ಬೆಂಗಳೂರು: ವಾರಾಂತ್ಯದ ದಿನಗಳಲ್ಲಿ ಚರ್ಚ್ಸ್ಟ್ರೀಟ್ ಅನ್ನು ಪಾದಚಾರಿಗೆ ಮೀಸಲಿಟ್ಟಿದ್ದರಿಂದ ಗಾಳಿಯ ಗುಣಮಟ್ಟ ಸುಧಾರಣೆಯಾಗಿರುವುದು ಪ್ರಾಯೋಗಿಕ ಪರೀಕ್ಷೆಯಲ್ಲಿ ದೃಢಪಟ್ಟಿದೆ.
ನಗರ ಭೂ ಸಾರಿಗೆ ನಿರ್ದೇಶನಾಲಯವು (ಡಿಯುಎಲ್ಟಿ), ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಹಾಗೂ ಇಂಗ್ಲೆಂಡ್ನ ಕ್ಯಾಟಪುಲ್ಟ್ ಸಂಸ್ಥೆಯ ಸಹಯೋಗದೊಂದಿಗೆ ‘ಸ್ವಚ್ಛ ವಾಯು ಬೀದಿ’ ಉಪಕ್ರಮವನ್ನು ಪ್ರಾಯೋಗಿಕವಾಗಿ ಕಾರ್ಯಗತಗೊಳಿಸಿತ್ತು. ಇದರ ಅಂಗವಾಗಿ 2020ರ ನವೆಂಬರ್ 7ರಿಂದ 2021ರ ಏಪ್ರಿಲ್ 6ರವರೆಗೆ ವಾರಾಂತ್ಯದ ದಿನಗಳಲ್ಲಿ ಚರ್ಚ್ಸ್ಟ್ರೀಟ್ನಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು.
ಈ ಸಂಬಂಧ ಐಐಎಸ್ಸಿ ‘ಚರ್ಚ್ಸ್ಟ್ರೀಟ್ ಫಸ್ಟ್–ಇಂಫ್ಯಾಕ್ಟ್ ಅಸೆಸ್ಮೆಂಟ್ ಆಫ್ ಪೆಡೆಸ್ಟ್ರಿನೈಸಿಂಗ್ ಆ್ಯನ್ ಅರ್ಬನ್ ಸ್ಟ್ರೀಟ್ ಇಂಟರ್ಮ್ಸ್ ಆಫ್ ಕ್ವಾಲಿಟಿ ಆಫ್ ಲೈಫ್’ ಎಂಬ ವರದಿಯನ್ನು ತಯಾರಿಸಿದೆ. ಅರ್ಬನ್ ಮಾರ್ಫ್ ಸಂಸ್ಥೆಯು ‘ಚರ್ಚ್ಸ್ಟ್ರೀಟ್ ಫಸ್ಟ್–ಕ್ಲೀನ್ ಏರ್ ಸ್ಟ್ರೀಟ್ ಟೆಸ್ಟ್ ಬೆಡ್ ರಿಪೋರ್ಟ್’ ವರದಿ ಸಿದ್ಧಪಡಿಸಿದೆ. ಇವುಗಳನ್ನು ಶುಕ್ರವಾರ ಬಿಡುಗಡೆಗೊಳಿಸಲಾಯಿತು.
‘ವಾರದ ಇತರ ದಿನಗಳಿಗೆ ಹೋಲಿಸಿದರೆ ವಾರಾಂತ್ಯದ ದಿನಗಳಲ್ಲಿ ಗಾಳಿಯ ಗುಣಮಟ್ಟ ಸುಧಾರಣೆಯಾಗಿರುವುದು ವಾಯು ಗುಣಮಟ್ಟದ ಸಂವೇದಕ ದತ್ತಾಂಶದಿಂದ ದೃಢಪಟ್ಟಿದೆ. ಚರ್ಚ್ಸ್ಟ್ರೀಟ್ ಪಾದಚಾರಿಕರಣದಿಂದ ಈ ಬೀದಿಗೆ ಭೇಟಿ ನೀಡುವವರ ಸಂಖ್ಯೆಯಲ್ಲೂ ಗಣನೀಯ ಏರಿಕೆ ಕಂಡುಬಂದಿದೆ. ಚರ್ಚ್ಸ್ಟ್ರೀಟ್ನ ವ್ಯಾಪಾರೋದ್ಯಮದಲ್ಲೂ ಚೇತರಿಕೆ ಕಂಡಿದೆ. ಶೇ 35ರಷ್ಟು ವ್ಯಾಪಾರಿಗಳು ಪಾದಚಾರಿಕರಣದ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ’ ಎಂದುಚರ್ಚ್ಸ್ಟ್ರೀಟ್ ಫಸ್ಟ್–ಕ್ಲೀನ್ ಏರ್ ಸ್ಟ್ರೀಟ್ ಟೆಸ್ಟ್ ಬೆಡ್ ರಿಪೋರ್ಟ್’ ವರದಿಯಲ್ಲಿ ಉಲ್ಲೇಖಿಸಲಾಗಿದೆ.
‘ಈ ಬೀದಿಗೆ ಭೇಟಿ ನೀಡಿದ ಸಾರ್ವಜನಿಕರೂ ಸುರಕ್ಷಿತ ಭಾವ ವ್ಯಕ್ತಪಡಿಸಿದ್ದಾರೆ. ಚರ್ಚ್ಸ್ಟ್ರೀಟ್ನ ದೈನಂದಿನ ಪಾದಚಾರಿಗಳ ಸರಾಸರಿಯು (6 ತಿಂಗಳಲ್ಲಿ) ಶೇ 91.9ರಷ್ಟು ಹೆಚ್ಚಳವಾಗಿದೆ. ಈ ಬೀದಿಯ ವ್ಯಾಪಾರಿಗಳಿಗೆ ಹೊಸ ಗ್ರಾಹಕರೂ ಸೃಷ್ಟಿಯಾಗಿದ್ದಾರೆ. ಈ ಪ್ರಯೋಗದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ’ ಎಂದು ವರದಿಯಲ್ಲಿ ತಿಳಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.