ಬೆಂಗಳೂರು: ನಾಗರಿಕ ಪರೀಕ್ಷೆಗಳ ತರಬೇತಿಗೆ ದೇಶದಲ್ಲಿಯೇ ಪ್ರಸಿದ್ಧ ಸಂಸ್ಥೆಯಾಗಿರುವ ಇನ್ಸೈಟ್ ಐಎಎಸ್ ತರಬೇತಿ ಕೇಂದ್ರದ ವತಿಯಿಂದ ಮಂಗಳವಾರ ಚಂದ್ರ ಲೇಔಟ್ನಲ್ಲಿ ಅದ್ಧೂರಿಯಾಗಿ, ಅರ್ಥಪೂರ್ಣವಾಗಿ ಕನ್ನಡ ನಾಡು–ನುಡಿಯ ಪರಂಪರೆಯ ವೈಭವ ಬಿಂಬಿಸುವ ರೀತಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಲಾಯಿತು.
ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ವಿನಯ್ ಕುಮಾರ್ ಜಿ.ಬಿ. ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ‘ನಂತರ ಮಾತನಾಡಿದ ಅವರು, ನಾಡಿನ ಏಕತೆ, ಸ್ವಾಭಿಮಾನ, ಸಾಮರಸ್ಯ ಮತ್ತು ಸಹಬಾಳ್ವೆಯ ಸಂಕೇತವಾದ ರಾಜ್ಯೋತ್ಸವವನ್ನು ರಾಜ್ಯದಾದ್ಯಂತ ಕನ್ನಡಿಗರು ಹೆಮ್ಮಯಿಂದ ಆಚರಣೆ ಮಾಡುತ್ತಾರೆ. ಕರ್ನಾಟಕದ ಪ್ರತಿ ಮನೆ–ಮನದಲ್ಲಿ ಹಬ್ಬದ ರೀತಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ಕನ್ನಡ ರಾಜ್ಯೋತ್ಸವ ನಿತ್ಯೋತ್ಸವವಾಗಬೇಕು ಎಂಬುದು ಇನ್ಸೈಟ್ ಸಂಸ್ಥೆಯ ಆಶಯ’ ಎಂದರು.
ವಿದ್ಯಾರ್ಥಿಗಳ ಡೊಳ್ಳು ಕುಣಿತ ತಂಡದ ಜೊತೆಗೆ ತಾಯಿ ಭುವನೇಶ್ವರಿಯ ಮೆರವಣಿಗೆ ಚಂದ್ರ ಲೇಔಟ್ ಮುಖ್ಯ ರಸ್ತೆಯಲ್ಲಿ ವಿಜೃಂಭಣೆಯಿಂದ ನೆರವೇರಿತು. ಸಂಸ್ಥೆಯ ವಿದ್ಯಾರ್ಥಿಗಳಿಂದ ಪ್ರಾರ್ಥನೆ ಹಾಗೂ ನಾಡ ಗೀತೆಯಿಂದ ಪ್ರಾರಂಭವಾಗಿ, ಕನ್ನಡ ನಾಡು-ನುಡಿ, ಪರಂಪರೆಯನ್ನು ಬಿಂಬಿಸುವ ಭರತನಾಟ್ಯ, ಯಕ್ಷಗಾನ,ಡೊಳ್ಳು ಕುಣಿತ,ನಾಟಕಾಭಿನಯ,ಕನ್ನಡ ಸುಮಧುರ ಚಿತ್ರ ಗೀತೆಗಳ ಗಾಯನ, ನೃತ್ಯ ಹೀಗೆ ಹತ್ತು ಹಲವಾರು ಕಲಾ ಪ್ರಕಾರಗಳು ಸಂಸ್ಥೆಯ ಪ್ರತಿಭಾವಂತ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದರು.
ಕನ್ನಡ ಚಿತ್ರರಂಗದ ಹಿನ್ನಲೆ ಗಾಯಕಿ ಶಮಿತಾ ಮಲ್ನಾಡ್ ಮತ್ತು ತಂಡದ ಗಾಯನ ಪ್ರದರ್ಶನ ನೆರೆದಿದ್ದ ಎಲ್ಲಾ ಪ್ರೇಕ್ಷಕರ ಗಮನ ಸೆಳೆಯಿತು.
ಕಾರ್ಯನಿರ್ವಾಹಕ ಅಧಿಕಾರಿ ಶರತ್ ಕುಮಾರ್ ಎಸ್, ವಿಜಯನಗರದ ಶಾಸಕ ಎಂ. ಕೃಷ್ಣಪ್ಪ, ಪಾಲಿಕೆ ಮಾಜಿ ಸದಸ್ಯರಾದ ದೊಡ್ಡಣ್ಣ, ಉಮೇಶ್ ಶೆಟ್ಟಿ, ವೆಂಕಟೇಶ್, ಕಿರುತೆರೆಯ ನಟ ನಾರಾಯಣಸ್ವಾಮಿ ಹಾಗೂ ಸಂಸ್ಥೆಯ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿಗಳು ಹಾಗೂ 3,500 ಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳು ಹಾಗೂ ನಾಗರಿಕರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.