ಬೆಂಗಳೂರು: ‘ನಾಡಪ್ರಭು ಕೆಂಪೇಗೌಡರ ವಿಚಾರಗಳನ್ನು ಪಠ್ಯದಲ್ಲೂ ಅಳವಡಿಸಿಲ್ಲ. ಬೆಂಗಳೂರು ನಗರದ ಕುರಿತು 500 ವರ್ಷಗಳ ಹಿಂದೆಯೇ ದೂರದೃಷ್ಟಿ ಹೊಂದಿದ್ದ ವ್ಯಕ್ತಿಯ ಬಗ್ಗೆ ಇಂದಿನ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು’ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ನಗರದಲ್ಲಿ ಮಂಗಳವಾರ ನಡೆದ ‘ಯಲಹಂಕ ನಾಡಪ್ರಭುಗಳ ಪರಂಪರೆ: ರಣಭೈರೇಗೌಡರಿಂದ ಮುಮ್ಮಡಿ ಕೆಂಪವೀರಪ್ಪಗೌಡರವರೆಗಿನ’ ಕುರಿತು ನಡೆದ ರಾಷ್ಟ್ರೀಯ ವಿಚಾರಸಂಕೀರಣದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ಬೆಂಗಳೂರು ಮಹಾನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಇತಿಹಾಸ ಮತ್ತು ವಿಚಾರಗಳನ್ನು ಬೆಂಗಳೂರು ವಿಶ್ವವಿದ್ಯಾಲಯವು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ಕೈಗೊಂಡಿರುವುದು ಶ್ಲಾಘನೀಯ’ ಎಂದು ಹೇಳಿದರು.
ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಜಯಕರ ಎಸ್.ಎಂ., ‘ನಾಡಪ್ರಭು ಕೆಂಪೇಗೌಡರ ಬಗ್ಗೆ ನಾವೆಷ್ಟು ತಿಳಿದುಕೊಂಡರೂ ಕಡಿಮೆಯೇ. ಈ ವಿಚಾರಸಂಕಿರಣದಲ್ಲಿ ಮಂಡನೆಯಾದ ವಿಷಯಗಳಿಗೆ ಪುಸ್ತಕ ರೂಪ ನೀಡಬೇಕು. ಕೆಂಪೇಗೌಡರ ಬಗ್ಗೆ ಕನ್ನಡದಲ್ಲಿ ಮಾತ್ರ ಪುಸ್ತಕಗಳಿವೆ. ಅವುಗಳನ್ನು ಇಂಗ್ಲಿಷ್ಗೆ ಭಾಷಾಂತರ ಮಾಡಬೇಕು’ ಎಂದು ಹೇಳಿದರು.
‘ಹಿಸ್ಟರಿ ಆ್ಯಂಡ್ ಹೆರಿಟೇಜ್ ಆಫ್ ಬೆಂಗಳೂರು’ ಪುಸ್ತಕವನ್ನು ಈ ಬಿಡುಗಡೆಗೊಳಿಸಲಾಯಿತು.
ನಿರ್ಮಲಾನಂದನಾಥ ಸ್ವಾಮೀಜಿ ಅವರು ವಿಶ್ವವಿದ್ಯಾಲಯ ಆವರಣದಲ್ಲಿ ಕೆಂಪೇಗೌಡ ಅಧ್ಯಯನ ಪೀಠ ಕಟ್ಟಡದ ಕಾಮಗಾರಿಯನ್ನು ವೀಕ್ಷಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.