
ನೆಲಮಂಗಲ: ರಾಜ್ಯದಾದ್ಯಂತ ವಿವಿಧ ನಾಟಕ ಮಂಡಳಿಗಳನ್ನು ಒಗ್ಗೂಡಿಸಿ, 13 ದಿನಗಳ ನಿರಂತರ ನಾಟಕೋತ್ಸವ ಜ್ಞಾನಭಾರತಿ ಚಾರಿಟಬಲ್ ಟ್ರಸ್ಟ್ ಹಮ್ಮಿಕೊಂಡಿದೆ.
‘ಒಂದು ನಾಟಕ ಪ್ರದರ್ಶನಕ್ಕೆ ಲಕ್ಷಾಂತರ ರೂಪಾಯಿ ವ್ಯಯವಾಗುತ್ತದೆ, ಅಂತಹದ್ದರಲ್ಲಿ ನಿರಂತರ 13 ನಾಟಕಗಳ ಪ್ರದರ್ಶನ ಸಾಹಸವೇ ಸರಿ’ ಎಂದು ಶಿವಗಂಗೆ ಮೇಲಣಗವಿ ಮಠದ ಮಲಯ ಶಾಂತಮುನಿ ದೇಶೀಕೇಂದ್ರ ಶ್ರೀಗಳು ಶ್ಲಾಘಿಸಿದರು.
ಪಟ್ಟಣದ ಕೆಇಬಿ ಎದುರು ಜ್ಞಾನಭಾರತಿ ಚಾರಿಟಬಲ್ ಟ್ರಸ್ಟ್ ನಿರ್ಮಿಸಿರುವ ಬಯಲು ‘ರಂಗಸಜ್ಜಿಕೆ‘ ವೇದಿಕೆಯಲ್ಲಿ 12ನೇ ದಿನದ ‘ಶ್ರೀಕೃಷ್ಣ ಸಂಧಾನ’ ನಾಟಕಕ್ಕೆ ಅವರು ಚಾಲನೆ ನೀಡಿದರು.
ಕರ್ನಾಟಕ ಸಾಂಸ್ಕೃತಿಕ ಸಂಘ ಸಂಸ್ಥೆಗಳ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ವೀರೇಶ್ ಪ್ರಸಾದ್ ಮಾತನಾಡಿ, ‘ಕಲಾವಿದರಿಗೆ ಜೀವನ ಭದ್ರತೆ ಇಲ್ಲ. ಸರ್ಕಾರದ ವಿವಿಧ ಯೋಜನೆಗಳಲ್ಲಿ ಕಲಾವಿದರಿಗೂ ಮೀಸಲಾತಿ ಕಲ್ಪಿಸಲು ಹೋರಾಟದ ಅಗತ್ಯ ಇದೆ’ ಎಂದರು.
ಜ್ಞಾನಭಾರತಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಆರ್.ರಂಗನಾಥ್ ಸಂಪಾದಕತ್ವದ "ಹಂಸೆ" ಹಾಗು ಜಿ.ಆರ್.ಕೃಷ್ಣಮೂರ್ತಿ ಸಂಪಾದಕತ್ವದ "ವಿಬಿ" ಟಿವಿ ವಾಹಿನಿಗಳಿಗೆ ಚಾಲನೆ ನೀಡಲಾಯಿತು. ರಾಷ್ಟ್ರೀಯ ಕಿಸಾನ್ ಸಂಘಟನೆ ರಾಜ್ಯ ಉಪಾಧ್ಯಕ್ಷ ಭೀಮಯ್ಯ, ಡಿಜಿಟಲ್ ವಾರ್ತೆ ಸಂಪಾದಕ ಡಿ.ಆರ್.ಅಭಿಷೇಕ್, ಆ ದಿನಗಳು ಪತ್ರಿಕೆ ಭಾನುಪ್ರಕಾಶ್ ಉಪಸ್ಥಿತರಿದ್ದರು. ಲೇಖಕರಾದ ಮಾಧುರಿ ದೇಶಪಾಂಡೆ, ರೇಣುಕಾ ಪ್ರಸಾದ್, ಕಲಾವಿದ ಕೃಷ್ಣಪ್ಪ, ರೈತ ಬಸವರಾಜು, ಉಪನ್ಯಾಸಕ ಗಂಗರಾಜು ಅವರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.