ಬೆಂಗಳೂರು: ಸಚಿವರ ಮಧ್ಯದಕಿತ್ತಾಟವೇ ಬೆಂಗಳೂರು ಅಭಿವೃದ್ಧಿಗೆ ಕಂಟಕವಾಗಿದೆ ಎಂದು ವಿಧಾನಪರಿಷತ್ತಿನ ಜೆಡಿಎಸ್ ಸದಸ್ಯ ಟಿ.ಎ. ಶರವಣ ಟೀಕಿಸಿದ್ದಾರೆ.
ಬೆಂಗಳೂರನ್ನು ಪ್ರತಿನಿಧಿಸುವ ಏಳು ಮಂತ್ರಿಗಳು ಏಳು ದಿಕ್ಕಿಗೆ ಮುಖ ಮಾಡಿ, ಸಮನ್ವಯದಿಂದ ಕೆಲಸವನ್ನೇ ಮಾಡದೇ ಬೆಂಗಳೂರು ದುರಂತಕ್ಕೆ ಕೊಡುಗೆ ನೀಡುತ್ತಿದ್ದಾರೆ. ಮಂತ್ರಿಗಳ ದಂಡೆ ಇದ್ದರೂ ಜನ ನರಳುತ್ತಿರುವುದು ವಿಷಾದಕರ ಎಂದು ಅವರು ಹೇಳಿದ್ದಾರೆ.
ಸ್ವಚ್ಛ ಹಾಗೂ ಸುಂದರ ಬೆಂಗಳೂರು, ಸಿಲಿಕಾನ್ ಸಿಟಿ ಎಂಬೆಲ್ಲ ಘೋಷಣೆಗಳು ಸಂಪೂರ್ಣ ಬೋಗಸ್ ಎನ್ನುವುದನ್ನು ಈ ಮಹಾಮಳೆ ಬಯಲು ಮಾಡಿದೆ. ಚುನಾಯಿತ ಪ್ರತಿನಿಧಿಗಳಿಲ್ಲದೇ ಇಲ್ಲದ ಮಹಾನಗರ ಪಾಲಿಕೆ, ಮಳೆಯಲ್ಲಿ ಬಡವರು, ಮಧ್ಯಮ ವರ್ಗದ ಬದುಕು ಕೊಚ್ಚಿ ಹೋಗುತ್ತಿದ್ದರೂ ಕುಂಭಕರ್ಣ ನಿದ್ದೆಗೆ ಶರಣಾದ ಆಧಿಕಾರಿಗಳು, ಇದು ಬೆಂಗಳೂರಿನ ದುರವಸ್ಥೆ ಅಲ್ಲ, ಮಹಾ ದುರಂತ ಎಂದು ಅವರು ಹೇಳಿದ್ದಾರೆ.
‘ಭೂಗಳ್ಳರು, ಅಕ್ರಮ ಲೇ ಔಟ್ ಕಳ್ಳರು, ಕೆರೆ ಕಬಳಿಕೆ ಕೇಡಿಗಳ ಪಡೆ ಬೆಂಗಳೂರಿನ ಈ ಸ್ಥಿತಿಗೆ ಕಾರಣ. ಬೆಂಗಳೂರು ಉಸ್ತುವಾರಿಯೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈ ಬಗ್ಗೆ ತನಿಖೆಗೆ ಆದೇಶ ಕೊಟ್ಟರೆ ಬಡಾವಣೆಗಳಿಗೆ ನೀರು ನುಗ್ಗುವ ರಹಸ್ಯ ಬಯಲಾಗುತ್ತದೆ’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.