿಗಳು, ವಿದ್ಯಾರ್ಥಿಗಳು, ಸ್ಥಳೀಯ ಶಾಸಕರೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದರು ವಾಸ್ತವ ಅರಿಯದೆ ಕೆಲವರ ಟ್ವೀಟ್‌ ಆಧರಿಸಿ ಬೆಂಬಲ ವ್ಯಕ್ತಪಡಿಸಿರುವುದು ಮೂರ್ಖತನ’ ಎಂದಿದ್ದಾರೆ.

‘ಸ್ಥಳೀಯರ ಜತೆ ಸಮಾಲೋಚನೆ ನಡೆಸದೆ ಯಾವುದೇ ನಿರ್ಧಾರವನ್ನೂ ಸರ್ಕಾರ ಕೈಗೊಳ್ಳಬಾರದು. ಈ ಪ್ರಸ್ತಾವನೆಯನ್ನು ಕೂಡಲೇ ಕೈಬಿಡಬೇಕು. ಇಲ್ಲದಿದ್ದರೆ ಬಿಎಸ್‌ಪಿ ಉಗ್ರ ಹೋರಾಟ ನಡೆಸಲಿದೆ’ ಎಂದು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.