ADVERTISEMENT

ಕುಂಕುಮದ ಪ್ರಶ್ನೆ ಪಿತೃಪ್ರಧಾನ ಧೋರಣೆ: ಎಚ್‌.ಎಸ್‌. ಶ್ರೀಮತಿ

ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2023, 20:28 IST
Last Updated 11 ಮಾರ್ಚ್ 2023, 20:28 IST
ನಗರದ ಅಂಬೇಡ್ಕರ್ ಭವನದಲ್ಲಿ ಶನಿವಾರ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ 16ನೇ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಸಿ.ವೀರಣ್ಣ ಅವರು ಸಮ್ಮೇಳನ ಅ=ಧ್ಯಕ್ಷೆ ಎಚ್.ಎಸ್. ಶ್ರೀಮತಿ ಅವರಿಗೆ ಸಮ್ಮೇಳನ ಬಾವುಟ ನೀಡುವ ಮುಖಾಂತರ ಕಾರ್ಯಕ್ರಮ ಉದ್ಘಾಟಿಸಿದರು. ಸಂಶೋಧಕ ಎಚ್.ಎಸ್. ಗೋಪಾಲರಾವ್, ಸಾಹಿತಿ ಓ.ಎಲ್.ನಾಗಭೂಷಣ ಸ್ವಾಮಿ, ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಪ್ರಕಾಶ್ ಮೂರ್ತಿ, ಸಾಹಿತಿ ಮಾರ್ಕಂಡಪುರಂ ಶ್ರೀನಿವಾಸ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್ ಇದ್ದಾರೆ –ಪ್ರಜಾವಾಣಿ ಚಿತ್ರ
ನಗರದ ಅಂಬೇಡ್ಕರ್ ಭವನದಲ್ಲಿ ಶನಿವಾರ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ 16ನೇ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಸಿ.ವೀರಣ್ಣ ಅವರು ಸಮ್ಮೇಳನ ಅ=ಧ್ಯಕ್ಷೆ ಎಚ್.ಎಸ್. ಶ್ರೀಮತಿ ಅವರಿಗೆ ಸಮ್ಮೇಳನ ಬಾವುಟ ನೀಡುವ ಮುಖಾಂತರ ಕಾರ್ಯಕ್ರಮ ಉದ್ಘಾಟಿಸಿದರು. ಸಂಶೋಧಕ ಎಚ್.ಎಸ್. ಗೋಪಾಲರಾವ್, ಸಾಹಿತಿ ಓ.ಎಲ್.ನಾಗಭೂಷಣ ಸ್ವಾಮಿ, ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಪ್ರಕಾಶ್ ಮೂರ್ತಿ, ಸಾಹಿತಿ ಮಾರ್ಕಂಡಪುರಂ ಶ್ರೀನಿವಾಸ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಒಬ್ಬರು ಹಣೆಗೆ ಯಾಕೆ ಕುಂಕುಮ ಇಟ್ಟಿಲ್ಲ ಎಂದು ಪ್ರಶ್ನಿಸುತ್ತಾರೆ. ಇನ್ನೊಬ್ಬರು ಸಂಸ್ಥೆಯ ಸದಸ್ಯತ್ವ ರದ್ದುಗೊಳಿಸಿರುವುದಾಗಿ ಹೇಳಿ, ಪ್ರಶಸ್ತಿಯನ್ನೂ ವಾಪಸ್‌ ಪಡೆಯುತ್ತಾರೆ. ಪಿತೃಪ್ರಧಾನ ವ್ಯವಸ್ಥೆಯ ಧೋರಣೆಯೇ ಇಂತಹ ಮಾತುಗಳಿಗೆ ಕಾರಣವಾಗುತ್ತಿದೆ’ ಎಂದು ಸಾಹಿತಿ ಎಚ್.ಎಸ್. ಶ್ರೀಮತಿ ಹೇಳಿದರು.

ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದಲ್ಲಿ ಶನಿವಾರ ಆಯೋಜಿಸಿದ 16ನೇ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ತಮ್ಮ ಅಧ್ಯಕ್ಷೀಯ ಭಾಷಣ ಮಾಡಿದ ಅವರು, ಬಿಜೆಪಿ ಸಂಸದ ಎಸ್‌. ಮುನಿಸ್ವಾಮಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಅವರ ಹೆಸರು ಪ್ರಸ್ತಾಪಿಸದೆ ‍‍ಪರೋಕ್ಷವಾಗಿ ಟೀಕಿಸಿದರು.

ತಕ್ಷಣವೇ ಕೆಲವು ಸಭಿಕರು, ಮಹೇಶ ಜೋಶಿ ಅವರಿಗೆ ಧಿಕ್ಕಾರ ಕೂಗಿದರು. ಆಗ, ‘ಧಿಕ್ಕಾರ ಕೂಗುತ್ತಾ ಕುಳಿತರೆ ಮಾತು ನಿಲ್ಲಿಸುವೆ’ ಎಂದು ಶ್ರೀಮತಿ ಹೇಳಿ, ಪರಿಸ್ಥಿತಿಯನ್ನು ತಣ್ಣಗಾಗಿಸಿದರು. ‘ತಲೆಮಾರುಗಳಿಂದ ಎಷ್ಟೆಷ್ಟೋ ಬಗೆಯಲ್ಲಿ ಸಮುದಾಯಗಳ ಸದಸ್ಯತ್ವಗಳನ್ನು ರದ್ದು ಮಾಡಿದ್ದೀವಲ್ಲ, ಅದಕ್ಕೆ ಪ್ರತಿರೋಧ ಬರಲಿಲ್ಲವೇಕೆ’ ಎಂದು ಪ್ರಶ್ನಿಸಿದರು.

ADVERTISEMENT

ಕೋಲಾರದಲ್ಲಿ ಮಹಿಳಾ ದಿನಾಚರಣೆಯಂದು ಆಯೋಜಿಸಲಾಗಿದ್ದ ‘ಎಕ್ಸ್‌ಪೋ’ನಲ್ಲಿ ಭಾಗವಹಿಸಿದ್ದ ಮುಳಬಾಗಿಲಿನ ಮಹಿಳೆಯೊಬ್ಬರನ್ನು ಸಾರ್ವಜನಿಕವಾಗಿ ಕುಂಕುಮ ಇಟ್ಟಿಲ್ಲವೆಂದು ಸಂಸದರು ಜೋರು ದನಿಯಲ್ಲಿ ಟೀಕಿಸಿದ್ದರು. ಸಾಹಿತ್ಯ ಪರಿಷತ್ತಿನ ಕಾರ್ಯವೈಖರಿಯನ್ನು ಪ್ರಶ್ನಿಸಿದ ಕಾರಣಕ್ಕೆ ಪ್ರಸಾರ ಭಾರತಿಯ ನಿರ್ಮಲಾ ಸಿ. ಎಲಿಗಾರ್‌ ಅವರ ಸದಸ್ಯತ್ವವನ್ನು ಮಹೇಶ ಜೋಶಿ ರದ್ದು ಪಡಿಸಿದ್ದರು. ಅಧ್ಯಕ್ಷೀಯ ಭಾಷಣದಲ್ಲಿ ಇದನ್ನು ಪ್ರಸ್ತಾಪಿಸಿದ ಶ್ರೀಮತಿ ಅವರು, ಇಂತಹ ದರ್ಪದ ನಡೆಗಳ ಹಿಂದಿನ ಕಾರಣವನ್ನು ವಿಶ್ಲೇಷಿಸಿದರು.

‘ಪಿತೃಪ್ರಧಾನ ವ್ಯವಸ್ಥೆಯಲ್ಲಿ ಕುಟುಂಬವೇ ಮುಖ್ಯ ಕೇಂದ್ರ. ವಿವಾಹ ಅದರ ಭಾಗ. ಗಂಡಸರೇ ಇಲ್ಲಿ ಬಲಾಢ್ಯರು. ಹೆಂಗಸರು ಅಧೀನರು. ಹೆಣ್ಣು, ಗಂಡಿಗೆಂದೇ ನಿರ್ದಿಷ್ಟ ವರ್ತನೆಗಳನ್ನು ಹೇರಿದ್ದಾಗಿದೆ. ಆದರೆ, ಭಿನ್ನ ಲೈಂಗಿಕತೆ ಇರುವ ಅಲ್ಪಸಂಖ್ಯಾತರನ್ನು ಒಳಗೊಳ್ಳುವುದೇ ಇಲ್ಲ. ಇದನ್ನೇ ಸಮಾಜೀಕರಣ ಎನ್ನುತ್ತಾ ಪ್ರತ್ಯೇಕೀಕರಣದ ರಾಜಕಾರಣ ಮಾಡಿಕೊಂಡು ಬರಲಾಗಿದೆ. ಅಧಿಕಾರ ಎನ್ನುವುದು ಪರಿಕಲ್ಪನೆಯಾಗಿ ಉಳಿಯದೆ, ವ್ಯಕ್ತಿ ಕೇಂದ್ರಿತವಾಗಿಬಿಟ್ಟಿದೆ. ಅದಕ್ಕೇ ದರ್ಪದ ಮಾತುಗಳು ಹೊರಬರುತ್ತಿವೆ’ ಎಂದು ಅವರು ಹೇಳಿದರು.

‘ಅಭಿವೃದ್ಧಿಯ ನೆಪದಲ್ಲಿ ಬದಲಾಗಿರುವ ಬೆಂಗಳೂರೀಗ ಯಾರಿಗೂ ಸುರಕ್ಷಿತವಲ್ಲ. ಇಕ್ಕಟ್ಟು ಜಾಗದಲ್ಲಿ ಬದುಕುವ ಜನರಿಗೆ ಬಯಲೂ ಇಲ್ಲ, ಶೌಚಾಲಯವೂ ಇಲ್ಲ. ಕಾರ್ಪೊರೇಟ್‌ನವರಿಗೆ, ಬಂಡವಾಳಶಾಹಿಗಳಿಗೆ ಕೆಂಪು ಹಾಸು ಹಾಸಿದ್ದೇ ಸುತ್ತಮುತ್ತಲ ಹಳ್ಳಿ, ಜಮೀನು, ನೀರಿನ ಸೆಲೆಗಳ ನ್ನೆಲ್ಲ ನಿಯಂತ್ರಣಕ್ಕೆ ತೆಗೆದುಕೊಂಡರು. ವಲಸಿಗರೆಲ್ಲ ಶ್ರೀಮಂತರ ಮರಿಗಳೇ ಆಗಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

ಸ್ತ್ರೀವಾದ ತಮಗೆ ಹೊಸ ಬಗೆಯಾಗಿ ನೋಡುವ ದಾರಿಯಾಗಿ ಕಾಣಿಸಿದೆ ಎಂದು ಹೇಳಿದ ಅವರು, ಎಲ್ಲ ಲಿಂಗತ್ವದವರನ್ನು ಒಳಗೊಳ್ಳುವ ಪಾರಿಭಾಷಿಕದ ಹುಡುಕಾಟದಲ್ಲಿ ತಾವು ಇರುವುದಾಗಿಯೂ ಹೇಳಿದರು.

ರಾಜಕಾರಣಿಗಳದ್ದು ದುಷ್ಟ ಭಾಷೆ–ಓ.ಎಲ್.ಎನ್.
‘ಬೆಂಗಳೂರಿನಲ್ಲೇ ಇರಲು ಬಯಸುತ್ತಿರುವ ರಾಜಕಾರಣಿಗಳು ಇವತ್ತು ದುಷ್ಟಭಾಷೆಯನ್ನು ಬಳಸುತ್ತಿದ್ದಾರೆ. ಸಾರ್ವಜನಿಕವಾಗಿ ಹೆಣ್ಣುಮಕ್ಕಳನ್ನು ಅವಹೇಳನ ಮಾಡಲೂ ಹಿಂಜರಿಯುವುದಿಲ್ಲ’ ಎಂದು ಸಾಹಿತಿ ಓ.ಎಲ್. ನಾಗಭೂಷಣಸ್ವಾಮಿ ಉದ್ಘಾಟನಾ ಭಾಷಣದಲ್ಲಿ ಹೇಳಿದರು.

‘ಸಂಸ್ಕೃತ ಇಲ್ಲದೆ ಕನ್ನಡ ಇರಲಾರದು ಎಂದು ಮಾಗಡಿಯಲ್ಲಿ ನಡೆದ ತಾಲ್ಲೂಕು ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರು ಹೇಳಿದ್ದ ಮಾತು ಕೇಳಿ ಅಚ್ಚರಿಯಾಯಿತು’ ಎಂದ ಅವರು, ‘ಕನ್ನಡದಿಂದ ಸಂಸ್ಕೃತಕ್ಕೆ ಉಳಿವು ಎನ್ನುವುದೇ ಸತ್ಯ’ ಎಂದು ಪ್ರತಿಪಾದಿಸಿದರು.

ಈ ಹೊತ್ತು ಭಾಷೆಯನ್ನು ಕೊಲ್ಲುತ್ತಿರುವುದು ನಾವು ಒಪ್ಪಿಕೊಂಡಿರುವ ರಾಜಕಾರಣ ಹಾಗೂ ಅಭಿವೃದ್ಧಿಯ ಕಾರ್ಯಕ್ರಮಗಳು. ಸಾಹಿತ್ಯ ಪರಿಷತ್ತಿನ ಜಿಲ್ಲಾ, ತಾಲ್ಲೂಕು ಘಟಕಗಳು ಚಳವಳಿಗಳ ಮೂಲಕ ಕನ್ನಡ ಉಳಿಸುವ ಕೆಲಸವನ್ನು ನಿರಂತರವಾಗಿ ಮಾಡಬೇಕು ಎಂದು ಸಲಹೆ ಕೊಟ್ಟರು.

ಶಾಸಕ ರಿಜ್ವಾನ್ ಅರ್ಷದ್‌, ಕನ್ನಡದಲ್ಲೇ ಕೇಂದ್ರ ಸರ್ಕಾರದ ಪರೀಕ್ಷೆಗಳನ್ನು ಬರೆಯುವ ಅವಕಾಶ ಸಿಗಬೇಕು ಎಂದು ಆಶಿಸಿದರು.

‘ಐತಿಹಾಸಿಕ ಬೆಂಗಳೂರು’ ಕೃತಿ ಸಂಪಾದಕರೂ ಆಗಿರುವ ಸಂಶೋಧಕ ಎಚ್‌.ಎಸ್. ಗೋಪಾಲರಾವ್, ಸಾಹಿತಿ ಮಾರ್ಕಂಡಪುರಂ ಶ್ರೀನಿವಾಸ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.