ADVERTISEMENT

ರಸ್ತೆ ಖಾಲಿ; ಪಾದಚಾರಿಗಳಿಗೆ ಖುಷಿ

ಹಬ್ಬಕ್ಕಾಗಿ ಊರಿಗೆ ತೆರಳಿದ ಜನ, ಸಾಮಾಜಿಕ ಜಾಲತಾಣಗಳಲ್ಲಿ ಅನುಭವ ಹಂಚಿಕೊಂಡರು

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2019, 19:30 IST
Last Updated 8 ಅಕ್ಟೋಬರ್ 2019, 19:30 IST
ವಾಹನ ಸಂಚಾರ ವಿರಳವಾಗಿದ್ದ ರೆಸಿಡೆನ್ಸಿ ರಸ್ತೆ
ವಾಹನ ಸಂಚಾರ ವಿರಳವಾಗಿದ್ದ ರೆಸಿಡೆನ್ಸಿ ರಸ್ತೆ   

ಬೆಂಗಳೂರು: ನಗರದಲ್ಲಿ ನೆಲೆಸಿರುವ ಬಹುತೇಕರು ನವರಾತ್ರಿ ಹಾಗೂ ವಿಜಯದಶಮಿ ಹಬ್ಬದ ನಿಮಿತ್ತ ತಮ್ಮ ತಮ್ಮ ಊರುಗಳಿಗೆ ತೆರಳಿದ್ದಾರೆ. ಇನ್ನು ಕೆಲವರು ದಸರಾ ಜಂಬೂಸವಾರಿ ವೀಕ್ಷಣೆಗಾಗಿ ಮೈಸೂರಿಗೆ ತೆರಳಿದ್ದಾರೆ. ಇದರಿಂದಾಗಿ ನಗರದಲ್ಲಿ ವಾಹನಗಳ ಓಡಾಟ ಕಡಿಮೆ ಆಗಿದ್ದು, ಸೋಮವಾರ ಹಾಗೂ ಮಂಗಳವಾರ ಬಹುತೇಕ ರಸ್ತೆಗಳು ಖಾಲಿ ಖಾಲಿ ಇದ್ದವು.

ನಿತ್ಯವೂ ವಾಹನಗಳಿಂದ ತುಂಬಿರು ತ್ತಿದ್ದ ರಸ್ತೆಗಳನ್ನು ಕಂಡು ಹಿಡಿಶಾಪ ಹಾಕುತ್ತಿದ್ದ ಪಾದಚಾರಿಗಳು, ಖಾಲಿ ರಸ್ತೆ ಕಂಡು ಖುಷಿಪಟ್ಟರು. ಅಂಥ ಕೆಲ ಪಾದಚಾರಿಗಳು ತಮ್ಮ ಅನುಭವವನ್ನು ಸಾಮಾಜಿಕ ಜಾಲತಾಣಗಳಲ್ಲೂ ಹಂಚಿ ಕೊಂಡಿದ್ದಾರೆ.ಮನೆಯಲ್ಲೇ ಹಬ್ಬ ಆಚರಣೆ ಮಾಡಿದ ನಿವಾಸಿಗಳು, ಸಿಗ್ನಲ್‌ ರಹಿತವಾಗಿ ಬೆಳಿಗ್ಗೆ ದೇವಸ್ಥಾನಗಳಿಗೆ ಹೋಗಿ ಬಂದರು.

ಇನ್ನು ಹಲವರು ಖಾಲಿ ರಸ್ತೆಯಲ್ಲಿ ಓಡಾಡಿ ಮಾರುಕಟ್ಟೆ ಹಾಗೂ ನಗರದಲ್ಲಿರುವ ತಮ್ಮ ಇಷ್ಟದ ಸ್ಥಳಗಳಿಗೂ ಹೋಗಿಬಂದರು. ಈ ವೇಳೆಯಲ್ಲಿ ಎಲ್ಲಿಯೂ ದಟ್ಟಣೆ ಕಂಡು ಬರಲಿಲ್ಲ. ಓಕಳಿಪುರ, ಕೆ.ಆರ್‌.ವೃತ್ತ, ನೃಪ ತುಂಗ ರಸ್ತೆ, ಕೆಂಪೇಗೌಡ ರಸ್ತೆ, ಹೆಬ್ಬಾಳ ರಸ್ತೆ, ರೆಸಿಡೆನ್ಸಿ ರಸ್ತೆ, ಹೊಸೂರು ರಸ್ತೆ, ತುಮಕೂರು ರಸ್ತೆ ಹಾಗೂ ಸುತ್ತಮುತ್ತ ರಸ್ತೆಗಳಲ್ಲಿ ವಾಹನಗಳ ಓಡಾಟ ವಿರಳ ವಾಗಿತ್ತು.

ADVERTISEMENT

ಎಸ್‌. ರಮೇಶ್‌ ಎಂಬುವರು, ‘ಬೆಂಗಳೂರಿನಲ್ಲಿ ‘ನೋ ಹಾರ್ನ್‌’ ವಾತಾವರಣವಿತ್ತು. ರಸ್ತೆಯಲ್ಲಿ ಓಡಾ ಡಲು ಖುಷಿ ಆಯಿತು’ ಎಂದು ಟ್ವೀಟ್ ಮಾಡಿದ್ದಾರೆ. ‘ಕುಟುಂಬದವರೆಲ್ಲರೂ ರಸ್ತೆಯಲ್ಲಿ ಓಡಾಡಿ ಬಂದೆವು. ಯಾವುದೇ ಆಯಾಸ ಆಗಲಿಲ್ಲ. ವಾಹನಗಳು ಹಾಗೂ ಅವುಗಳ ಹಾರ್ನ್‌ ಕಿರಿಕಿರಿಯೂ ಇರಲಿಲ್ಲ’ ಎಂದಿದ್ದಾರೆ.

ಬಸ್‌ ತಡ: ಪ್ರಯಾಣಿಕರ ಪ್ರತಿಭಟನೆ
ನಗರದಿಂದ ಹೊರಜಿಲ್ಲೆಗಳಿಗೆ ತೆರಳಬೇಕಿದ್ದ ಎಸ್‌ಆರ್‌ಎಸ್‌ ಟ್ರಾವೆಲ್ಸ್‌ ಕಂಪನಿ ಬಸ್‌ಗಳ ಸಂಚಾರ ತಡವಾಗಿದ್ದರಿಂದ ಪ್ರಯಾಣಿಕರು ಸೋಮವಾರ ರಾತ್ರಿ ದಿಢೀರ್ ಪ್ರತಿಭಟನೆ ನಡೆಸಿದರು.

ಆನಂದರಾವ್ ವೃತ್ತ ಸಮೀಪದಲ್ಲಿರುವ ಕಂಪನಿಯ ತಂಗುದಾಣದಲ್ಲಿ ಸೇರಿದ್ದ ಪ್ರಯಾಣಿಕರು, ಇತರೆ ಬಸ್‌ಗಳ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಕಂಪನಿ ಸಿಬ್ಬಂದಿ ಹಾಗೂ ಪ್ರಯಾಣಿಕರ ನಡುವೆ ಮಾತಿನ ಚಕಮಕಿ ಉಂಟಾಗಿ, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಸ್ಥಳಕ್ಕೆ ಬಂದ ಉಪ್ಪಾರಪೇಟೆಠಾಣೆ ಪೊಲೀಸರು, ಪ್ರಯಾಣಿಕರಮನವೊಲಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಎರಡೂವರೆ ಗಂಟೆಗಳ ನಂತರ ಬಸ್‌ ಗಳನ್ನು ತಂಗುದಾಣಕ್ಕೆ ಕರೆಸಿ ಪ್ರಯಾಣಿಕರನ್ನು ಹತ್ತಿಸಿ ಕಳುಹಿಸಿದರು.

‘ದಸರಾ ನಿಮಿತ್ತ ಊರಿಗೆ ಹೋಗಲು ಟಿಕೆಟ್‌ ಕಾಯ್ದಿರಿಸಿದ್ದ ಪ್ರಯಾಣಿಕರು ಸೋಮವಾರ ರಾತ್ರಿ ಬಸ್ ನಿಲ್ಲುವ ಸ್ಥಳಕ್ಕೆ ನಿಗದಿತ ಸಮಯಕ್ಕೆ ಬಂದಿದ್ದರು. ಆದರೆ, ಎರಡು ಗಂಟೆಯಾದರೂ ಬಸ್‌ಗಳು ಬಂದಿರಲಿಲ್ಲ. ವಿಜಯಪುರ, ರಾಯಚೂರು, ಕಲಬುರ್ಗಿ ಹಾಗೂ ಇತರೆ ಜಿಲ್ಲೆಗಳಿಗೆ ಹೋಗಬೇಕಿದ್ದ ಜನಕ್ಕೆ ಆತಂಕ ಶುರುವಾಗಿತ್ತು’ ಎಂದು ಪ್ರಯಾಣಿಕರೊಬ್ಬರು ತಿಳಿಸಿದರು.

ದಟ್ಟಣೆಯಲ್ಲಿ ಬಸ್‌ಗಳು: ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿ ಸಿದಎಸ್‌ಆರ್‌ಎಸ್‌ ಟ್ರಾವೆಲ್ಸ್‌ ಮಾಲೀಕ ಕೆ.ಟಿ.ರಾಜಶೇಖರ್‌, ‘ನಗರದ 30ಕ್ಕೂ ಹೆಚ್ಚು ಕಡೆ ಪಿಕಪ್‌ ಪಾಯಿಂಟ್‌ಗಳಿವೆ. ಅಲ್ಲೆಲ್ಲ ಪ್ರಯಾಣಿಕರನ್ನು ಹತ್ತಿಸಿಕೊಂಡ ನಂತರವೇ ಬಸ್‌ಗಳು ಆನಂದರಾವ್ ವೃತ್ತಕ್ಕೆ ಬರುತ್ತವೆ. ಆದರೆ, ಸೋಮವಾರ ರಾತ್ರಿ ಕೆಲವು ಬಸ್‌ಗಳು ದಟ್ಟಣೆಯಲ್ಲಿ ಸಿಲುಕಿದ್ದವು. ಎರಡು ಬಸ್‌ಗಳು ಅಪಘಾತಕ್ಕೀಡಾಗಿದ್ದವು. ಹೀಗಾಗಿ ಬರುವುದು ತಡವಾಯಿತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.