ADVERTISEMENT

ಮಲ್ಲೇಶ್ವರದಲ್ಲಿ ಕಡಲೆಕಾಯಿ ಪರಿಷೆಗೆ ಚಾಲನೆ

ಕಾಡುಮಲ್ಲೇಶ್ವರ ಗೆಳೆಯರ ಬಳಗದಿಂದ ಆಯೋಜನೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2022, 19:30 IST
Last Updated 12 ನವೆಂಬರ್ 2022, 19:30 IST
ಮಲ್ಲೇಶ್ವರದಲ್ಲಿ ನಡೆದ ಕಡಲೆಕಾಯಿ ಪರಿಷೆಯಲ್ಲಿ ಯುವತಿಯರು ಕಡಲೆಕಾಯಿ ಖರೀದಿಸಿದರು. –ಪ್ರಜಾವಾಣಿ ಚಿತ್ರ/ಎಂ.ಎಸ್. ಮಂಜುನಾಥ್
ಮಲ್ಲೇಶ್ವರದಲ್ಲಿ ನಡೆದ ಕಡಲೆಕಾಯಿ ಪರಿಷೆಯಲ್ಲಿ ಯುವತಿಯರು ಕಡಲೆಕಾಯಿ ಖರೀದಿಸಿದರು. –ಪ್ರಜಾವಾಣಿ ಚಿತ್ರ/ಎಂ.ಎಸ್. ಮಂಜುನಾಥ್   

ಬೆಂಗಳೂರು: ಕಾಡುಮಲ್ಲೇಶ್ವರ ಗೆಳೆಯರ ಬಳಗವು ಮಲ್ಲೇಶ್ವರದಲ್ಲಿ ಆಯೋಜಿಸಿರುವ 6ನೇ ವರ್ಷದ ಕಡಲೆಕಾಯಿ ಪರಿಷೆಗೆ ಶನಿವಾರ ಚಾಲನೆ ನೀಡಲಾಯಿತು. ಸೋಮವಾರದವರೆಗೆ ಪರಿಷೆ ನಡೆಯಲಿದ್ದು, ಮಲ್ಲೇಶ್ವರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ವಿವಿಧ ತಳಿಗಳ ಕಡಲೆಕಾಯಿಗಳ ರಾಶಿಗಳ ಸಾಲು ಒಂದೆಡೆಯಾದರೆ, ಮತ್ತೊಂದೆಡೆ ಹಲವು ಬಗೆಯ ತಿಂಡಿ–ತಿನಿಸುಗಳು, ಮಾರಾಟ ಮಳಿಗೆಗಳು ಕೈಬಿಸಿ ಕರೆಯುತ್ತಿವೆ. ದೇಗುಲದ ಸುತ್ತಲಿನ ರಸ್ತೆಗಳನ್ನು ಹೂವು–ತಳಿರು ತೋರಣಗಳಿಂದ ಅಲಂಕರಿಸಲಾಗಿದೆ. ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಗರ್ಭಗುಡಿ ಹಾಗೂ ಒಳಾಂಗಣವನ್ನು ಆರು ಮೂಟೆ ಕಡಲೆಕಾಯಿಗಳಿಂದ ಅಲಂಕರಿಸಿರುವುದು ವಿಶೇಷ.

‘ಆಂಧ್ರಪ್ರದೇಶದ ಓಂಗಲ ಎಂಬ ದೇಶಿಯ ತಳಿ ಹಸುಗಳನ್ನು ದತ್ತು ಪಡೆದಿದ್ದು, ಕಾಡು ಮಲ್ಲೇಶ್ವರ ಬಳಗದಿಂದ ಪೋಷಿಸಲಾಗುವುದು. ದೇವಾಲಯದಲ್ಲಿಯೂ ಈ ತಳಿಯ ಬಸವನನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅನಾಥ ಗೋವುಗಳನ್ನು ತಂದು ಸಾಕುವ ಕೆಲಸ ಮಾಡಲಾಗುವುದು’ ಎಂದು ಕಾಡು ಮಲ್ಲೇಶ್ವರ ಗೆಳೆಯರ ಬಳಗದ ಅಧ್ಯಕ್ಷ ಬಿ.ಕೆ. ಶಿವರಾಂ ಭರವಸೆ ನೀಡಿದರು.

ADVERTISEMENT

‘ದೇವರ ಮೇಲೆ ಹಾಕಿರುವ ಕಡಲೆಕಾಯಿಗಳನ್ನು ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ಪ್ರಸಾದದ ರೂಪದಲ್ಲಿ ನೀಡುತ್ತಿದ್ದೇವೆ’ ಎಂದು ಪ್ರಧಾನ ಅರ್ಚಕ ಗಂಗಾಧರ ದೀಕ್ಷಿತ ಮಾಹಿತಿ ನೀಡಿದರು.

ಹೊರ ರಾಜ್ಯದ ಶೇಂಗಾ: ರಾಜ್ಯದ ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲದೆ, ತಮಿಳುನಾಡು, ಆಂಧ್ರಪ್ರದೇಶ ಮತ್ತಿತರ ಭಾಗಗಳಿಂದಲೂ ಹಾಲ್ಗಡಲೆ, ಕೆಂಪುಕಡಲೆ ಸೇರಿದಂತೆ ಎರಡು, ಮೂರು ಹಾಗೂ ನಾಲ್ಕು ಬೀಜದ ನಾಟಿ ಮತ್ತು ಹೈಬ್ರಿಡ್ ತಳಿಗಳ ಕಾಯಿಗಳು ಬಂದಿದ್ದು, ಸೇರಿಗೆ ₹30 ಹಾಗೂ ₹40 ರಂತೆ ಮಾರಾಟ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.