ADVERTISEMENT

ಯೇಸು ಪ್ರತಿಮೆ ವಿವಾದ ಬಿಜೆಪಿ ನಡೆಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2020, 23:38 IST
Last Updated 2 ಜನವರಿ 2020, 23:38 IST

ಬೆಂಗಳೂರು: ‘ಕಪಾಲ ಬೆಟ್ಟದಲ್ಲಿ ಯೇಸುವಿನ ಪ್ರತಿಮೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡರು ಅನಗತ್ಯವಾಗಿ ಸಲ್ಲದ ರಾಜಕೀಯ ಮಾಡುತ್ತಿದ್ದಾರೆ. ಸೋದರ ಭಾವದಿಂದ ಸೌಹಾರ್ದಯುತವಾಗಿ ಬದುಕುತ್ತಿರುವ ಅಮಾಯಕ ಜನರಲ್ಲಿ ಕೋಮುದ್ವೇಷ ಹರಡಲಾಗುತ್ತಿದೆ’ ಎಂದು ಸಾಹಿತಿಗಳು ಕಿಡಿಕಾರಿದ್ದಾರೆ.

ಸಾಹಿತಿಗಳಾದ ದೇವನೂರ ಮಹಾದೇವ, ಪ್ರೊ.ಜಿ.ಕೆ.ಗೋವಿಂದರಾವ್, ಡಾ. ಕೆ.ಮರುಳಸಿದ್ಧಪ್ಪ, ನಟರಾಜ್ ಹುಳಿಯಾರ್, ಡಾ. ಬಂಜಗೆರೆ ಜಯಪ್ರಕಾಶ್, ಪ್ರೊ.ಎಸ್.ಜಿ.ಸಿದ್ಧರಾಮಯ್ಯ, ಡಾ.ರವಿಕುಮಾರ್ ಬಾಗಿ, ಪ್ರೊ.ಎಸ್.ಎನ್.ನಾಗರಾಜ್ ರೆಡ್ಡಿ ಹಾಗೂ ಮಂಜುನಾಥ ಅದ್ದೆ ಅವರು ಯೇಸು ಪ್ರತಿಮೆ ನಿರ್ಮಾಣಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.

‘ಕ್ಷೇತ್ರದ ಜನರ ಆಶೋತ್ತರಗಳಿಗೆ ಸ್ಪಂದಿಸುವುದು ಜನಪ್ರತಿನಿಧಿಯ ಕರ್ತವ್ಯ. ಭಾರತವು ಧರ್ಮಾತೀತ ಹಾಗೂ ಜಾತ್ಯತೀತ ದೇಶವಾಗಿದ್ದು, ಇಲ್ಲಿ ಎಲ್ಲ ಧರ್ಮೀಯರ ಭಾವನೆಗಳನ್ನೂ ಗೌರವಿಸಬೇಕು. ಈ ವಿಚಾರವಾಗಿ ಅನಗತ್ಯವಾಗಿ ಬಿಜೆಪಿ ರಾಜಕೀಯ ಮಾಡುತ್ತಿದೆ.ಕಪಾಲ ಬೆಟ್ಟದಲ್ಲಿ ಭೈರವನ ಪ್ರತಿಮೆ ನಿರ್ಮಿಸಬೇಕು ಎನ್ನುವುದು ಅವರ ವಾದ. ಅದು ಕೂಡ ಸಾಕಾರವಾಗಲಿ. ಆದರೆ, ಜಗತ್ತಿಗೆ ಶಾಂತಿಯನ್ನು ಬೋಧಿಸಿರುವ ಯೇಸುವಿನ ಪ್ರತಿಮೆ ನಿರ್ಮಾಣಕ್ಕೆ ಅಡ್ಡಿಪಡಿಸುತ್ತಿರುವುದು ಸರ್ವಧರ್ಮ ಸಹಿಷ್ಣುತೆಗೆ ವಿರೋಧ’ ಎಂದು ಸಾಹಿತಿಗಳು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.