ಬೆಂಗಳೂರು: ಜಯನಗರ ಕಾಲೇಜೊಂದರ ವಿದ್ಯಾರ್ಥಿನಿಯರ ಶೌಚಾಲಯಕ್ಕೆ ನುಗ್ಗಿ ಅಸಭ್ಯವಾಗಿ ವರ್ತಿಸಿದ್ದ ಆರೋಪದಡಿ ಎಸ್. ಅಜಯ್ಕುಮಾರ್ (42) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
‘ಹನುಮಂತನಗರ 2ನೇ ಹಂತದ ಮೌಂಟ್ ಜಾಯ್ ರಸ್ತೆ ನಿವಾಸಿ ಅಜಯ್ಕುಮಾರ್, ಎಂಜಿನಿಯರ್ ಪದವೀಧರ. ಎಲ್ಲಿಯೂ ಕೆಲಸಕ್ಕೆ ಹೋಗುತ್ತಿರಲಿಲ್ಲ. ಜ. 10ರಂದು ಕಾಲೇಜಿನೊಳಗೆ ಅಕ್ರಮವಾಗಿ ಪ್ರವೇಶಿಸಿ ಶೌಚಾಲಯಕ್ಕೆ ನುಗ್ಗಿದ್ದ. ಈ ಬಗ್ಗೆ ಕಾಲೇಜು ಪ್ರಾಂಶುಪಾಲರು ದೂರು ನೀಡಿದ್ದರು’ ಎಂದು ಪೊಲೀಸರು ಹೇಳಿದರು.
‘ಕೃತ್ಯ ಎಸಗಿ ಪರಾರಿಯಾಗಿದ್ದ ಆರೋಪಿ, ಹಲವೆಡೆ ಸುತ್ತಾಡುತ್ತಿದ್ದ. ಇತ್ತೀಚೆಗೆ ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ. ಈತ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ’ ಎಂದು ತಿಳಿಸಿದರು.
ವಿದ್ಯಾರ್ಥಿನಿ ಕೈ ಹಿಡಿದ ಎಳೆದಾಡಿದ್ದ: ‘ಭದ್ರತಾ ಸಿಬ್ಬಂದಿಗಳ ಕಣ್ತಪ್ಪಿಸಿ ಶೌಚಾಲಯದೊಳಗೆ ನುಗ್ಗಿದ್ದ ಆರೋಪಿ, ಅವಿತು ಕುಳಿತುಕೊಂಡಿದ್ದ. ಇದೇ ಸಂದರ್ಭದಲ್ಲೇ ವಿದ್ಯಾರ್ಥಿನಿಯೊಬ್ಬರು ಶೌಚಾಲಯಕ್ಕೆ ಹೋಗಿದ್ದರು. ಅವರ ಕೈ ಹಿಡಿದು ಎಳೆದಾಡಿದ್ದ ಆರೋಪಿ, ಅಸಭ್ಯವಾಗಿ ವರ್ತಿಸಿದ್ದ’ ಎಂದು ಪೊಲೀಸರು ಹೇಳಿದರು.
‘ವಿದ್ಯಾರ್ಥಿನಿಯ ಬಾಯಿಯನ್ನು ಕೈಯಿಂದ ಮುಚ್ಚಿದ್ದ ಆರೋಪಿ, ಕಿರುಚಾಡದಂತೆ ತಡೆದಿದ್ದ. ತಾನು ಶೌಚಾಲಯಕ್ಕೆ ನುಗ್ಗಿದ್ದ ವಿಷಯವನ್ನು ಯಾರಿಗೂ ಹೇಳದಂತೆ ಜೀವ ಬೆದರಿಕೆಯೊಡ್ಡಿ ಸ್ಥಳದಿಂದ ಪರಾರಿಯಾಗಿದ್ದ. ಕೃತ್ಯದ ಸಂಬಂಧ ವಿದ್ಯಾರ್ಥಿನಿ ಹೇಳಿಕೆ ಸಹ ಪಡೆಯಲಾಗಿದೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.