
ವಿಧಾನಸೌಧ
ಕೆಂಗೇರಿ: ‘ಕೆಂಗೇರಿ ಸಮುದಾಯ ಆರೋಗ್ಯ ಕೇಂದ್ರವನ್ನು ಕೆಳದರ್ಜೆಗೆ ಇಳಿಸದೇ ಹೆಚ್ಚಿನ ಸೌಲಭ್ಯ ಒದಗಿಸಬೇಕು’ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗವು ಸರ್ಕಾರಕ್ಕೆ ಸೂಚನೆ ನೀಡಿದೆ.
‘ಇಲ್ಲಿನ ವೈದ್ಯರನ್ನು ವರ್ಗ ಮಾಡಲಾಗುತ್ತಿದೆ. ಕೇಂದ್ರವನ್ನು ಪ್ರಾಥಮಿಕ ಆರೋಗ್ಯ ಕೇಂದ್ರವಾಗಿ ಪರಿವರ್ತಿಸಲಾಗುತ್ತಿದೆ. ಇದರಿಂದ 32 ಗ್ರಾಮಗಳ ನಾಗರಿಕರಿಗೆ, ಗರ್ಭಿಣಿಯರಿಗೆ ತೊಂದರೆಯಾಗಲಿದೆ’ ಎಂದು ಬಿ.ಎಂ.ಶಿವಕುಮಾರ್ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಪರಿಶೀಲನೆ ನಡೆಸಿದ ಮಾನವ ಹಕ್ಕು ಆಯೋಗ, ‘ಗೌರವಯುತ ಜೀವನಕ್ಕೆ ಆರೋಗ್ಯ ಸೇವೆ ಅನಿವಾರ್ಯ. ಆರೋಗ್ಯ ಸೇವೆ ಸರ್ಕಾರದ ಕರ್ತವ್ಯವಾಗಿದ್ದು, ಸೇವೆ ಕುಂಠಿತಗೊಳಿಸುವ ಕ್ರಮ ಸಂವಿಧಾನದ ಆಶಯಗಳಿಗೆ ವಿರುದ್ಧ. ಜತೆಗೆ ಮಾನವ ಹಕ್ಕುಗಳ ಉಲ್ಲಂಘನೆಗೆ ಸಮಾನವಾಗಿದೆ’ ಎಂದು ಅಭಿಪ್ರಾಯಪಟ್ಟಿದೆ.
‘ಕೇಂದ್ರದ ವೈದ್ಯರನ್ನು ವರ್ಗ ಮಾಡುವ ಸನ್ನಿವೇಶ ಬಂದಲ್ಲಿ, ಪರ್ಯಾಯವಾಗಿ ನುರಿತ ವೈದ್ಯಾಧಿಕಾರಿಗಳನ್ನು ಆರೋಗ್ಯ ಇಲಾಖೆ ನೇಮಿಸಬೇಕು. ಆಸ್ಪತ್ರೆಯಲ್ಲಿನ ವೈದ್ಯಕೀಯ ಹಾಗೂ ಮೂಲ ಸೌಲಭ್ಯಗಳನ್ನು ಹೆಚ್ಚಿಸಬೇಕು’ ಎಂದು ಆಯೋಗ ಸೂಚನೆ ನೀಡಿದೆ.
ಮೂಲ ಸೌಲಭ್ಯ ಕೊರತೆ ಸಂಬಂಧ ಜ.15 ರಂದು ‘ಬಾಣಂತಿಯರ ಊಟಕ್ಕೂ ಕತ್ತರಿ’ ಶೀರ್ಷಿಕೆಯಡಿ ಪ್ರಜಾವಾಣಿ ವರದಿ ಮಾಡಿತ್ತು.
ಮಾನವ ಹಕ್ಕುಗಳ ಆಯೋಗದದ ವರದಿಯಿಂದ ಗ್ರಾಮೀಣ ಜನತೆ ನಿಟ್ಟುಸಿರು ಬಿಡುವಂತಾಗಿದೆ. ಇಲ್ಲಿನ ಗರ್ಭಿಣಿ ಮಹಿಳೆಯರು ಪ್ರಸೂತಿಗಾಗಿ ಮತ್ತೊಂದು ಸರ್ಕಾರಿ ಆಸ್ಪತ್ರೆಗೆ ಅಲೆಯುವ ಸಂಕಷ್ಟಕ್ಕೆ ಮುಕ್ತಿ ದೊರಕಿದೆ.– ಬಿ.ಎಂ.ಶಿವಕುಮಾರ್, ದೂರುದಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.