ಕೆಂಗೇರಿ: ಯಶವಂತಪುರ ಕ್ಷೇತ್ರದ ಕೆಂಗೇರಿಯ ಗಣೇಶ ಆಟದ ಮೈದಾನದಲ್ಲಿ ಆಯೋಜನೆಗೊಂಡಿದ್ದ ಯುವ ದಸರಾ ಜನರ ಮನಸೂರೆಗೊಂಡಿತು.
ಕಾಲೇಜು ಯುವಕ ಯುವತಿಯರ ಮೈ ನವಿರೇಳಿಸುವ ನೃತ್ಯ, ಫ್ಯಾಷನ್ ಷೋ, ಎದೆ ಬಡಿತ ಹೆಚ್ಚಿಸುತ್ತಿದ್ದ ಸಂಗೀತದ ಅಬ್ಬರ ನೆರೆದಿದ್ದವರನ್ನು ನಿಂತಲ್ಲೇ ಕುಣಿಯುವಂತೆ ಮಾಡುವಲ್ಲಿ ಯಶಸ್ವಿಯಾಯಿತು.
ಕ್ಷೇತ್ರದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಜನ ಶಿಳ್ಳೆ ಚಪ್ಪಾಳೆ ಹಾಕಿ ಆನಂದಿಸಿದರು. ಎರಡು ದಿನ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಶನಿವಾರ ಸಂಜೆ 5ಕ್ಕೆ ಖ್ಯಾತ ಹಾಡುಗಾರ ರಘು ದೀಕ್ಷಿತ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಸಂಸ್ಕೃತಿ, ಸೌಂದರ್ಯ ಹಾಗೂ ಸಾಮರ್ಥ್ಯದ ಪರಿಕಲ್ಪನೆಯೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ವಿವಿಧ ಕ್ಷೇತ್ರದ ಸಾಧಕರು ಕಾರ್ಯಕ್ರಮದ ತೀರ್ಪುಗಾರರಾಗಿ ಆಗಮಿಸಲಿದ್ದು, ಕಾರ್ಯಕ್ರಮದ ವಿಜೇತರನ್ನು ಆಯ್ಕೆ ಮಾಡಲಿದ್ದಾರೆ. ವಿಜೇತರಿಗೆ ಯುವರಾಣಿ ಆಫ್ ಯಶವಂತಪುರ ಕ್ಷೇತ್ರ, ಯುವರಾಜ ಆಫ್ ಯಶವಂತಪುರ ಕ್ಷೇತ್ರ ಎಂಬ ಬಿರುದಿನೊಂದಿಗೆ. ನಗದು ಬಹುಮಾನ ನೀಡಲಾಗುವುದು ಎಂದು ಯಶವಂತಪುರ ಕ್ಷೇತ್ರ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದರು. ನಾಡದೇವಿ ಚಾಮುಂಡಿ, ಕ್ಷೇತ್ರ ಹಾಗೂ ಸಮಸ್ತ ರಾಜ್ಯದ ಜನರಿಗೆ ಒಳ್ಳೆಯದನ್ನು ಮಾಡಲಿ ಎಂದು ಹಾರೈಸಿದರು. ಇದೇ ವೇಳೆ ಮಂಜು ಮಾಸ್ಟರ್ ಅವರೊಂದಿಗೆ ಹಾಡೊಂದಕ್ಕೆ ಹೆಜ್ಜೆ ಹಾಕಿದ ಶಾಸಕರು ನೆರೆದಿದ್ದವರನ್ನು ರಂಜಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.