ಡಿ.ಕೆ. ಸುರೇಶ್
ಬೆಂಗಳೂರು: ‘ಮೊಟ್ಟೆ ಎಸೆದ ಪ್ರಕರಣದಲ್ಲಿ ಶಾಸಕ ಮುನಿರತ್ನ ಅವರನ್ನು ಪರೀಕ್ಷೆ ಮಾಡಿದ್ದ ದೊಡ್ಡ ಡಾಕ್ಟರ್, ಕೂದಲು ಸುಟ್ಟಿದೆ ಎಂದಿದ್ದರು. ನಿನ್ನೆ ಅವರ ವಿಡಿಯೊದಲ್ಲಿ ಕೂದಲು ಇತ್ತು. ಅದು ಹೇಗೆ ವಾಪಸ್ ಬಂತು’ ಎಂದು ಸಂಸದ ಡಿ.ಕೆ. ಸುರೇಶ್ ಪ್ರಶ್ನಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುನಿರತ್ನ ಅವರು ಸಿ.ಟಿ. ರವಿ ಅವರನ್ನು ಭೇಟಿ ಮಾಡಿ ಅವರ ಮನೆಯಿಂದ ಹೊರಗೆ ಬಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದಾಗ ಅವರಿಗೆ ಕೂದಲು ಇತ್ತು. ತಲೆಗೆ ಟೋಪನ್ ಹಾಕಿದ್ದಾರೋ ಅಥವಾ ನಿಜವಾದ ಕೂದಲು ಇಟ್ಟುಕೊಂಡಿದ್ದಾರೋ ಪರೀಕ್ಷೆಯಾಗಲಿ’ ಎಂದು ಹೇಳಿದರು.
‘ಬಿಜೆಪಿ ಶಾಸಕರು, ನನ್ನ ಮೇಲೆ, ನನ್ನ ಸಹೋದರ ಹಾಗೂ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಕುಸುಮಾ ಹಾಗೂ ಅವರ ತಂದೆ ವಿರುದ್ಧ ನೇರ ಆರೋಪ ಮಾಡಿದ್ದಾರೆ. ಈ ವಿಡಿಯೊ ಅತ್ಯುತ್ತಮವಾಗಿ ಮೂಡಿ ಬಂದಿದೆ. ಆ್ಯಸಿಡ್ ದಾಳಿ ಎಂದ ಮೂರು ಸೆಕೆಂಡ್ನಲ್ಲಿ ಮೊಟ್ಟೆ ಎಸೆಯಲಾಗಿದೆ. ಚಿತ್ರಕಥೆ ತಿರುಚುವ ಕೆಲಸ ಮಾಡಿದ್ದ ನಿರ್ಮಾಪಕ ಮುನಿರತ್ನ, ಈಗ ತಾವೇ ನಟನೆಗೂ ಇಳಿದಿದ್ದಾರೆ. ಮುನಿರತ್ನ ಅಭಿನಯದ ‘ಆ್ಯಸಿಡ್ ಮೊಟ್ಟೆ’ ಸಿನಿಮಾವನ್ನು ನೂರು ದಿನ ಓಡಿಸಿ’ ಎಂದರು.
‘ಈ ಪ್ರಕರಣವನ್ನು ಸಿಬಿಐಗೆ ನೀಡಲಿ. ಅವರೇ ಗೃಹಮಂತ್ರಿಗೆ ಪತ್ರ ಬರೆದು ಎಸ್ಪಿಜಿ ಭದ್ರತೆಯನ್ನೇ ಪಡೆಯಲಿ. ಅವರ ಬಳಿಯಿದ್ದ ರಘು ಎಂಬ ಚಾಲಕ ಏನಾದ ಎಂದು ತಿಳಿಯಬೇಕಲ್ಲವೇ? ಮತ್ತೊಬ್ಬ ಮಲ್ಲತ್ತಹಳ್ಳಿ ರಂಜಿತ್ ಎಂಬ ಹುಡುಗನ ಕೈ- ಕಾಲು ಮುರಿಯಲಾಗಿದೆ. ಈ ಪ್ರಕರಣಗಳ ಬಗ್ಗೆಯೂ ಸಿಬಿಐ ತನಿಖೆಯಾಗಲಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.