ಸಂಚಾರ ದಟ್ಟಣೆ
ಬೆಂಗಳೂರು: ಸಂಚಾರ ದಟ್ಟಣೆ ಪರಿಸ್ಥಿತಿ ತಿಳಿಯುವ ಸಲುವಾಗಿ ಪ್ರಥಮ ಭಾರಿಗೆ ನಗರದ ದಕ್ಷಿಣ ಸಂಚಾರ ವಿಭಾಗದಲ್ಲಿ ಡಿಸಿಪಿ ಶಿವಪ್ರಕಾಶ್ ದೇವರಾಜು ನೇತೃತ್ವದಲ್ಲಿ ‘ಜಾಯಿನ್ ದಿ ಕಮ್ಯೂಟ್’ (ವಾಹನ ಸವಾರರ ಜತೆ ಪ್ರಯಾಣ) ಎಂಬ ಅಭಿಯಾನ ಆರಂಭಿಸಲಾಗಿದೆ.
ವಾಹನ ಪ್ರಯಾಣಿಕರ ಜತೆಯೇ ಅಧಿಕಾರಿ ಪ್ರಯಾಣಿಸಿ ರಸ್ತೆಯ ಮಾರ್ಗ ಮಧ್ಯೆ ಉಂಟಾಗುವ ಸಂಚಾರ ದಟ್ಟಣೆ, ವಾಹನ ನಿಲುಗಡೆ ಪ್ರದೇಶಗಳ ಅತಿಕ್ರಮಣ ಸೇರಿ ಹಲವು ಸಮಸ್ಯೆಗಳ ನೈಜ ಸ್ಥಿತಿ ಅರಿಯಬಹುದು. ಪ್ರಾಯೋಗಿಕವಾಗಿ ಡಿಸಿಪಿ ಈ ಅಭಿಯಾನದ ಭಾಗವಾಗಿ ಪ್ರಯಾಣಿಕರ ಜತೆ ಪ್ರಯಾಣ ಮಾಡಲಿದ್ದಾರೆ.
ನಾಗರಿಕರನ್ನು ನೇರವಾಗಿ ಸಂಚಾರ ಸಮಸ್ಯೆಗಳ ಪರಿಹಾರದಲ್ಲಿ ಭಾಗಿಯಾಗಿಸುವುದು ಈ ಅಭಿಯಾನದ ಉದ್ದೇಶ. ನಾಗರಿಕರು ತಮ್ಮ ದೈನಂದಿನ ಪ್ರಯಾಣದ ಮಾರ್ಗಗಳು ಮತ್ತು ಪ್ರಯಾಣದ ವಿಧಾನಗಳನ್ನು ನೋಂದಣಿ ಮಾಡಿಕೊಳ್ಳಲು ಆಹ್ವಾನಿಸಲಾಗಿದೆ.
ಇದರಲ್ಲಿ ಆಯ್ಕೆಯಾದ ನಾಗರಿಕರಿಗೆ ಶಿವಪ್ರಕಾಶ್ ದೇವರಾಜು ಅವರೊಂದಿಗೆ ಸಂಚಾರ ಮಾಡುವ ಅವಕಾಶ ದೊರೆಯಲಿದೆ. ಈ ವೇಳೆ ದಟ್ಟಣೆ, ವಿಳಂಬ ಅಥವಾ ಸುರಕ್ಷತೆ ಕಾಳಜಿಗಳು ಸೇರಿದಂತೆ ನಾಗರಿಕರು ಸಂಚಾರ ಸಮಸ್ಯೆಗಳನ್ನು ನೇರವಾಗಿ ಅಧಿಕಾರಿಗೆ ವಿವರಿಸಬಹುದು. ಇದರಲ್ಲಿ ಸಂಗ್ರಹವಾಗುವ ಮಾಹಿತಿಯನ್ನು ಉಪಯೋಗಿಸಿ ನಗರದಾದ್ಯಂತ ಸಂಚಾರ ಸಮಸ್ಯೆಗೆ ಪರಿಹಾರ ಹುಡುಕುವ ಉದ್ದೇಶವಿದೆ.
ಡಿಸಿಪಿ ಶಿವಪ್ರಕಾಶ್ ದೇವರಾಜು ಮಾತನಾಡಿ, ‘ನಗರ ಸಂಚಾರ ಸಮಸ್ಯೆಗಳು ಕೇವಲ ಪೊಲೀಸರು ನಿರ್ವಹಿಸಬೇಕಾದ ಸಮಸ್ಯೆಗಳಲ್ಲ. ನಾಗರಿಕರು ಮತ್ತು ಪೊಲೀಸರು ಒಟ್ಟಾಗಿ ಪರಿಹರಿಸಬೇಕಾದ ಸವಾಲುಗಳಿವೆ . ನಾಗರಿಕರು ಎದುರಿಸುವ ದೈನಂದಿನ ಸವಾಲುಗಳನ್ನು ಅರ್ಥ ಮಾಡಿಕೊಂಡು ಪರಿಹಾರಗಳನ್ನು ಕಂಡುಕೊಳ್ಳುವ ಅಗತ್ಯವಿದೆ’ ಎಂದರು.
ಪ್ರಯಾಣಿಕರು ನಿತ್ಯದ ಪ್ರಯಾಣದ ಮಾರ್ಗಗಳು ಮತ್ತು ಯಾವ ವಾಹನಗಳಲ್ಲಿ ಸಂಚರಿಸುತ್ತಾರೆ ಎಂಬ ವಿವರಗಳನ್ನು ಆನ್ಲೈನ್ https://jointhecommutebstp.in ಮೂಲಕ ನೋಂದಾಯಿಸಬೇಕು. ಬಳಿಕ ಅಧಿಕಾರಿ ಜತೆ ಪ್ರಯಾಣಿಸುವ ಪ್ರಯಾಣಿಕರನ್ನು ಆಯ್ಕೆ ಮಾಡಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.