
ಬೆಂಗಳೂರು: ನಗರದ ಕಂಟೊನ್ಮೆಂಟ್ ರೈಲ್ವೆ ಕಾಲೊನಿಯಲ್ಲಿ ಅರಣ್ಯದಂತಿರುವ ಸುಮಾರು ಎಂಟು ಎಕರೆ ಪ್ರದೇಶದಲ್ಲಿ ತನ್ನ ಅನುಮತಿಯಿಲ್ಲದೆ ಯಾವುದೇ ಮರಗಳನ್ನು ಕಡಿಯದಂತೆ ರಾಜ್ಯ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಭಾರತೀಯ ರೈಲ್ವೆಗೆ ಸೇರಿರುವ ಈ ಜಮೀನಿನಲ್ಲಿ 371 ಮರಗಳಿದ್ದು, ಈ ಜೀವ ವೈವಿಧ್ಯದ ಪ್ರದೇಶವನ್ನು ವಾಣಿಜ್ಯ ಬಳಕೆಗೆ ಖಾಸಗಿ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಿರುವುದನ್ನು ಪ್ರಶ್ನಿಸಿ ಮಾಜಿ ಶಾಸಕ ಎ. ಟಿ. ರಾಮಸ್ವಾಮಿ ಮತ್ತಿತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಭಕ್ರು ಮತ್ತು ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರಿದ್ದ ದ್ವಿಸದಸ್ಯ ನ್ಯಾಯಪೀಠ, ಈ ಆದೇಶ ನೀಡಿ ಪ್ರಕರಣದ ವಿಚಾರಣೆಯನ್ನು ಮುಂದೂಡಿದೆ.
ಅರ್ಜಿದಾರ ಎ. ಟಿ. ರಾಮಸ್ವಾಮಿ ಪರ ಬುಧವಾರ ವಾದಿಸಿದ ವಕೀಲರು, ‘ಈಗಾಗಲೇ ಬುಲ್ಡೋಜರ್ ತಂದು ವಿವಾದಿತ ಜಾಗದಲ್ಲಿ ನಿಲ್ಲಿಸಲಾಗಿದೆ. ಅಲ್ಲಿರುವ ಮರಗಳನ್ನು ಕಡಿಯಲಾಗುತ್ತಿದೆ. ಈ ಜಾಗಕ್ಕೆ ಜೀವ ವೈವಿಧ್ಯತೆಯ ತಾಣ ಎಂದು ಮಾನ್ಯತೆ ನೀಡಿದ್ದ ಆದೇಶವನ್ನು ಅರಣ್ಯ ಇಲಾಖೆ ಏಕಾಏಕಿ ಹಿಂತೆಗೆದುಕೊಂಡಿದೆ. ಆದ್ದರಿಂದ ಅಲ್ಲಿ ಮರ ಕಡಿಯಲು ಅವಕಾಶ ನೀಡಬಾರದು’ ಎಂದು ವಾದಿಸಿದರು.
ಕೇಂದ್ರ ಸರ್ಕಾರ ಮತ್ತು ರೈಲ್ವೆ ಜಾಗ ಅಭಿವೃದ್ಧಿ ಪ್ರಾಧಿಕಾರದ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ ಕಾಮತ್, ‘ನಾವು ಅರಣ್ಯ ತಜ್ಞರ ಸಮಿತಿಯ ಅನುಮತಿಯಿಲ್ಲದೆ ಮರ ಕಡಿಯುವುದಿಲ್ಲ’ ಎಂದು ಹೇಳಿದರು.
ಆಗ ಅರ್ಜಿದಾರರ ಪರ ವಕೀಲರು, ‘ರಾಜ್ಯದಲ್ಲಿ ಮರ ತಜ್ಞರ ಸಮಿತಿಯೇ ಇಲ್ಲ. ಸಮಿತಿ ರಚಿಸುವಂತೆ ಹೈಕೋರ್ಟ್ ಆದೇಶ ನೀಡಿದ್ದರೂ ಇನ್ನೂ ಪಾಲನೆಯಾಗಿಲ್ಲ’ ಎಂದು ಹೇಳಿದರು.
ಇದನ್ನು ಪರಿಗಣಿಸಿದ ನ್ಯಾಯಾಲಯವು, ತನ್ನ ಅನುಮತಿಯಿಲ್ಲದೆ ಈ ಪ್ರದೇಶದಲ್ಲಿ ಯಾವುದೇ ಮರ ಕಡಿಯಬಾರದು ಎಂದು ಹೇಳಿ ಪ್ರತಿವಾದಿಗಳಿಗೆ ಆಕ್ಷೇಪ ಸಲ್ಲಿಸಲು ಸಮಯಾವಕಾಶ ನೀಡಿ ವಿಚಾರಣೆಯನ್ನು ಮುಂದೂಡಿತು.
ಅವಕಾಶವಿಲ್ಲ: ಸಚಿವ ಈಶ್ವರ ಖಂಡ್ರೆ
ಕಂಟೊನ್ಮೆಂಟ್ ರೈಲ್ವೆ ಕಾಲೊನಿಯನ್ನು ಜೀವ ವೈವಿಧ್ಯತಾಣವಾಗಿಸಲು ಅವಕಾಶವಿಲ್ಲದ ಕಾರಣ ಅಧಿಸೂಚನೆ ಯನ್ನು ವಾಪಸ್ ಪಡೆಯಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.
‘ರೈಲ್ವೆ ಕಾಯ್ದೆಯಡಿ ರೈಲ್ವೆ ಇಲಾಖೆಗೆ ಸೇರಿದ ಯಾವುದೇ ಭೂಮಿಯಲ್ಲಿ ಬೇರೆಯವರು ಹಸ್ತಕ್ಷೇಪ ಮಾಡಲು ಅವಕಾಶವಿಲ್ಲ. ಹೀಗಾಗಿ ಕಂಟೊನ್ಮೆಂಟ್ ರೈಲ್ವೆ ಕಾಲೊನಿಯ 8.61 ಎಕರೆಯನ್ನು ಜೀವವೈವಿಧ್ಯ ತಾಣ ಎಂದು ಘೋಷಿಸಿದ್ದ ಅಧಿಸೂಚನೆ ಹಿಂಪಡೆಯಲಾಗಿದೆಯೇ ಹೊರತು ಯಾವುದೇ ಒತ್ತಡಕ್ಕೆ ಮಣಿದಿಲ್ಲ’ ಎಂದರು.
‘ನಗರಕ್ಕೆ ಅತ್ಯಗತ್ಯವಾಗಿದ್ದ ಶ್ವಾಸತಾಣ ಮತ್ತು ಹಸಿರು ಪ್ರದೇಶ ಸಂರಕ್ಷಿಸಲು ಕಂಟೊನ್ಮೆಂಟ್ ರೈಲ್ವೆ ಕಾಲೊನಿಯ 8.61 ಎಕರೆಯಲ್ಲಿದ್ದ 371 ಮರ ಉಳಿಸಲು ಜೀವವೈವಿಧ್ಯ ತಾಣ ಎಂದು ಘೋಷಿಸಲಾಗಿತ್ತು. ಆದರೆ ರೈಲ್ವೆ ಕಾಯಿದೆಯಡಿ ಇದಕ್ಕೆ ನಿರ್ಬಂಧ ಇರುವುದರಿಂದ ಹಿಂಪಡೆಯುವ ನಿರ್ಧಾರ ಮಾಡಲಾಯಿತು’ ಎಂದು ತಿಳಿಸಿದರು.
‘ಈ ಸಂಬಂಧ ರೈಲ್ವೆ ಭೂ ಅಭಿವೃದ್ಧಿ ಪ್ರಾಧಿಕಾರದೊಂದಿಗೆ ಅಧಿಕಾರಿಗಳು ಮಾತನಾಡಿದ್ದು, ಪ್ರಾಧಿಕಾರವು ಪರಿಸರ ಸಂರಕ್ಷಣೆಗೆ ತಾನು ಬದ್ಧವಾಗಿದ್ದು, ಬಾಧಿತ ವೃಕ್ಷಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಮತ್ತು ಮರು ನಾಟಿ ಮಾಡುವ ವಾಗ್ದಾನ ನೀಡಿದೆ’ ಎಂದು ಮಾಹಿತಿ ನೀಡಿದರು.
‘ರೈಲ್ವೆ ಭೂ ಪ್ರಾಧಿಕಾರವು ಜೀವವೈವಿಧ್ಯ ಕಾಯ್ದೆ 37(1)ರನ್ವಯ ಜಾರಿಯಲ್ಲಿರುವ ಯಾವುದೇ ಕಾನೂನು ಜಾರಿ ಮಾಡಲು ಮತ್ತು ಹಾಲಿ ಪ್ರದೇಶದಲ್ಲಿ ಕಟ್ಟಡ ನಿರ್ಮಾಣದ ಬಳಿಕವೂ ಸಸಿ ನೆಡುವ ಮೂಲಕ ಹಸಿರು ಹೊದಿಕೆ ರಕ್ಷಿಸುವುದಾಗಿ ಮತ್ತು ಕಂಟೊನ್ಮೆಂಟ್ ರೈಲ್ವೆ ಕಾಲೊನಿಯ ಜೀವವೈವಿಧ್ಯತೆ ರಕ್ಷಿಸುವುದಾಗಿ ಲಿಖಿತ ಭರವಸೆ ನೀಡಿದೆ’ ಎಂದು ಈಶ್ವರ ಖಂಡ್ರೆ ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.