ಬೆಂಗಳೂರು: ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಭಾರತೀಯ ಮಹಾ ಲೇಖಪಾಲರಿಂದ (ಸಿಎಜಿ) ಲೆಕ್ಕ ಪರಿಶೋಧನೆ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ನಿರ್ಧರಿಸಿದೆ.
ಜಮಖಂಡಿಯಲ್ಲಿ ನಡೆದ ಕಾರ್ಯಕಾರಿ ಸಮಿತಿಯ ತೀರ್ಮಾನಂತೆ ಈ ಬಗ್ಗೆ ಪರಿಷತ್ತು ಕ್ರಮ ಕೈಗೊಂಡಿದೆ. ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎಲ್ಲ ಖರ್ಚು–ವೆಚ್ಚಗಳು, 2023–24ನೇ ಸಾಲಿನಲ್ಲಿ ಕಸಾಪ ನಡೆಸಿದ ಹಣಕಾಸಿನ ವ್ಯವಹಾರದ ಬಗ್ಗೆ ಲೆಕ್ಕ ಪರಿಶೋಧನೆ ನಡೆಸಲಾಗುತ್ತದೆ. ಈ ಸಂಬಂಧ ಭಾರತೀಯ ಮಹಾ ಲೇಖಪಾಲರಿಗೆ ಪತ್ರ ಬರೆಯಲಾಗಿದೆ ಎಂದು ಕಸಾಪ ಮಾಧ್ಯಮ ವಿಭಾಗದ ಸಂಚಾಲಕ ಎನ್.ಎಸ್.ಶ್ರೀಧರ ಮೂರ್ತಿ ತಿಳಿಸಿದ್ದಾರೆ.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜತೆಗೂ ಚರ್ಚಿಸಿ ಅವರ ಒಪ್ಪಿಗೆ ಪಡೆಯಲಾಗಿದೆ. ಶೀಘ್ರವೇ ಲೆಕ್ಕ ಪರಿಶೋಧನೆ ನಡೆಯುವ ಸಾಧ್ಯತೆಯಿದೆ. ಈ ಲೆಕ್ಕ ಪರಿಶೋಧನೆಯಿಂದ ಆರ್ಥಿಕ ಪಾರದರ್ಶಕತೆಯನ್ನು ಪಡೆದು, ಪರಿಶುದ್ಧತೆಯ ಉನ್ನತ ಪರಂಪರೆಯನ್ನು ಮಂದುವರಿಸಲು ಕಾರ್ಯಕಾರಿಣಿ ತೀರ್ಮಾನಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.