ADVERTISEMENT

ಬೆಂಗಳೂರು: ಸರ್ಕಾರಿ ವ್ಯವಸ್ಥೆಯಡಿ ಐವಿಎಫ್ ಚಿಕಿತ್ಸೆ

ವರುಣ ಹೆಗಡೆ
Published 12 ಸೆಪ್ಟೆಂಬರ್ 2025, 1:20 IST
Last Updated 12 ಸೆಪ್ಟೆಂಬರ್ 2025, 1:20 IST
ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ
ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ   

ಬೆಂಗಳೂರು: ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಐವಿಎಫ್ (ಕೃತಕ ಗರ್ಭಧಾರಣೆ) ಚಿಕಿತ್ಸಾ ವೆಚ್ಚ ದುಬಾರಿ ಆಗಿರುವುದರಿಂದ, ಸರ್ಕಾರಿ ವ್ಯವಸ್ಥೆಯಡಿ ಐವಿಎಫ್ ಚಿಕಿತ್ಸಾ ಕೇಂದ್ರ ಪ್ರಾರಂಭಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇಲ್ಲಿನ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಎಬಿವಿಎಂಸಿಆರ್‌ಐ) ಈ ಕೇಂದ್ರ ತಲೆಯೆತ್ತಲಿದೆ. 

ಬದಲಾದ ಜೀವನಶೈಲಿಯಿಂದ ಜನರಲ್ಲಿ ಫಲವತ್ತತೆ ದರ ಕುಸಿಯುತ್ತಿದೆ. ಇದರಿಂದಾಗಿ ಐವಿಎಫ್ ಚಿಕಿತ್ಸೆಗೆ ಬೇಡಿಕೆ ಹೆಚ್ಚುತ್ತಿದೆ. ಆದರೆ, ಖಾಸಗಿ ಆಸ್ಪತ್ರೆಗಳಲ್ಲಿ ಈ ಚಿಕಿತ್ಸಾ ವೆಚ್ಚ ಭರಿಸುವುದು ಬಡ, ಮಧ್ಯಮ ವರ್ಗದವರಿಗೆ ಸವಾಲಾಗಿದೆ. ಆದ್ದರಿಂದ ಸರ್ಕಾರಿ ವ್ಯವಸ್ಥೆಯಡಿ ಐವಿಎಫ್ ಚಿಕಿತ್ಸೆ ಪ್ರಾರಂಭಿಸಲು ಸರ್ಕಾರ ಕ್ರಮ ಕೈಗೊಂಡಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಇರುವ ಎಬಿವಿಎಂಸಿಆರ್‌ಐನಲ್ಲಿ ಈ ಕೇಂದ್ರ ಸ್ಥಾಪಿಸಲಾಗುತ್ತಿದ್ದು, ಸಿವಿಲ್ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಮುಂದಿನ ಆರು ತಿಂಗಳಲ್ಲಿ ಈ ಕೇಂದ್ರ ಕಾರ್ಯಾರಂಭಿಸುವ ಸಾಧ್ಯತೆಯಿದೆ. 

ಈ ಕೇಂದ್ರವು ತಜ್ಞ ವೈದ್ಯರ ಕೊಠಡಿಗಳು, ಪ್ರಯೋಗಾಲಯ, ನೋಂದಣಿ ಕೌಂಟರ್‌, ಸಮಾಲೋಚನಾ ಕೊಠಡಿ ಸೇರಿ ವಿವಿಧ ವಿಭಾಗಗಳನ್ನು ಹೊಂದಲಿದೆ. ಡೇ ಕೇರ್‌ ಸೆಂಟರ್‌ನಂತೆ (ಹೊರರೋಗಿ ವಿಭಾಗ) ಕಾರ್ಯನಿರ್ವಹಿಸಲಿದೆ. ಐವಿಎಫ್‌ಗೆ ನಿಗದಿಪಡಿಸಲಾದ ಮಾನದಂಡದ ಅನುಸಾರ ಕೇಂದ್ರವನ್ನು ಸಜ್ಜುಗೊಳಿಸಲಾಗುತ್ತದೆ. ಬಳಿಕ ಸ್ತ್ರೀರೋಗ ತಜ್ಞರು ಒಳಗೊಂಡಂತೆ ಅಗತ್ಯ ವೈದ್ಯರು ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. 

ADVERTISEMENT

ದುಬಾರಿ ಚಿಕಿತ್ಸೆ: ಮಕ್ಕಳಾಗದೇ ಇರುವ ಮಹಿಳೆಯರ ಅಂಡಾಣು ಹಾಗೂ ಪುರುಷರ ವೀರ್ಯಾಣುವನ್ನು ಪ್ರಯೋಗಾಲಯದಲ್ಲಿ ಫಲವತ್ತಾಗಿಸಿ, ನಂತರ ಭ್ರೂಣವನ್ನು ಮಹಿಳೆಯ ಗರ್ಭಕ್ಕೆ ಸೇರಿಸುವ ಕಾರ್ಯವಿಧಾನವೇ ಐವಿಎಫ್. ಬಂಜೆತನದಿಂದ ಬಳಲುತ್ತಿರುವ ದಂಪತಿಗಳಿಗೆ ಮಕ್ಕಳನ್ನು ಹೊಂದಲು ಈ ತಂತ್ರಜ್ಞಾನ ವರದಾನವಾಗಿ ಪರಿಣಮಿಸಿದೆ. ಖಾಸಗಿ ಕ್ಲಿನಿಕ್‌ಗಳಲ್ಲಿ ಈ ಚಿಕಿತ್ಸೆಗೆ ₹1.5 ಲಕ್ಷದಿಂದ ₹ 5 ಲಕ್ಷದವರೆಗೆ ವೆಚ್ಚವಾಗಲಿದೆ. ಈ ಚಿಕಿತ್ಸೆ ಆರೋಗ್ಯ ವಿಮೆಗಳಡಿ ಸೇರ್ಪಡೆಯಾಗದಿರುವುದರಿಂದ, ಬಡ–ಮಧ್ಯಮ ವರ್ಗದವರಿಗೆ ಚಿಕಿತ್ಸಾ ವೆಚ್ಚ ಭರಿಸುವುದು ಕಷ್ಟಸಾಧ್ಯವಾಗಿದೆ. 

ಐವಿಎಫ್ ಚಿಕಿತ್ಸಾ ಕೇಂದ್ರ ಸ್ಥಾಪನೆಗೆ ಸಂಬಂಧಿಸಿದಂತೆ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಡಿ ಕಾರ್ಯನಿರ್ವಹಿಸುತ್ತಿರುವ ವಾಣಿವಿಲಾಸ ಆಸ್ಪತ್ರೆ, ಈ ಹಿಂದೆ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. 2023–24ನೇ ಸಾಲಿನ ಬಜೆಟ್‌ನಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಬೆಂಗಳೂರಿನಲ್ಲಿ ಐವಿಎಫ್ ಚಿಕಿತ್ಸಾ ಕೇಂದ್ರ ನಿರ್ಮಿಸುವುದಾಗಿ ಘೋಷಿಸಿತ್ತು. ಆದರೆ, ಪಕ್ಷ ಅಧಿಕಾರಕ್ಕೆ ಬರದಿರುವುದರಿಂದ ಈ ಘೋಷಣೆ ಕಾರ್ಯಗತವಾಗಿರಲಿಲ್ಲ. ಈಗ ಕಾಂಗ್ರೆಸ್ ನೇತೃತ್ವದ ಸರ್ಕಾರ ನಗರದಲ್ಲಿ ಈ ಕ್ಲಿನಿಕ್ ನಿರ್ಮಿಸುತ್ತಿದೆ. 

ಸಂಸ್ಥೆಯಲ್ಲಿ ಐವಿಎಫ್‌ ಚಿಕಿತ್ಸಾ ಕ್ಲಿನಿಕ್ ನಿರ್ಮಿಸಲಾಗುತ್ತಿದ್ದು ಆರು ತಿಂಗಳಲ್ಲಿ ಕಾರ್ಯಾರಂಭ ಮಾಡುವ ಸಾಧ್ಯತೆಯಿದೆ. ಬಳಿಕ ಚಿಕಿತ್ಸಾ ದರ ನಿಗದಿ ಮಾಡಲಾಗುತ್ತದೆ
- ಡಾ. ಮನೋಜ್ ಕುಮಾರ್ ಎಚ್.ವಿ, ಎಬಿವಿಎಂಸಿಆರ್‌ಐ ನಿರ್ದೇಶಕ ಮತ್ತು ಡೀನ್

ಎಬಿ–ಎಆರ್‌ಕೆಗೆ ಒಳಪಡದ ಚಿಕಿತ್ಸೆ

ಐವಿಎಫ್ ಚಿಕಿತ್ಸೆಯು ಸರ್ಕಾರಿ ಆರೋಗ್ಯ ವಿಮೆಯಾದ ‘ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ’ (ಎಬಿ–ಎಆರ್‌ಕೆ) ಯೋಜನೆಯಡಿ ಸೇರ್ಪಡೆಯಾಗಿಲ್ಲ. ಈ ಯೋಜನೆಯಡಿ ಮಂಡಿಚಿಪ್ಪು ಹಾಗೂ ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆ ಸೇರಿದಂತೆ 1650 ಚಿಕಿತ್ಸಾ ಪ್ಯಾಕೇಜ್‌ಗಳಿವೆ. ಆದರೆ ಐವಿಎಫ್‌ಗೆ ಸಂಬಂಧಿಸಿದ ಚಿಕಿತ್ಸೆಗಳು ಒಳಪಟ್ಟಿಲ್ಲ. ಆದ್ದರಿಂದ ಎಬಿವಿಎಂಸಿಆರ್‌ಐನಲ್ಲಿ ಚಿಕಿತ್ಸಾ ಕೇಂದ್ರ ಸಜ್ಜುಗೊಂಡ ಬಳಿಕ ವೈದ್ಯಕೀಯ ತಜ್ಞರ ಸಮಿತಿ ಕೈಗೆಟುಕುವ ದರ ನಿಗದಿಪಡಿಸಲಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.