ADVERTISEMENT

ಜಿಬಿಎ: ಮಳೆನೀರು ಕಾಲುವೆ ಒತ್ತುವರಿ ತೆರವಿಗೆ ಹೈಕೋರ್ಟ್‌ ಆದೇಶ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 21:52 IST
Last Updated 2 ಮಾರ್ಚ್ 2026, 21:52 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಕನಕಪುರ ರಸ್ತೆ ಗುಬ್ಬಲಾಳ ಬಳಿಯ ಮಳೆ ನೀರು ಕಾಲುವೆಯನ್ನು ‘ಮಂತ್ರಿ ಟ್ರ್ಯಾಂಕ್ವಿಲ್‌ ಅಪಾರ್ಟ್‌ಮೆಂಟ್‌’ ಮತ್ತು ‘ರಾಯಲ್‌ ಪಾಮ್‌ ಅಪಾರ್ಟ್‌ಮೆಂಟ್‌’ಗಳು ಒತ್ತುವರಿ ಮಾಡಿರುವುದು ತಜ್ಞರ ಸಮಿತಿ ವರದಿಯಿಂದ ದೃಢಪಟ್ಟಿದ್ದು, 15 ದಿನಗಳ ಒಳಗಾಗಿ ಒತ್ತುವರಿ ತೆರವುಗೊಳಿಸಬೇಕು ಅಥವಾ ಮಳೆ ನೀರು ಸುಬ್ರಹ್ಮಣ್ಯಪುರ ಕೆರೆಗೆ ಸರಾಗವಾಗಿ ಹರಿದು ಹೋಗಲು ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಹೈಕೋರ್ಟ್‌ ಜಿಬಿಎಗೆ (ಗ್ರೇಟರ್ ಬೆಂಗಳೂರು ಪ್ರಾಧಿಕಾರ) ನಿರ್ದೇಶಿಸಿದೆ.

ಈ ಸಂಬಂಧ ಸಲ್ಲಿಸಲಾಗಿದ್ದ ಎರಡು ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್‌. ನಟರಾಜ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

‘ಸರ್ಕಾರ ರಚಿಸಿದ ತಜ್ಞರ ಸಮಿತಿಯು ಮಳೆ ನೀರು ಚರಂಡಿಗಳ ಒತ್ತುವರಿಯನ್ನು ದೃಢಪಡಿಸಿ ವರದಿ ನೀಡಿದೆ. ಹಾಗಾಗಿ, ಬೆಂಗಳೂರು ದಕ್ಷಿಣ ತಾಲ್ಲೂಕಿನ ಗುಬ್ಬಲಾಳ ಗ್ರಾಮದಲ್ಲಿ ಎರಡು ಅಪಾರ್ಟ್‌ಮೆಂಟ್‌ ಸಂಕೀರ್ಣಗಳಿರುವ ಭೂಮಿಯನ್ನು ಮರು ಪರಿಶೀಲನೆ ಮಾಡಬೇಕು. ಅರ್ಜಿದಾರರು ಮಳೆ ನೀರು ಕಾಲುವೆಗಳಿಗೆ ಪರ್ಯಾಯ ಜೋಡಣೆಯನ್ನು ಒದಗಿಸಿದರೆ, ಜಿಬಿಎ ಅದನ್ನು ಪರಿಶೀಲಿಸಬೇಕು ಮತ್ತು ಪಕ್ಕದ ಜಮೀನಿನ ಮಾಲೀಕರಿಗೆ ತೊಂದರೆಯಾಗದಂತೆ ಸುಬ್ರಹ್ಮಣ್ಯಪುರ ಕೆರೆಗೆ ನೀರು ಸರಾಗವಾಗಿ ಹರಿಯುವುದನ್ನು ಖಚಿತಪಡಿಸಿಕೊಳ್ಳಬೇಕು’ ಎಂದು ನ್ಯಾಯಪೀಠ ಆದೇಶಿಸಿದೆ.

ADVERTISEMENT

ಅರ್ಜಿದಾರರು ಹದಿನೈದು ದಿನಗಳಲ್ಲಿ ಪರ್ಯಾಯ ಜಾಗವನ್ನು ಪ್ರಸ್ತಾಪಿಸಲು ವಿಫಲವಾದರೆ, ತಜ್ಞರ ಸಮಿತಿಯ ವರದಿ ಪ್ರಕಾರ ಜಿಬಿಎ ಒತ್ತುವರಿ ತೆರವುಗೊಳಿಸಿ ಮಳೆ ನೀರು ಕಾಲುವೆಗಳನ್ನು ಪುನರ್ ಸ್ಥಾಪಿಸಬೇಕು’ ಎಂದು ನ್ಯಾಯಪೀಠ ವಿವರಿಸಿದೆ.

‘ಮಳೆ ನೀರು ಪುನರ್‌ ಸ್ಥಾಪನೆ ಹೆಸರಿನಲ್ಲಿ ಪಾಲಿಕೆ ಒತ್ತುವರಿ ತೆರವುಗೊಳಿಸದಂತೆ 2019ರಲ್ಲಿ ನಾವು ಸಲ್ಲಿಸಿರುವ ಮನವಿಯನ್ನು ಪರಿಗಣಿಸಲು ನಿರ್ದೇಶಿಸಬೇಕು’ ಎಂದು ರಾಯಲ್‌ ಪಾಮ್ಸ್ ನಿವಾಸಿಗಳ ಕಲ್ಯಾಣ ಸಂಘ ಹಾಗೂ 2014ರಲ್ಲಿ ಈ ಹಿಂದಿನ ಬಿಬಿಎಂಪಿ ನೀಡಿದ್ದ ನೋಟಿಸ್‌ ಪ್ರಶ್ನಿಸಿ ಮಂತ್ರಿ ಟ್ರ್ಯಾಂಕ್ವಿಲ್‌ ಅಪಾರ್ಟ್‌ಮೆಂಟ್‌ ಮಾಲೀಕರ ಸಂಘ ಮತ್ತು ಮಂತ್ರಿ ಡೆವಲಪರ್ಸ್ ಪ್ರೈವೇಟ್‌ ಲಿಮಿಟೆಡ್‌ ಜೊತೆಗೂಡಿ ಈ ಅರ್ಜಿ ಸಲ್ಲಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.