
ಬೆಂಗಳೂರು: ನಗರದ ಕಗ್ಗದಾಸಪುರ–ಮಹದೇವಪುರವನ್ನು ಸಂಪರ್ಕಿಸುವ ಕಗ್ಗದಾಸಪುರ ರೈಲ್ವೆ ಕ್ರಾಸಿಂಗ್ ತೆಗೆದು ರೈಲ್ವೆ ಮೇಲ್ಸೇತುವೆ ಇಲ್ಲವೇ ಕೆಳಸೇತುವೆ ನಿರ್ಮಿಸುವ ಯೋಜನೆ ದಶಕ ಕಳೆದರೂ ಅನುಷ್ಠಾನಗೊಂಡಿಲ್ಲ. ರೈಲು ಸಂಚರಿಸುವ ವೇಳೆ ಎರಡೂ ಕಡೆ ವಾಹನಗಳು ಸಾಲುಗಟ್ಟಿ ನಿಲ್ಲುವುದು ತಪ್ಪಿಲ್ಲ.
ಬೆಳಿಗ್ಗೆ ಮತ್ತು ಸಂಜೆ ವೇಳೆ ದಟ್ಟಣೆ ಅವಧಿಯಲ್ಲಿ ರೈಲು ಬರುವಾಗ ವಾಹನಗಳು ಸಂಚರಿಸದಂತೆ ಗೇಟ್ ಹಾಕಿದಾಗ ಕಿಲೋಮೀಟರ್ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ. ಆ ನಂತರ ಗೇಟ್ ತೆರೆದಾಗ ಪೊಲೀಸರು ಎಷ್ಟೇ ನಿಯಂತ್ರಿಸಿದರೂ ಎರಡೂ ಕಡೆಯಿಂದ ಒಮ್ಮೆಲೇ ವಾಹನಗಳು ನುಗ್ಗುವುದರಿಂದ ಸರಾಗವಾಗಿ ಸಾಗಲು ಸಾಧ್ಯವಾಗುವುದಿಲ್ಲ. ಅರ್ಧಗಂಟೆಗೂ ಹೆಚ್ಚು ಹೊತ್ತು ದಟ್ಟಣೆ ಉಂಟಾಗುತ್ತದೆ. ವಾಹನಗಳು ಇನ್ನೂ ಪೂರ್ಣವಾಗಿ ದಾಟಿ ಹೋಗಿರುವುದಿಲ್ಲ. ಅಷ್ಟು ಹೊತ್ತಿಗೆ ಇನ್ನೊಂದು ರೈಲು ಬರುವ ಸೂಚನೆ ಬಂದು ಮತ್ತೆ ಗೇಟ್ ಬೀಳುತ್ತದೆ. ವಾಹನಗಳ ಸಾಲು ಮತ್ತೆ ಬೆಳೆಯುತ್ತದೆ.
‘ಪ್ರಯಾಣಿಕರ ರೈಲು ಸಂಚರಿಸುವ ಸಮಯ ಮೊದಲೇ ನಿಗದಿಯಾಗಿರುತ್ತದೆ. ಅದು ಹೇಗೋ ಕಷ್ಟಪಟ್ಟು ನಿರ್ವಹಣೆ ಮಾಡುತ್ತಿರುತ್ತೇವೆ. ಅದರ ನಡುವೆ ಗೂಡ್ಸ್ ರೈಲು ಬರುತ್ತದೆ. ಆಗ ವಾಹನಗಳು ಅಡ್ಡಾದಿಡ್ಡಿ ನಿಂತು ಬಿಡುತ್ತವೆ. ಗೂಡ್ಸ್ ರೈಲುಗಳು ಪ್ರತಿದಿನ ಬೇರೆ ಬೇರೆ ಸಮಯದಲ್ಲಿ ಬರುವುದರಿಂದ ಸಮಸ್ಯೆ ಉಂಟಾಗುತ್ತಿದೆ. ಇಲ್ಲಿ ವಾಹನ ನಿಯಂತ್ರಿಸಲು ಕನಿಷ್ಠ ನಾಲ್ಕು ಜನ ಪೊಲೀಸರು ಬೇಕು. ಆದರೆ, ಮಹದೇವಪುರ ಪೊಲೀಸ್ ಠಾಣೆಯಿಂದ ಒಬ್ಬರು, ಜೀವನ್ ಬಿಮಾ ನಗರ ಪೊಲೀಸ್ ಠಾಣೆಯಿಂದ ಒಬ್ಬರಷ್ಟೇ ಇರುತ್ತೇವೆ’ ಎಂದು ಸಂಚಾರ ವಿಭಾಗದ ಪೊಲೀಸರು ಅಸಹಾಯಕತೆ ತೋಡಿಕೊಂಡರು.
ಡಿಆರ್ಡಿಒ, ಎಚ್ಎಎಲ್, ಮಾರತ್ಹಳ್ಳಿ, ಹೊರ ವರ್ತುಲ ರಸ್ತೆ, ನಾರಾಯಣಪುರ ಮುಂತಾದ ಕೈಗಾರಿಕಾ ಪ್ರದೇಶಗಳಲ್ಲದೇ ಪ್ರಮುಖ ಐಟಿ ಕೇಂದ್ರಗಳು ಈ ರಸ್ತೆಯ ಮೂಲಕವೇ ಸಂಪರ್ಕ ಹೊಂದಿವೆ. ಐಟಿ ಉದ್ಯೋಗಿಗಳು, ಕೈಗಾರಿಕಾ ಉದ್ಯೋಗಿಗಳು ಅಲ್ಲದೇ ಸುತ್ತಮುತ್ತಲಿನ ನಿವಾಸಿಗಳು ಕಾರು, ದ್ವಿಚಕ್ರ ವಾಹನಗಳಲ್ಲಿ ಸಾಗುತ್ತಾರೆ. ಅದೇ ಸಮಯದಲ್ಲಿ ಶಾಲಾ, ಕಾಲೇಜುಗಳ ವಾಹನಗಳೂ ಸಾಗುತ್ತವೆ. ಕಗ್ಗದಾಸಪುರ ಕಡೆಯಿಂದ ರಸ್ತೆ ಸ್ವಲ್ಪ ಅಗಲವಾಗಿ ಇದೆ. ಆದರೆ, ಮಹದೇವಪುರ, ಕೆ.ಆರ್.ಪುರ, ವಿಜ್ಞಾನ ನಗರ ಕಡೆಗೆ ಸಾಗುವ ರಸ್ತೆಗಳು ಕಿರಿದಾಗಿರುವುದರಿಂದ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದರು.
ಕಗ್ಗದಾಸಪುರ ಲೆವೆಲ್ ಕ್ರಾಸಿಂಗ್ನಲ್ಲಿ ಉಂಟಾಗುವ ದಟ್ಟಣೆಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದು ಎರಡು ವರ್ಷಗಳ ಹಿಂದೆ ಆನ್ಲೈನ್ನಲ್ಲಿ ಸಹಿ ಸಂಗ್ರಹ ಅಭಿಯಾನವನ್ನು ವಿವಿಧ ಉದ್ಯೋಗಿಗಳು ನಡೆಸಿದ್ದರು. ಆದರೂ ಯಾವುದೇ ಪರಿಹಾರ ಕ್ರಮಗಳು ಆಗಿಲ್ಲ ಎಂದು ದೂರಿದರು.
ಜನರು ಏನು ಹೇಳುತ್ತಾರೆ?
ಕಗ್ಗದಾಸಪುರದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಿಸಲಾಗುವುದು ಎಂದು ಹತ್ತು ವರ್ಷದಿಂದ ಕಥೆ ಹೇಳುತ್ತಿದ್ದಾರೆ. ಇನ್ನು ಹತ್ತು ವರ್ಷ ಕಳೆದರೂ ನಿರ್ಮಾಣವಾಗುವ ಲಕ್ಷಣ ಕಾಣುತ್ತಿಲ್ಲ. ಶಾಸಕರು ಸಚಿವರು ರೈಲ್ವೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಕಾರ್ಯಗತಗೊಂಡಿಲ್ಲ. ಮೇಲ್ಸೇತುವೆ ನಿರ್ಮಿಸಿದರೆ ಸಮಸ್ಯೆ ಪರಿಹಾರಗೊಳ್ಳಲಿದೆ.
-ಕುಮಾರ್ ನಾರಾಯಣಪುರ
ಜನಪ್ರತಿನಿಧಿಗಳು ಅಧಿಕಾರಿಗಳಿಗೆ ಇಚ್ಛಾಶಕ್ತಿಯ ಕೊರತೆ ಇರುವುದರಿಂದ ಸಮಸ್ಯೆ ಹಾಗೇ ಉಳಿದಿದೆ. ನಾವು ಎಷ್ಟೇ ಮನವಿ ಸಲ್ಲಿಸಿದರೂ ಪ್ರಯೋಜವನವಾಗಿಲ್ಲ. ರಾತ್ರಿ 9ರ ನಂತರ ಇಲ್ಲಿ ಸಂಚಾರ ಪೊಲೀಸರು ಕೂಡ ಇರುವುದಿಲ್ಲ. ಆಗ ರೈಲು ಬಂದು ಹೋದ ಮೇಲೆ ವಾಹನಗಳನ್ನು ಯದ್ವಾತದ್ವಾ ನುಗ್ಗಿಸುತ್ತಾರೆ. ಹಲವು ಬಾರಿ ಇದೇ ವಿಚಾರಕ್ಕೆ ಹೊಡೆದಾಟವಾಗಿದೆ.
- ಎಂ.ಕೆ. ಸುನೀಲ್ ಕುಮಾರ್ ಕೊಂಡಪ್ಪ ಲೇಔಟ್ ಅಸೋಸಿಯೇಷನ್ ಮಹದೇವಪುರ
ಬೆಳಿಗ್ಗೆ ಮತ್ತು ಸಂಜೆ ಇಲ್ಲಿ ವಿಪರೀತ ಸಂಚಾರ ದಟ್ಟಣೆ ಸಮಸ್ಯೆ ಉಂಟಾಗುತ್ತಿದೆ. ವಾಹನಗಳನ್ನು ನಿಯಂತ್ರಿಸಿ ಒಂದೇ ಪಥದಲ್ಲಿ ಸಾಗುವಂತೆ ಮಾಡಲು ಇನ್ನೊಂದು ಪಥದಲ್ಲಿ ಎದುರಿನಿಂದ ಬರುವ ವಾಹನಗಳಿಗೆ ಅವಕಾಶ ಮಾಡಿಕೊಡಲು ಪೊಲೀಸರೊಂದಿಗೆ ನಾವೂ ಸೇರಿಕೊಂಡು ಕೆಲಸ ಮಾಡುತ್ತಿದ್ದೇವೆ. ಶಕ್ತಿವೇಲು ಕಗ್ಗದಾಸಪುರ ಅಂಗಡಿ ವ್ಯಾಪಾರಿ ಮೇಲ್ಸೇತುವೆ ನಿರ್ಮಾಣಗೊಂಡರೆ ಸಮಸ್ಯೆ ಬಹುತೇಕ ಪರಿಹಾರವಾಗುತ್ತದೆ. ಆದರೆ ಭೂಸ್ವಾಧಿನಕ್ಕೆ ಮುಂದಾದಾಗ ಕೆಲವರು ನ್ಯಾಯಾಲಯದ ಮೆಟ್ಟಲೇರಿದ್ದರಿಂದ ಮೇಲ್ಸೇತುವೆ ಯೋಜನೆ ಸ್ಥಗಿತಗೊಂಡಿದೆ. ಇಲ್ಲಿರುವ ಅಂಗಡಿ ವ್ಯಾಪಾರಿಗಳಿಗೆ ಕುತ್ತು ಆಗದಂತೆ ಮೇಲ್ಸೇತುವೆ ನಿರ್ಮಿಸಬೇಕು.
-ಮಂಜುನಾಥ್ ಕೆ.ಆರ್.ಪುರ
ಭೂಸ್ವಾಧೀನ ಸಮಸ್ಯೆ ಕಗ್ಗದಾಸಪುರ ಲೆವೆಲ್ ಕ್ರಾಸಿಂಗ್ ಬಳಿ ನೂರು ಮೀಟರ್ ಸಮಸ್ಯೆಯನ್ನು ಉಂಟು ಮಾಡಿದೆ. ಹಳಿ ದ್ವಿಪಥ ಯೋಜನೆಯ ಕಾಮಗಾರಿ ಕೂಡ ಈ ನೂರು ಮೀಟರ್ ಬಿಟ್ಟೇ ನಡೆದಿದೆ. ಅಲ್ಲದೇ ಕೆ–ರೈಡ್ ನಿರ್ಮಿಸುತ್ತಿರುವ ಬೆಂಗಳೂರು ಉಪನಗರ ರೈಲು ಯೋಜನೆಯೂ (ಬಿಎಸ್ಆರ್ಪಿ) ಇಲ್ಲಿಂದ ಸಾಗುತ್ತಿದ್ದು ಕೆಲಸವಾಗಿಲ್ಲ. ಭೂಸ್ವಾಧೀನ ಸಮಸ್ಯೆಯನ್ನು ಇತ್ಯರ್ಥ ಮಾಡಿಕೊಳ್ಳದೇ ಇದ್ದರೆ ರೈಲ್ವೆ ಮೇಲ್ಸೇತುವೆ ದ್ವಿಪಥ ಬಿಎಸ್ಆರ್ಪಿ ಮೂರೂ ಯೋಜನೆಗಳೂ ಪ್ರಗತಿ ಸಾಧಿಸುವುದಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.