ADVERTISEMENT

ಬೆಂಗಳೂರು: ಪತ್ನಿ ಕೊಂದು ಪತಿ ಆತ್ಮಹತ್ಯೆಗೆ ಯತ್ನ

ಗೋವಿಂದರಾಜನಗರ ಠಾಣಾ ವ್ಯಾಪ್ತಿಯ ಸಂಜೀವಿನಿನಗರದ ಮನೆಯಲ್ಲಿ ಕೃತ್ಯ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 16:01 IST
Last Updated 18 ಫೆಬ್ರುವರಿ 2026, 16:01 IST
<div class="paragraphs"><p>&nbsp;ಆತ್ಮಹತ್ಯೆಗೆ ಯತ್ನ</p></div>

 ಆತ್ಮಹತ್ಯೆಗೆ ಯತ್ನ

   

ಬೆಂಗಳೂರು: ಪತ್ನಿ ಕೊಲೆ ಮಾಡಿದ ಪತಿಯನ್ನು ಗೋವಿಂದರಾಜನಗರ ಠಾಣೆಯ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಸಂಜೀವಿನಿನಗರ ನಿವಾಸಿ ಕುಮಾರ್ (66) ಅವರು ಪತ್ನಿ ದೇವಮ್ಮ (58) ಅವರನ್ನು ಕೊಲೆ ಮಾಡಿ, ಬಳಿಕ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಆರೋಪಿಯನ್ನು ಬಂಧಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದರು.

ADVERTISEMENT

ಕುಮಾರ್ ಹಾಗೂ ದೇವಮ್ಮ ಅವರ ನಡುವೆ ಮಂಗಳವಾರ ರಾತ್ರಿ ಜಗಳ ನಡೆದಿತ್ತು. ನಂತರ, ದಂಪತಿ ಊಟ ಮಾಡಿ ಮಲಗಿದ್ದರು. ತಡರಾತ್ರಿ ನಿದ್ದೆಯಿಂದ ಎಚ್ಚರಗೊಂಡಿದ್ದ ಕುಮಾರ್, ಪತ್ನಿಯ ಕತ್ತಿನ ಭಾಗಕ್ಕೆ ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದಾರೆ. ಬಳಿಕ, ಮಗ ಮಂಜುನಾಥ್‍ಗೆ ಕರೆ ಮಾಡಿ ಕೊಲೆ ವಿಚಾರ ತಿಳಿಸಿದ್ದಾರೆ. ಪುತ್ರ ಮನೆಗೆ ಬಂದು ನೋಡುವಷ್ಟರಲ್ಲಿ ದೇವಮ್ಮ ಅವರು ಮೃತಪಟ್ಟಿದ್ದರು ಎಂದು ಪೊಲೀಸರು ಹೇಳಿದರು.

ತಮಿಳುನಾಡಿನ ಕುಮಾರ್ ಮತ್ತು ದೇವಮ್ಮ ದಂಪತಿ ಸಂಜೀವಿನಿನಗರದಲ್ಲಿ ನೆಲಸಿದ್ದರು. ಕುಮಾರ್ ಅವರು ಗಾರೆ ಕೆಲಸ ಮಾಡುತ್ತಿದ್ದರು. ದೇವಮ್ಮ ಅವರು ರೈಲು ನಿಲ್ದಾಣದಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು.

ದಂಪತಿಗೆ ಮೂವರು ಮಕ್ಕಳಿದ್ದು, ಈ ಪೈಕಿ ಇಬ್ಬರು ಹೆಣ್ಣು ಮಕ್ಕಳು ಮದುವೆಯಾಗಿ ಬೇರೆಡೆ ನೆಲಸಿದ್ದಾರೆ. ಮಗ ಮಂಜುನಾಥ್, ಮದುವೆಯಾಗಿ ಸಂಜೀವಿನಿನಗರದಲ್ಲೇ ಪ್ರತ್ಯೇಕವಾಗಿ ವಾಸವಾಗಿದ್ದಾರೆ ಎಂದು ಮೂಲಗಳು ಹೇಳಿವೆ. 

ತಪ್ಪು ತಿಳಿವಳಿಕೆಯಿಂದ ಕೃತ್ಯ?: ಕುಮಾರ್ ದಂಪತಿ ಹಾಗೂ ಕುಟುಂಬದ ಸದಸ್ಯರು ಜನವರಿಯಲ್ಲಿ ಟೆಂಪೊ ಟ್ರಾವೆಲರ್‌ನಲ್ಲಿ ಕೇರಳಕ್ಕೆ ಪ್ರವಾಸ ಹೋಗಿದ್ದರು. ಆಗ ಟೆಂಪೊ ಟ್ರಾವೆಲರ್‌ನ ಚಾಲಕ, ದೇವಮ್ಮ ಅವರಿಗೆ ಪರಿಚಯವಾಗಿದ್ದರು. ಬಳಿಕ ದೇವಮ್ಮ ಹಾಗೂ ಚಾಲಕ ಮೊಬೈಲ್‌ನಲ್ಲಿ ಆಗಾಗ್ಗೆ ಮಾತನಾಡುತ್ತಿದ್ದರು. ಚಾಲಕನ ಜತೆಗೆ ಮಾತನಾಡುತ್ತಿರುವುದು ಕುಮಾರ್ ಅವರಿಗೆ ಇಷ್ಟ ಇರಲಿಲ್ಲ. ಪದೇ ಪದೇ ಪ್ರಶ್ನೆ ಮಾಡುತ್ತಿದ್ದರು. ಇಬ್ಬರ ಸ್ನೇಹವನ್ನು ತಪ್ಪಾಗಿ ತಿಳಿದು ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ಪತ್ನಿ ಕೊಲೆ ಮಾಡಿದ ಬಳಿಕ ಕುಮಾರ್, ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಮನೆಗೆ ಬಂದಿದ್ದ ಪುತ್ರ ಅವರನ್ನು ರಕ್ಷಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.