ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಮೂತ್ರ ಪಿಂಡ ವೈಫಲ್ಯದಿಂದ ಬಳಲುತ್ತಿದ್ದ ಸ್ನೇಹಿತನ ಚಿಕಿತ್ಸೆಗಾಗಿ ಕೊಟ್ಟಿದ್ದ ಹಣ ವಾಪಸ್ ಕೇಳಿದ ವ್ಯಕ್ತಿಯನ್ನು ಅಪಹರಿಸಿ ಹಲ್ಲೆ ನಡೆಸಿರುವ ಘಟನೆ ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೋರಮಂಗಲ ನಿವಾಸಿ ಸಗಾಯ್ ರಾಜ್ ಅವರು ನೀಡಿದ ದೂರಿನ ಮೇರೆಗೆ ದೂರುದಾರನ ಸ್ನೇಹಿತ ಆನಂದ್ ಕುಮಾರ್, ಅವರ ಪುತ್ರ ಆಶೀಶ್, ಪುತ್ರಿ ಐಶ್ವರ್ಯ, ಪತ್ನಿ ಜ್ಯೋತಿ, ಸಂಬಂಧಿ ಅಕ್ಷಯ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.
‘2024ರ ಜುಲೈನಲ್ಲಿ ತಮ್ಮ ತಂದೆಗೆ ಮೂತ್ರಪಿಂಡ ಸಮಸ್ಯೆಯಾಗಿದೆ ಎಂದು ಆಶೀಸ್ ₹ 50 ಸಾವಿರ ತೆಗೆದುಕೊಂಡಿದ್ದ. ನಂತರ ಹಂತ ಹಂತವಾಗಿ ₹3 ಲಕ್ಷ ಅನ್ನು ಐಶ್ವರ್ಯ ಖಾತೆಗೆ ಹಾಕಲಾಗಿತ್ತು. ಕೆಲ ದಿನಗಳ ನಂತರ ಹಣ ವಾಪಸ್ ಕೇಳಿದಾಗ, ಅಷ್ಟೊಂದು ಹಣ ನೀಡಲು ಆಗುವುದಿಲ್ಲ. ಮನೆಯನ್ನು ಮಾರಾಟ ಮಾಡುವುದಾಗಿ ಕುಟುಂಬಸ್ಥರು ಹೇಳಿದ್ದರು. ಹೀಗಾಗಿ ಸಗಾಯರಾಜ್ ಆ ಮನೆಯನ್ನು ಮಂಜುನಾಥ ಎಂಬುವರಿಗೆ ₹2.30 ಕೋಟಿಗೆ ಖರೀದಿಸುವ ಮಾತುಕತೆ ನಡೆಸಿದ್ದರು. ಅದರಂತೆ ಮುಂಗಡವಾಗಿ ₹1.84 ಕೋಟಿ ನೀಡಿದ್ದರು. ಬಾಕಿ ಹಣ ನೋಂದಣಿ ಮಾಡಿದ ನಂತರ ನೀಡುವ ಒಪ್ಪಂದ ಮಾಡಿಕೊಂಡಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.
‘ಕೆಲ ದಿನಗಳ ನಂತರ ಮನೆ ದಾಖಲೆ ಪರಿಶೀಲನೆ ವೇಳೆ ಮನೆಯನ್ನು ಬ್ಯಾಂಕ್ನಲ್ಲಿ ಅಡಮಾನ ಇಟ್ಟಿರುವ ಬಗ್ಗೆ ಕೇಸ್ ನಡೆಯುತ್ತಿರುವುದು ಗೊತ್ತಾಗಿದೆ. ಅದರಿಂದ ಸಗಾಯ್ ರಾಜ್ ಮನೆ ಖರೀದಿ ವ್ಯವಹಾರ ಬೇಡ ಹಣ ವಾಪಸ್ ನೀಡುವಂತೆ ಕೇಳಿದ್ದ. ಅದಕ್ಕೆ ಆನಂದ್ ಕುಮಾರ್ ಅವರ ಕುಟುಂಬಸ್ಥರು ಮೂರು ತಿಂಗಳ ಕಾಲವಕಾಶ ಪಡೆದಿದ್ದರು. ಈ ಮಧ್ಯೆ ಫೆಬ್ರುವರಿ 12ರಂದು ಕೋರಮಂಗಲದ ಮಂಗಳ ಕಲ್ಯಾಣ ಮಂಟಪದ ಬಳಿ ಬೈಕ್ನಲ್ಲಿ ಹೋಗುತ್ತಿದ್ದ ಸಗಾಯರಾಜ್ರನ್ನು ಕಾರಿನಲ್ಲಿ ಬಂದ ಆರು ಜನ ಮುಸುಕುಧಾರಿಗಳು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಕೈ ಕಾಲು ಕಟ್ಟಿ ಹಲ್ಲೆ ನಡೆಸಿದ್ದಾರೆ. ಸಿಗರೇಟ್ನಿಂದ ಸುಟ್ಟು ಚಿತ್ರಹಿಂಸೆ ನೀಡಿದ್ದಾರೆ’ ಎಂದು ಹೇಳಿದರು.
‘ರಾತ್ರಿಯಿಡೀ ಕಾರಿನಲ್ಲಿ ಸುತ್ತಾಡಿಸಿ ಮರು ದಿನ ಬೆಳಗಿನ ಜಾವ ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ವೃತ್ತದ ಬಳಿ ಕರೆದುಕೊಂಡು ಬಂದಾಗ ಸಗಾಯರಾಜ್ ಕಾರಿನಲ್ಲಿ ಜೋರಾಗಿ ಕೂಗಿದ್ದಾರೆ. ಸ್ಥಳೀಯರು ಅವರನ್ನು ರಕ್ಷಿಸಿದ್ದಾರೆ. ಅಷ್ಟರಲ್ಲಿ ದುಷ್ಕರ್ಮಿಗಳು ಪರಾರಿಯಾಗಿದ್ದರು ಎಂದು ಸಗಾಯಾರಾಜ್ ದೂರಿನಲ್ಲಿ ಆರೋಪಿಸಿದ್ದಾರೆ.
ಘಟನೆ ನಡೆದು ಏಳು ತಿಂಗಳ ಬಳಿಕ ದೂರು ನೀಡಲಾಗಿದೆ. ಘಟನೆ ಸತ್ಯಾಸತ್ಯತೆ ಪರಿಶೀಲಿಸಲು ಎಲ್ಲಾ ಆಯಾಮದಿಂದ ತನಿಖೆ ನಡೆಸಲಾಗುತ್ತಿದೆ. ಪ್ರಾಥಮಿಕ ತನಿಖೆಯಲ್ಲಿ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.