ಬೆಂಗಳೂರು: ಪ್ರತ್ಯೇಕ ಹಿಂದುಳಿದ ಪಂಗಡ (ಬಿ.ಟಿ) ಸೃಷ್ಟಿಸಿ, ಅದರಲ್ಲಿ ಕರ್ನಾಟಕದ ಅಲೆಮಾರಿ ಮತ್ತು ಅರೆ–ಅಲೆಮಾರಿ ಸಮುದಾಯದ 46 ಜಾತಿಗಳನ್ನು ಸೇರಿಸಬೇಕೆಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಅಲೆಮಾರಿ ಮತ್ತು ಅರೆ–ಅಲೆಮಾರಿ ವಿಮುಕ್ತ ಬುಡಕಟ್ಟು ಸಮುದಾಯಗಳ ಮಹಾ ಒಕ್ಕೂಟ ಒತ್ತಾಯಿಸಿದೆ.
ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಕಾರ್ಯಾಧ್ಯಕ್ಷ ಸುನಿಲ್ ಕಾಂತ್ ಹೆಳವರ್, ‘ನಮ್ಮ ಸಮುದಾಯದವರಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿಗಳಿಗೆ ಸಿಗುತ್ತಿರುವ ಸರ್ಕಾರದ ಸೌಲಭ್ಯಗಳು ಸಿಗುತ್ತಿಲ್ಲ. ಅಲೆಮಾರಿ ಮತ್ತು ಅರೆ–ಅಲೆಮಾರಿ ಸಮುದಾಯದ 46 ಜಾತಿಗಳು ಪ್ರವರ್ಗ–1ರಲ್ಲಿ ಇದ್ದು, ಇಲ್ಲಿರುವ ಪ್ರಬಲ ಸಮುದಾಯಗಳೊಡನೆ ಸ್ಪರ್ಧಿಸಲಾಗದೇ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿದಿವೆ. ಆದ್ದರಿಂದ ಈ ಸಮುದಾಯಗಳಿಗೆ ಈ ಹಿಂದೆ ನೀಡಲಾಗಿದ್ದ ಹಿಂದುಳಿದ ಪಂಗಡದ ಸೌಲಭ್ಯ (ಬಿ.ಟಿ) ಸೇರಿಸಿ ಶೇ 3ರಷ್ಟು ಮಿಸಲಾತಿ ನೀಡಬೇಕು’ ಎಂದು ಆಗ್ರಹಿಸಿದರು.
ಒಕ್ಕೂಟದ ಅಧ್ಯಕ್ಷ ಶಿವಾನಂದ ಲಕ್ಷ್ಮಣ ಪಾಚಂಗಿ ಮಾತನಾಡಿ, ‘ಹಿಂದುಳಿದ ಅಲೆಮಾರಿ ಬುಡಕಟ್ಟುಗಳ ನಿಗಮಕ್ಕೆ ಬುಡಕಟ್ಟು ಸಮುದಾಯದವರನ್ನೇ ಅಧ್ಯಕ್ಷರನ್ನಾಗಿ ನೇಮಿಸಬೇಕು. ಅಲೆಮಾರಿ ನಿಗಮಕ್ಕೆ ಈ ಹಿಂದೆ ₹100 ಕೋಟಿ ಅನುದಾನ ಮೀಸಲಿಡಲಾಗಿತ್ತು. ಈ ವರ್ಷದಲ್ಲಿ ₹6 ಕೋಟಿ ಅನುದಾನ ಬಿಡುಗಡೆ ಮಾಡಿ ಅಲೆಮಾರಿ ಸಮುದಾಯಗಳಿಗೆ ರಾಜ್ಯ ಸರ್ಕಾರ ಅನ್ಯಾಯ ಮಾಡಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.